ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿ ಎಸ್ಯುಸಿಐಸಿಯಿಂದ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜಾಸಾಬ್ ಅವರಿಗೆ ಮನವಿ ಸಲ್ಲಿಸಿದರು.
ಎಸ್ಯುಸಿಐನ ಸದಸ್ಯ ಪ್ರಮೋದ ಮಾತನಾಡಿ, “ಸುಮಾರು 25 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದೆವೆ. ಪಟ್ಟಿ ಸಿದ್ಧವಿದ್ದರೂ ಕೂಡ ಈವರೆಗೂ ಯಾವುದೇ ಬೆಳವಣಿಗೆ ಆಗಿಲ್ಲ. ಸರ್ಕಾರಿ ಜಮೀನಿನಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಇರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಜನರಿಗೆ ನಿವೇಶನ ಹಂಚಿಕೆ ಮಾಡಬೇಕು. ಈ ಹಿಂದೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸಮಸ್ಯೆ ಪರಿಹಾರವಾಗಬೇಕು. ಆದ್ದರಿಂದ ಶೀಘ್ರದಲ್ಲಿ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ಮಾತುಗಳನ್ನಾಡಿದರು.
ಈ ಸುದ್ದಿ ಓದಿದ್ದೀರಾ? ಸುಪ್ರೀಂ ಕೋರ್ಟ್ನ ಮುಂದಿನ ಸಿಜೆಐ ಬಿ ಆರ್ ಗವಾಯಿಯವರ ವಿಶೇಷತೆಗಳೇನು?
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಸದಸ್ಯರು “ಈ ಕುರಿತು ತುರ್ತು ಸಭೆ ಕರೆದು ಚರ್ಚಿಸಿ ಬಡವರಿಗೆ ಸಿಗಬೇಕಾದ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಎಸ್ಯುಸಿಐಸಿ(SUCIC) ಗ್ರಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎ ದೇವದಾಸ್, ಸದಸ್ಯರಾದ ಈ ಹನುಮಂತಪ್ಪ, ಜಗದೀಶ್ ನೇಮಕಲ್, ಫಲಾನುಭವಿ ಬಸಮ್ಮ, ಆಯೇಷಾ ಬೇಗಂ, ನಾಗಮ್ಮ, ಗೌರಮ್ಮ, ಗೌಸಿಯ ಬೇಗಂ, ಊರಿನ ಮುಖಂಡರಾದ ಹನುಮಂತಪ್ಪ, ದೊಡ್ಡಬಸಪ್ಪ ಸೇರಿದಂತೆ ಇತರರು ಇದ್ದರು.
