ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ದೂರು ದಾಖಲು ಮಾಡಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಇಡಿಗೆ ಚೈತ್ರಾ ಕುಂದಾಪುರ ದೂರು ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯಲು ಉದ್ಯಮಿ ಗೋವಿಂದ ಬಾಬು ಪೂಜಾರಿ ₹5 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗೋವಿಂದ ಬಾಬು ಪೂಜಾರಿ ಅವರು ₹5 ಕೋಟಿ ಹಣವನ್ನು ವಾಪಸ್ ನೀಡುವಂತೆ ಕೇಳಿದ ಬೆನ್ನಲ್ಲೇ ಆರೋಪಿ ಚೈತ್ರಾ ಕುಂದಾಪುರ ₹5 ಕೋಟಿ ಹಣದ ಬಗ್ಗೆ ತನಿಖೆ ನಡೆಸುವಂತೆ ಇಡಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಚುನಾವಣಾ ಟಿಕೆಟ್ಗಾಗಿ ಮಂಜುನಾಥ್ಗೆ ₹1 ಕೋಟಿ, ಅಭಿನವ ಹಾಲಶ್ರೀ ಸ್ವಾಮೀಜಿಗೆ ₹1.5 ಕೋಟಿ, ವಿಶ್ವನಾಥ್ ಜಿ ಅವರಿಗೆ ₹3 ಕೋಟಿ ಹಣ ನೀಡಿರೋದಾಗಿ ಗೋವಿಂದ ಬಾಬು ಅವರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಂದು ನಾನು ಗೋವಿಂದ ಬಾಬು ಪೂಜಾರಿ ಅವರಿಗೆ ತಿಳಿಸಿದ್ದೆ ಎಂದು ಚೈತ್ರಾ ಕುಂದಾಪುರ ಪತ್ರದಲ್ಲಿ ತಿಳಿಸಿದ್ದಾರೆ.
ಪೂಜಾರಿಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಸೂಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರ ಗೋವಿಂದ ಬಾಬು ಪೂಜಾರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.
ಸಿಸಿಬಿ ಪೊಲೀಸರು ಈಗಾಗಲೇ ವಿಜಯನಗರದ ನಿವಾಸ, ಕೆಕೆ ಗೆಸ್ಟ್ ಹೌಸ್, ಗೋವಿಂದ ಬಾಬು ಪೂಜಾರಿ ಕಚೇರಿ ಸೇರಿ ಹಲವೆಡೆ ಮಹಜರು ನಡೆಸಿದ್ದಾರೆ. ಪೊಲೀಸರು ₹5 ಕೋಟಿ ಹಣದ ಹುಡುಕಾಟದಲ್ಲಿ ತೊಡಗಿದ್ದು, ಸಿಸಿಬಿ ಪೊಲೀಸರು ಇಲ್ಲಿಯವರೆಗೆ ₹3 ಕೋಟಿ ಮೌಲ್ಯದ ನಗದು, ಕಾರು ಜಪ್ತಿ, ಫಿಕ್ಸೆಡ್ ಡೆಪಾಸಿಟ್ ಹಣ, ಚಿನ್ನಾಭರಣ, ಸ್ಥಳೀಯ ಸೊಸೈಟಿಯಲ್ಲಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದೂರುದಾರ ಗೋವಿಂದ ಬಾಬು ಪೂಜಾರಿ ಹಣದ ಮಾಹಿತಿಯನ್ನು ತಿಳಿಸಬೇಕಿದೆ. ಇಲ್ಲದಿದ್ದರೆ, ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗೋವಿಂದ ಬಾಬು ಪೂಜಾರಿ ಅವರ ಹಣದ ವಿವರವನ್ನು ಸಿಸಿಬಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಅವರ ಆದಾಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಪ್ರಕರಣ ವಿಚಾರಣೆ ದಿನವೇ ದೂರುದಾರ ಗೋವಿಂದ ಬಾಬು ಪೂಜಾರಿ ಅವರು, “ಆಸ್ತಿ ಮೇಲೆ ₹10 ಕೋಟಿ ಸಾಲ ಪಡೆದು ಅವರಿಗೆ ಕೊಟ್ಟಿದ್ದೇನೆ. ಹಂತ ಹಂತವಾಗಿ ಅವರಿಗೆ ನಗದು ಮತ್ತು ಡಿಡಿ ಮೂಲಕ ಚೈತ್ರಾ ಮತ್ತು ಇನ್ನಿತರರಿಗೆ ಹಣ ನೀಡಿದ್ದೇನೆ. ಈ ಬಗ್ಗೆ ಎಲ್ಲ ದಾಖಲೆಗಳನ್ನು ಸಿಸಿಬಿಗೆ ನೀಡಿದ್ದೇನೆ” ಎಂದು ಹೇಳಿದ್ದರು.
ಸದ್ಯ ಸಿಸಿಬಿ ಪೊಲೀಸರು, ಬ್ಯಾಂಕ್ನಿಂದ ಸಾಲ ಪಡೆದಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ನಗದು ರೂಪದಲ್ಲಿ ಹಣ ನೀಡಿರುವ ಹಿನ್ನೆಲೆ, ಈ ಎಲ್ಲ ಮಾಹಿತಿ ಅವಶ್ಯಕವಾಗಿದೆ.
ಈ ಸುದ್ದಿ ಓದಿದ್ದೀರಾ? ಹಬ್ಬಕ್ಕೆ ಖರೀದಿ ಜೋರು: ಕೋಮು ಸಂಘಟನೆಗಳಿಂದ ಹಲಾಲ್ ಮುಕ್ತ ಗಣೇಶೋತ್ಸವಕ್ಕೆ ಕರೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಚೈತ್ರಾ
ಸದ್ಯ ಆರೋಪಿ ಚೈತ್ರಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಮೂರನೇ ದಿನ ಬಾಯಿಯಲ್ಲಿ ನೊರೆಬಂದು ಆರೋಪಿ ಚೈತ್ರಾ ಕುಂದಾಪುರ ಏಕಾಏಕಿ ಅಸ್ವಸ್ಥರಾಗಿದ್ದರು. ಪೊಲೀಸರು ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆರೋಪಿ ಚೈತ್ರಾ ಕುಂದಾಪುರ ಅವರಿಗೆ ಫಿಟ್ಸ್ ಇರಬಹುದು ಎಂದು ಮೊದಲಿಗೆ ಹೇಳಲಾಗಿತ್ತು. ಬಳಿಕ ವೈದ್ಯರು ತಪಾಸಣೆ ಮಾಡಿದ ಮೇಲೆ ಯಾವುದೇ ಸಮಸ್ಯೆ ಇಲ್ಲ. ಎಲ್ಲ ರಿಪೋರ್ಟ್ಗಳು ನಾರ್ಮಲ್ ಆಗಿದೆ. ಫಿಟ್ಸ್ ಯಾವುದು ಇಲ್ಲ” ಎಂದು ಹೇಳಿದ್ದರು.
ಇದಾದ ಬಳಿಕ ಎದೆ ನೋವು ಎಂದು ಹೇಳಿ ಆರೋಪಿ ಚೈತ್ರಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿಗೆ ಕಾರ್ಡಿಯೋಲಜಿ ವಿಭಾಗದಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಚೈತ್ರಾ ಬಂಧನವಾದ ಬಳಿಕ ಸರಿಯಾಗಿ ಊಟ ಮಾಡದೆ, ದೇಹ ನಿತ್ರಾಣವಾಗಿ ಈ ರೀತಿ ಆಗಿರಬಹುದು ಎಂದು ಹೇಳಲಾಗಿದೆ.