ಭಾನುವಾರ ಚಂದ್ರ ದರ್ಶನವಾದ ಹಿನ್ನೆಲೆ ಬೇಲೂರು ಕೇಂದ್ರ ಜಾಮಿಯಾ ಮಸೀದಿಯ ಗುರು ಸೈಯದ್ ಅಹಮದ್ ಅಶ್ರಫಿ ಸೋಮವಾರ ಈದುಲ್ ಫಿತರ್ ಆಚರಿಸುವುದಾಗಿ ಘೋಷಿಸಿದ್ದರು. ಹಾಗಾಗಿ ರಾಜ್ಯಾದ್ಯಂತ ರಂಝಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಒಂದು ತಿಂಗಳ ಉಪವಾಸ ತೊರೆದ ಮುಸ್ಲಿಮರು ಇಂದು ಬೆಳಿಗ್ಗೆ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ನಮಾಜ್ ಸಲ್ಲಿಸಿದರು ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಹಿರಿಯರು ಹೊಸ ಬಟ್ಟೆ ಧರಿಸಿ ಸಿಹಿ ಹಂಚಿ ಶುಭಕೋರಿ ವಿನಿಮಯ ಮಾಡಿಕೊಂಡರು.
ನೆರದಿದ್ದ ಭಕ್ತಾದಿಗಳಿಗೆ ಪ್ರವಚನ ನೀಡಿದ ಧರ್ಮಗುರುಗಳು ಮುಸ್ಲಿಮರಿಗೆ ಈ ರಂಝಾನ್ ತಿಂಗಳು ಪುಣ್ಯ ಪುನೀತ ತಿಂಗಳಾಗಿದೆ ರಂಝಾನ್ ತಿಂಗಳಲ್ಲಿ ಪ್ರಾಯ ಪೂರ್ತಿ ಹಾಗೂ ಬುದ್ಧಿ ಇರುವ ಸರ್ವ ಮುಸ್ಲಿಮರಿಗೂ ಪ್ರಾರ್ಥಕಾಲ ಮುಂಜಾನೆಯಿಂದ ಸೂರ್ಯಾಸ್ತದವರೆಗೆ ಉಪವಾಸ ವ್ರತ ಕಡ್ಡಾಯವಾಗಿದೆ. ಅಸೂಯೆ, ಅಹಂಕಾರ, ಲೋಭ, ಮದ-ಮತ್ಸರ, ಅಡಂಬರ, ಆಕ್ರಮ ಮುಂತಾದ ದುಷ್ಕೃತ್ಯಗಳಿಂದ ನಿತ್ಯ ಜೀವನದಲ್ಲೂ ನಿಷೇಧಿತವಾಗಿರುವಂತೆ ರಂಝಾನ್ ತಿಂಗಳಲ್ಲಿ ಪ್ರತ್ಯೇಕವಾಗಿ ಕಟ್ಟುನಿಟ್ಟಾಗಿ ವಿರೋಧಿಸುತ್ತದೆ.

ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಮಾತನಾಡಿ, “ಅಲ್ಲಾಹು ನಮಗೆ ಉಪವಾಸ ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಂಝಾನ್ ತಿಂಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ. ಪವಿತ್ರ ರಂಝಾನ್ ಹಬ್ಬವು ಕೇವಲ ಹೊಸಬಟ್ಟೆ ಸಂಭ್ರಮಾಚರಣೆಗೆ ಸೀಮಿತವಾಗದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದೇಶದಂತೆ ಬಡವರ ಪಾಲಿನ ಜಕಾತ್ ನೀಡುವುದರ ಜತೆಗೆ ನಿರ್ಗತಿಕ, ಅನಾಥ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಿಸಬೇಕು. ನಮ್ಮಸುತ್ತಮುತ್ತ ಇರುವ ಅನಾಥ ಮಕ್ಕಳಿಗೆ ಸಾಂತ್ವನವಾಗಬೇಕು. ಅನಾಥ ಮಕ್ಕಳ ಆಶಾಕಿರಣವಾಗಿ ಅವರ ಹೃದಯ ದಣಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ದರ್ಪದ ನೆರಳಲ್ಲಿ ‘ ಲೈನ್ ಮನೆ ‘ ಜೀತ
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ, ಸಬ್ ಇನ್ಸ್ಪೆಕ್ಟರ್ ಎಸ್ ಜೆ ಪಾಟೀಲ್, ಸಿಬ್ಬಂದಿಗಳಾದ ದೇವರಾಜ್ ಚೇತನ್, ನವೀನ್ ದೇವೇಂದ್ರ, ಕುಮಾರ್ ಹಾಗೂ ಇತರರು ಇದ್ದರು.