ಜನಪದ ಲೋಕದಲ್ಲಿ ಗರತಿಯ ಹಾಡು ಎಂಬುದು ಲೋಕ ಜನಜನಿತ, ಆದರೆ ಜನಪದ ಲೋಕವನ್ನೇ ಜೀವಂತವಾಗಿಟ್ಟ ದೇವದಾಸಿಯರ ಹಾಡು ಎಲ್ಲಿದೆ? ಇದೊಂದು ಸಾಹಿತ್ಯ ಲೋಕದ ಹಾಗೂ ರಂಗಭೂಮಿಯ ಬೇರು ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ರಂಗಭೂಮಿ ನಿರ್ದೇಶಕ ಮಹದೇವ ಹಡಪದ ಅಭಿಪ್ರಾಯಪಟ್ಟರು.
ಬಳ್ಳಾರಿ ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಸಂಗಂ ಕಥಾಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಕನ್ನಡ ರಂಗಭೂಮಿ ಮತ್ತು ನಾನು’ ಎಂಬ ವಿಶೇಷ ಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಜನಪದ ಸಾಹಿತ್ಯ ಲೋಕದಲ್ಲಿ ಸಂಕಲನ ಎಂಬುದು ಗರತಿಯ ಹಾಡನ್ನು ವೈಭವೀಕರಿಸಿದಷ್ಟು ದೇವದಾಸಿಯರ ಹಾಡನ್ನು ಮುನ್ನೆಲೆಗೆ ತಂದಿಲ್ಲ. ಇದನ್ನು ನೋಡಿದಾಗ ಜನಪದ ಲೋಕದಲ್ಲಿ ಹಾಗೂ ಸಾಹಿತ್ಯ ಲೋಕದಲ್ಲಿ ತಾರತಮ್ಯ ಇರುವುದು ಕಂಡುಬರುತ್ತದೆ. ಅಲೆಮಾರಿಗಳು ಜನಪದ ಕಲೆಯ ರೂವಾರಿಗಳಾಗಿದ್ದಾರೆ. ಅವರ ಕಲೆಯಾದ ತೊಗಲುಗೊಂಬೆಯಾಟ, ಸಿಳ್ಳೆಕ್ಯಾತರ ಆಟ, ಬೀದಿ ನಾಟಕ ಸೇರಿದಂತೆ ಹಲವು ಜನಪದ ಪ್ರಕಾರಗಳು ಸಾಹಿತ್ಯ ಮತ್ತು ಜನಪದ ಲೋಕದಲ್ಲಿ ಪ್ರಸ್ತಾಪವೇ ಇಲ್ಲ. ಶಿಷ್ಟ ಸಾಹಿತ್ಯದಲ್ಲಿ ಗರತಿಯ ಹಾಡು ಎಂಬುದನ್ನು ಅತ್ಯಂತ ವೈಭವೀಕರಣದಿಂದ ನೋಡಲಾಗಿದೆ. ಹೀಗಾದಲ್ಲಿ ಜನಪದ ಸಾಹಿತ್ಯದ ಬೇರು ಎಂಬಂತೆ ಇರುವ ದೇವದಾಸಿಯರ ಹಾಡನ್ನು ಗುರುತಿಸುವವರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ಸಮಾಜದಲ್ಲಿ ಇನ್ನೂ ಅಸಮಾನತೆ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ
ಕಾರ್ಯಕ್ರಮದಲ್ಲಿ ಶಕೀಲ್ ಅಹ್ಮದ್, ಸಹನಾ ಪಿಂಜಾರ್, ಮಂಜು ಸಿರಿಗೇರಿ ವಿಷಯ ಮಂಡನೆ ಮಾಡಿದರು. ಸಂಗಮ್ ಪ್ರಧಾನ ಕಾರ್ಯದರ್ಶಿ ಡಾ. ಕೆ ಶಿವಲಿಂಗಪ್ಪ ಹಂದಿಹಾಳ್, ಖಜಾಂಚಿ ವೀರೇಂದ್ರ ರವಿಹಾಳ್, ಸದಸ್ಯ ಡಾ. ದಸ್ತಗಿರಿ ಸಾಬ್ ದಿನ್ನಿ ಹಾಗೂ ಇತರರು ಉಪಸ್ಥಿತರಿದ್ದರು.