- ಲೋಕಾಯುಕ್ತ ತನಿಖೆ ಆಧರಿಸಿ ಪ್ರಸೂತಿ ವೈದ್ಯ ರಾಮಚಂದ್ರ ವಿರುದ್ಧ ಕ್ರಮಕೈಗೊಂಡ ಆರೋಗ್ಯ ಇಲಾಖೆ
- ಬಡ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಮಾಡಲು ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ರಾಮಚಂದ್ರ
ಬೆಂಗಳೂರಿನ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಿಸೇರಿಯನ್ ಮಾಡಲು ₹10 ಸಾವಿರ ಲಂಚ ಪಡೆದಿದ್ದ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ರಾಮಚಂದ್ರರನ್ನು ಅಮಾನತುಗಳಿಸಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.
ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚ ಪಡೆದು ಚಿಕಿತ್ಸೆ ನೀಡುವುದು ಗಂಭೀರ ಪ್ರಕರಣವಾಗಿದ್ದು, ಲೋಕಾಯುಕ್ತ ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆ, ಕೂಡಲೇ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದರು.
ಲೋಕಾಯುಕ್ತ ತನಿಖೆ ಆಧರಿಸಿ ಪ್ರಸೂತಿ ವೈದ್ಯ ರಾಮಚಂದ್ರ ವಿರುದ್ಧ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ. ಇಲಾಖೆ ಈ ಕ್ರಮ ಕೈಗೊಂಡು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಂದ ಹಣ ವಸೂಲಿ ಮಾಡುವ ವೈದ್ಯರಿಗೆ ಎಚ್ಚರಿಕೆ ಸಂದೇಶ ನೀಡಿದೆ.
ಏನಿದು ಪ್ರಕರಣ ?
ಬೆಂಗಳೂರಿನ ಯಲಹಂಕದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಬಡ ಗರ್ಭಿಣಿ ಮಹಿಳೆಗೆ ಸಿಸೇರಿಯನ್ ಮಾಡಲು ವೈದ್ಯರು ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ರಾಮಚಂದ್ರ ಕೆ.ಸಿ ಎಂಬುವವರು ವಾರ್ಡ್ ಬಾಯ್ ಮೂಲಕ ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕುಟುಂಬದವರು ಚೌಕಾಸಿ ಮಾಡಿದ ಬಳಿಕ ₹11 ಸಾವಿರ ಪಡೆಯಲು ಒಪ್ಪಿಕೊಂಡಿದ್ದರು.
ಗರ್ಭಿಣಿ ಮಂಜುಳಾ(20) ಎಂಬ ಮಹಿಳೆಗೆ ಸಿಸೇರಿಯನ್ ಮಾಡಲು ವೈದ್ಯರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ಶನಿವಾರ ಮಂಜುಳಾ ಪತಿ ಅಂಗಪ್ಪ ದೂರು ನೀಡಿದ್ದರು. ಮಂಜುಳಾಗೆ ಸಿಸೇರಿಯನ್ ಆಗಿ ಹೆಣ್ಣು ಮಗು ಜನಿಸಿದ ಬಳಿಕ ಪತಿ ಅಂಗಪ್ಪ ₹10,000 ಹಣವನ್ನು ವೈದ್ಯ ರಾಮಚಂದ್ರ ಕೆ.ಸಿ ಸೂಚನೆ ಮೇರೆಗೆ ಆಸ್ಪತ್ರೆಯ ವಾರ್ಡ್ ಬಾಯ್ ವಾಹಿದ್ ಎಂಬುವವರಿಗೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಲೋಕಾಯುಕ್ತ ತನಿಖೆಯಿಂದ ಯಲಹಂಕ ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರ ಬಯಲು
ಆಸ್ಪತ್ರೆಯ ವಾರ್ಡ್ಬಾಯ್ ಲೋಕಾಯುಕ್ತ ಪೊಲೀಸರ ಎದುರು ಹಣ ಪಡೆದಿರುವ ಬಗ್ಗೆ ಒಪ್ಪಿಕೊಂಡಿದ್ದನು. ನಂತರ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ರಾಮಚಂದ್ರ ಜತೆ ವಾರ್ಡ್ ಬಾಯ್ ಹಣ ಪಡೆದಿರುವ ಬಗ್ಗೆ ತನಿಖಾ ತಂಡದ ಎದುರು ಮೊಬೈಲ್ನಲ್ಲಿ ಮಾತನಾಡಿದ್ದರು.
ವೈದ್ಯರ ವಿರುದ್ಧ ಸು-ಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.