ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್-2025ನಲ್ಲಿ ರಾಷ್ಟ್ರದ ಅತ್ಯಂತ ತುರ್ತು ಸಮಸ್ಯೆಗಳಾದ ನಿರುದ್ಯೋಗ, ಆರ್ಥಿಕ ಅಸಮಾನತೆಯ ಹೋಗಲಾಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕು ಘಟಕ ಡಿವೈಎಫ್ಐ ಜಿಲ್ಲಾ ಮುಖಂಡ ನಾಗಭೂಷಣ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸರ್ಕಾರವು ಜಿಡಿಪಿಯ ಶೇ.4.4ರಷ್ಟು ಆರ್ಥಿಕ ಕೊರತೆಯನ್ನು ಎತ್ತಿ ತೋರಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4.8ರಷ್ಟು ಕಡಿಮೆಯಾಗಿದೆ. ಸಾಲದ ಮೇಲಿನ ಭಾರೀ ಅವಲಂಬನೆಯು ಸಾಲದ ಸುಸ್ಥಿರತೆ ಮತ್ತು ಖಾಸಗಿ ಹೂಡಿಕೆಯನ್ನು ಕುಂಠಿತಗೊಳಿಸುವ ಬಗ್ಗೆ ಚಿಂತೆ ಹೆಚ್ಚಿಸುತ್ತದೆ. ಅಂತಿಮವಾಗಿ ಭವಿಷ್ಯದ ಪೀಳಿಗೆಗಳನ್ನು ಅಸುಸ್ಥಿರ ಹೊಣೆಗಾರಿಕೆಗಳೊಂದಿಗೆ ದೊಡ್ಡ ಹೊರೆಯಾಗಲಿದೆ” ಎಂದು ಹೇಳಿದರು.

“ಸರ್ಕಾರವು ಆರ್ಥಿಕ ವಿವೇಕ ಮತ್ತು ಬೆಳವಣಿಗೆಯ ಘೋಷಣೆಗಳನ್ನು ಮಾಡಿದರೂ, ಈ ಬಜೆಟ್ ದೇಶದ ಲಕ್ಷಾಂತರ ಯುವಜನರು, ಕಾರ್ಮಿಕರು ಮತ್ತು ಹಿಂದುಳಿದ ಸಮುದಾಯಗಳು ಎದುರಿಸುತ್ತಿರುವ ಕಠಿಣ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ” ಅಸಮಾಧಾನ ವ್ಯಕ್ತಪಡಿಸಿದರು.
“ಈ ಬಜೆಟ್ನ ಅತ್ಯಂತ ಗಂಭೀರವಾದ ನ್ಯೂನ್ಯತೆಯೆಂದರೆ ನಿರುದ್ಯೋಗದ ಬಗ್ಗೆ ಸಂಪೂರ್ಣ ಮೌನ ವಹಿಸಿರುವುದು. ಯುವಜನರಿಗೆ ಔಪಚಾರಿಕ ಉದ್ಯೋಗದ ಒದಗಿಸದಿರುವುದು. ನಿರುದ್ಯೋಗ ಮತ್ತು ಅಲ್ಪ ಉದ್ಯೋಗದ ಸಂಕಟವು ದೇಶದ ಯುವಜನರ ಭವಿಷ್ಯವನ್ನು ಅಂಧಕಾರಮಯಗೊಳಿಸುತ್ತಿದೆ” ಎಂದು ದೂರಿದರು.
“2025ರ ಕೇಂದ್ರ ಬಜೆಟ್ ಸರ್ಕಾರದ ಕಾರ್ಪೊರೇಟ್-ಪರ ಮತ್ತು ಜನ-ವಿರೋಧಿ ನೀತಿಗಳ ಇನ್ನೊಂದು ಉದಾಹರಣೆಯಾಗಿದೆ. ನಿರುದ್ಯೋಗ ಸಂಕಟವನ್ನು ಅಂಗೀಕರಿಸಲು ನಿರಾಕರಿಸುವುದು, ಆದಾಯ ಅಸಮಾನತೆಯನ್ನು ಪರಿಹರಿಸಲು ವಿಫಲವಾಗಿರುವುದು, ಕಾರ್ಮಿಕರು, ರೈತರು ಮತ್ತು ಮಹಿಳೆಯರ ಅಗತ್ಯಗಳನ್ನು ನಿರ್ಲಕ್ಷಿಸುವ ಮೂಲಕ, ಕೇಂದ್ರ ಸರ್ಕಾರವು ಮತ್ತೊಮ್ಮೆ ಜನರ ಕಲ್ಯಾಣಕ್ಕಿಂತ ಕಾರ್ಪೊರೇಟ್ ಲಾಭಗಳಿಗೆ ಆದ್ಯತೆ ನೀಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉಳ್ಳಾಲ | ಎಡಪಂಥೀಯರೇ ವಿವೇಕಾನಂದ ಚಿಂತನೆಯ ನಿಜ ವಾರಸುದಾರರು: ಚಿಂತಕ ಇಸ್ಮಾಯಿಲ್
“ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು, ಬಲವಾದ ಕಾರ್ಮಿಕ ಭದ್ರತೆ ಮತ್ತು ದೇಶದ ಶ್ರಮಿಕ ಜನರಿಗೆ ನ್ಯಾಯಯುತ ಹಾಗೂ ಸಮಾನ ಭವಿಷ್ಯವನ್ನು ಖಚಿತಪಡಿಸಲು ಸಾರ್ವಜನಿಕ ಸೇವೆಗಳಲ್ಲಿ ತುರ್ತಾಗಿ ಹೂಡಿಕೆಗಳನ್ನು ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಮುಖಂಡರಾದ ಶರೀಪ್, ಶಿವು, ಲೋಕೇಶ್ ಸೇರಿದಂತೆ ಇತರರು ಇದ್ದರು.