ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಜೆ.ಟಿ ಪೌಂಡೇಷನ್ ಅಧ್ಯಕ್ಷರೂ ಆದ ವಕೀಲ ಜೋಳದರಾಶಿ ತಿಮ್ಮಪ್ಪ ಅಭಿಪ್ರಾಯಪಟ್ಟರು.
ಬಳ್ಳಾರಿ ನಗರದ ಗುಗ್ಗರಹಟ್ಟಿಯ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಬಳ್ಳಾರಿ ವತಿಯಿಂದ ಹಮ್ಮಿಕೊಂಡಿದ್ದ “ನಮ್ಮ ಹಬ್ಬ” ಕಾರ್ಯಕ್ರಮದಡಿಯಲ್ಲಿ ನಡೆದ ತೊಗಲುಗೊಂಬೆ ಪ್ರದರ್ಶನ, ಜಾನಪದ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,
“ಈ ಹಿಂದೆ ತೊಗಲುಗೊಂಬೆ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಈಗ ಈ ಸಂಸ್ಕೃತಿ ನಶಿಸಿ ಹೋಗುವ ಹಂತ ತಲುಪಿದೆ. ಇದನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಅಲ್ಲದೆ, ಪ್ರಸ್ತುತ ದಿನ ಮಾನಗಳಲ್ಲಿ ಪೋಷಕರು ಮಕ್ಕಳ ಕುರಿತು ಕಾಳಜಿ ವಹಿಸಬೇಕು. ಮಕ್ಕಳಲ್ಲಿಯೂ ತೊಗಲುಗೊಂಬೆ, ಬಯಲಾಟಕದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅರಿವು ಮೂಡಿಸಬೇಕು. ಒಂದು ಕೋಣೆಯಲ್ಲಿ ಮೊಬೈಲ್ ಕೊಟ್ಟು ಕೂಡಿಸುವುದರಿಂದ ಮಕ್ಕಳ ಭವಿಷ್ಯವೂ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ಪಾಲಕ ಪೋಷಕರು ನಿಗಾ ವಹಿಸಬೇಕು” ಎಂದರು.

ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ್ ಮಾತನಾಡಿ, “ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸತತ ಪ್ರಯತ್ನ ಮತ್ತು ಶ್ರಮ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಹ ಜೀವನದಲ್ಲಿ ಯಶಸ್ಸು ಕಾಣಲು ಆಸಕ್ತಿ ಹಾಗೂ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ಸಮರ್ಪಕ ರಸಗೊಬ್ಬರ ಪೂರೈಕೆಗೆ ಪ್ರಾಂತ ರೈತ ಸಂಘ ಆಗ್ರಹ
‘ಬಾ ಮರಳಿ ಶಾಲೆಗೆ’ ತೊಗಲುಗೊಂಬೆ ಪ್ರದರ್ಶನ ನಡೆಯಿತು. ಎಸ್ ಆರ್ ಕೆ ಜಿಲಾನ್ ಭಾಷಾ, ಎರ್ರಿಸ್ವಾಮಿ ತೊಗಲುಗೊಂಬೆ ಕಲಾಮೇಳ ಟ್ರಸ್ಟ್ ಅಧ್ಯಕ್ಷ ವೈ, ಕೆ.ರಾಜಶೇಖರಗೌಡ, ಕು.ಪ್ರತಿಕ್ಷಾ ಮತ್ತು ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕು.ಕೆ.ನೇಹ, ಪ್ರಾರ್ಥನಾ. ಹಾಗೂ ಎರ್ರಿಸ್ವಾಮಿ ತೊಗಲಗೊಂಬೆ ಕಲಾಮೇಳ ಟ್ರಸ್ಟ್ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.