- ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಶೇ. 60 ಆಗಬೇಕೆಂಬ ಉದ್ದೇಶವಿದೆ ಎಂದ ಜಯರಾಮ್ ರಾಯಪುರ
- ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದು, ಅವರಿಗೆ ಮತದಾನ ಮಾಡಲು ಜಾಗೃತಿ ಮೂಡಿಸುವುದು
ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ತಕ್ಕಂತೆ ತಯಾರಿ ನಡೆಸಿರುವ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ನಗರದೆಲ್ಲೆಡೆ ಸಂಚರಿಸಿ, ಕಾರ್ಯಕ್ರಮಗಳನ್ನು ಆಯೋಜಿಸಿ ನಗರದ ನಾಗರಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದರಂತೆಯೇ ಶುಕ್ರವಾರ ಲಾಲ್ಬಾಗ್ಗೆ ಬರುವ ವಾಯುವಿಹಾರಿಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ದಕ್ಷಿಣ ವಲಯದ ಲಾಲ್ಬಾಗ್ ಪೂರ್ವ ದ್ವಾರದ ಬಳಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥ ಕಾರ್ಯಕ್ರಮಕ್ಕೆ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, “ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಶೇ. 52 ರಷ್ಟಿದ್ದು, ಇದು ಶೇ. 60 ಆಗಬೇಕೆಂಬ ಉದ್ದೇಶದಿಂದ ಸಾಕಷ್ಟು ಮತದಾರರ ಜಾಗೃತಿ ಅಭಿಯಾನಗಳನ್ನು ಮಾಡಲಾಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು” ಎಂದರು.
“ದಕ್ಷಿಣ ವಲಯದ ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದು, ಕಾಲೇಜಿಗೆ ತೆರಳಿ ಮತದಾನದ ದಿನ ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಮೇ 10 ರವರೆಗೂ ಎಲ್ಲ ಕಾಲೇಜು, ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.
ಲಾಲ್ ಬಾಗ್ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಬಂದಂತಹ ನಾಗರಿಕರಲ್ಲಿ ಮೇ 10 ರಂದು ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಜತೆಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆ, ಹಾಸ್ಯ ನಟರಾದ ರಮಾನಂದರ ಗೆಜ್ಜೆ ಹೆಜ್ಜೆ ರಂಗತಂಡದಿಂದ ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಈ ವೇಳೆ ವಲಯ ಜಂಟಿ ಆಯುಕ್ತ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ಜಗದೀಶ್ ಕೆ. ನಾಯಕ್, ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ್, ಉಪ ಆಯುಕ್ತರಾದ ಲಕ್ಷ್ಮೀ ದೇವಿ, ಕಂದಾಯ ಅಧಿಕಾರಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.