- ಅಮಾಯಕರ ಸಾವಿಗೆ ಹಿಂದಿನ ಬಿಜೆಪಿ ಸರ್ಕಾರವೇ ನೇರ ಹೊಣೆ
- ವಾಹನ ಚಾಲಕರಿಗೆ ಆಪ್ನಿಂದ ಜಾಗರೂಕತೆಯಿಂದ ಚಲಿಸಿ ಎಂಬ ಸಂದೇಶ
“ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಕಳೆದ 9 ತಿಂಗಳಿನಲ್ಲಿ 165ಕ್ಕೂ ಹೆಚ್ಚು ಅಮಾಯಕ ಚಾಲಕರು ಮತ್ತು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ₹10 ಸಾವಿರ ಕೋಟಿ ಖರ್ಚು ಮಾಡಿ ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿದ್ದಾರೆ” ಎಂದು ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಕಣಮಣಿಕೆ ಟೋಲ್ ಪ್ಲಾಜಾ ಬಳಿ ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ‘ಸಾವಿನ ರಹದಾರಿ’ ಅಭಿಯಾನ ನಡೆಸಿದರು. ಜತೆಗೆ ವಾಹನ ಚಲಾಯಿಸುವವರಿಗೆ ಕರಪತ್ರ ನೀಡುವ ಮೂಲಕ ಜಾಗರೂಕತೆಯಿಂದ ಚಲಿಸಿ, ಪ್ರಾಣವನ್ನು ಉಳಿಸಿಕೊಳ್ಳಿ ಎಂಬ ಸಂದೇಶವನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, “ಭ್ರಷ್ಟಾಚಾರದಿಂದ ಕೂಡಿರುವ ಇಂತಹ ಹೆದ್ದಾರಿಗಳು ದೇಶಕ್ಕೆ ಅಪಮಾನಕಾರಿ ಸಂಗತಿ. ಸ್ವಾಧೀನ ಪ್ರಕ್ರಿಯೆಯಲ್ಲಿ ಸಂಪೂರ್ಣ ಭ್ರಷ್ಟಾಚಾರವಾಗಿದ್ದು, ಈ ಹಿಂದಿನ ಬಿಜೆಪಿ ಸರ್ಕಾರವು ಸಂಪೂರ್ಣ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಈಗಿನ ಕಾಂಗ್ರೆಸ್ ಸರ್ಕಾರವು ಸೂಕ್ತ ತನಿಖೆ ನಡೆಸಿ ಹೆದ್ದಾರಿ ಸರಿಪಡಿಸಬೇಕು” ಎಂದು ತಿಳಿಸಿದರು.
“ಸರ್ಕಾರವೇ ಈ ಹೆದ್ದಾರಿಯ ಟೋಲ್ ಸಂಗ್ರಹ ಮಾಡಬಾರದೆಂದು ತಿಳಿಸಿದ್ದರೂ, ಸಹ ಜುಲೈ ಒಂದರಿಂದ ಶ್ರೀರಂಗಪಟ್ಟಣದಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಿರುವುದು ಭಾರತೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದುರ್ನಡತೆಗೆ ಸಾಕ್ಷಿ. ರಾಜ್ಯ ಕಾಂಗ್ರೆಸ್ ಸರ್ಕಾರವು ಸೂಕ್ತ ಆದೇಶವನ್ನು ನೀಡಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಜು.2ರಂದು ಎರಡು ಗಂಟೆ ಅವಧಿಗೆ ವಾಣಿಜ್ಯ ಸೇವೆ ತಾತ್ಕಾಲಿಕ ಸ್ಥಗಿತ
ಅಭಿಯಾನದಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು, ಉಪಾಧ್ಯಕ್ಷ ಸುರೇಶ್ ರಾಥೋಡ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.