ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆಗೆ ತಕ್ಕಂತೆ ಸಾರ್ವಜನಿಕ ಶೌಚಾಲಯಗಳಿಲ್ಲ. ಜತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸಂಪೂರ್ಣ ವಿಫಲವಾಗಿದೆ ಎಂದು ಈ ಹಿಂದೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ, ಪಾಲಿಕೆ ವರ್ಷಕ್ಕೆ 2.6 ಕೋಟಿ ವೆಚ್ಚದಲ್ಲಿ ಒಟ್ಟು 203 ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆಗೆ ನೀಡುವ ಯೋಜನೆಯನ್ನು ರೂಪಿಸಿದೆ.
ಬೆಂಗಳೂರಿನಲ್ಲಿರುವ ಬಹುತೇಕ ಶೌಚಾಲಯಗಳಲ್ಲಿ ಶುಚಿತ್ವದ ಕೊರತೆ ಇದೆ. ಬಿಬಿಎಂಪಿ ನಿರ್ಮಿಸಿದ 169 ಇ-ಶೌಚಾಲಯಗಳು ಸೇರಿದಂತೆ 203 ಶೌಚಾಲಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶೌಚಾಲಯಗಳು ಪತ್ತೆಯಾಗಿಲ್ಲ ಹಾಗೂ ಪಾಲಿಕೆ ವೆಬ್ಸೈಟ್ನಲ್ಲಿ ಪ್ರಕಟಿಸಲಾದ ಕೆಲವು ಶೌಚಾಲಯಗಳ ಸ್ಥಳವೂ ತಪ್ಪಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.
ಬಿಬಿಎಂಪಿಯು ₹19.31 ಕೋಟಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಿಸಿದೆ. ಶೌಚಾಲಯ ನಿರ್ಮಾಣ ಮಾಡಿರುವ ಸ್ಥಳಗಳಲ್ಲಿ ನಿರ್ವಹಣೆ ಕೊರತೆ ಇದೆ. ಜತೆಗೆ ನೈರ್ಮಲ್ಯದ ಕೊರತೆಯು ಹೆಚ್ಚಾಗಿದೆ. ಕೆಲವು ಇ-ಶೌಚಾಲಯಗಳನ್ನು ತೆಗೆದು ಹಾಕಿದ್ದರೆ, ಇನ್ನುಳಿದವು ಬಳಕೆಗೆ ಉಪಯೋಗವಿಲ್ಲದ ಶೌಚಾಲಯಗಳು ತುಂಬಿವೆ. ಅಂದರೆ, ನಿಷ್ಕ್ರಿಯವಾದ ಫ್ಲಶ್, ನೀರಿನ ಕೊರತೆ ಹಾಗೂ ಮುರಿದ ಬಾಗಿಲುಗಳು ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿವೆ.
ಸಾರ್ವಜನಿಕರಿಗೆ ನೈರ್ಮಲ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಜತೆಗೆ ಬಿಬಿಎಂಪಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನ್ಯಾಯಾಲಯ ಮೂರು ವಾರಗಳ ಕಾಲಾವಕಾಶ ನೀಡಿತ್ತು.
169 ಇ-ಶೌಚಾಲಯಗಳ ನಿರ್ವಹಣೆಯನ್ನು ಮೂರು ವರ್ಷಗಳವರೆಗೆ, 34 ಶೌಚಾಲಯಗಳ ನಿರ್ವಹಣೆಯನ್ನು ಎರಡು ವರ್ಷಗಳವರೆಗೆ ಹೊರಗುತ್ತಿಗೆ ನೀಡಲು ಪಾಲಿಕೆ ಯೋಜನೆ ರೂಪಿಸಿದೆ. ಖಾಸಗಿ ಏಜೆನ್ಸಿಗೆ ಬಿಬಿಎಂಪಿಯಿಂದಲೇ ನಿರ್ವಹಣಾ ವೆಚ್ಚವನ್ನು ನೀಡಲು ನಿರ್ಧರಿಸಿದೆ. ಶೌಚಾಲಯಗಳ ಮೇಲೆ ಯಾವುದೇ ಜಾಹೀರಾತು ಪ್ರಕಟಿಸುವ ಹಕ್ಕುಗಳನ್ನು ನೀಡಲಾಗುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ.
ನೈರ್ಮಲ್ಯದ ಕೊರತೆಯ ಹೊರತಾಗಿ, ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ನಗರದಲ್ಲಿ ಶೇ.90ಕ್ಕೂ ಹೆಚ್ಚು ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆಯಿದೆ. ಪ್ರಸ್ತುತ ಜನಸಂಖ್ಯೆಗೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ 20,000 ಕ್ಕೂ ಹೆಚ್ಚು ಮೂತ್ರಾಲಯಗಳು ಮತ್ತು 15,000 ಸಾರ್ವಜನಿಕ ಶೌಚಾಲಯಗಳು ಇರಬೇಕು. ಆದರೆ, ನಗರದಲ್ಲಿ ಶೇ 10ರಷ್ಟು ಮಾತ್ರ ಶೌಚಾಲಯ, ಮೂತ್ರಾಲಯಗಳಿದ್ದು, ಶೇ 90ರಷ್ಟು ಕೊರತೆ ಇದೆ.
ಬಿಬಿಎಂಪಿ ಹಲವು ಕಡೆಗಳಲ್ಲಿ ಉತ್ತಮವಾದ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೂ ಯಾವುದೇ ನಿರ್ವಹಣೆ ಇಲ್ಲದೆ ಹಾಳಾಗಿವೆ. ಈ ಕಾರಣ ಹಲವು ಶೌಚಾಲಯಗಳು ಜನರು ಬಳಸುವ ಸ್ಥಿತಿಯಲಿಲ್ಲ. ಶೌಚಾಲಯಗಳ ಸ್ವಚ್ಛತೆಗೆ ಬಿಬಿಎಂಪಿ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂದು ನಗರದ ನಾಗರಿಕರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ(ಎಸ್ಡಬ್ಲೂಎಮ್) ಹರೀಶ್ ಕುಮಾರ್, “ಈ ಪ್ರಕರಣವನ್ನು ನೋಡಿಕೊಳ್ಳುತ್ತಿದ್ದ ವಕೀಲ್ರೊಬ್ಬರು ಅಕಾಲಿಕವಾಗಿ ಮರಣ ಹೊಂದಿದ ಕಾರಣ ನ್ಯಾಯಾಲಯಕ್ಕೆ ಸರಿಯಾದ ವರದಿಯನ್ನು ನೀಡುವಲ್ಲಿ ವಿಫಲರಾಗಿದ್ದೇವೆ. ಈಗ ಶೌಚಾಲಯಗಳನ್ನು ನಿರ್ವಹಣೆ ಮಾಡಿರುವ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ವರದಿ ನೀಡಲಿದ್ದೇವೆ. ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ 800 ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಆದರೆ, ಪ್ರಸ್ತುತ ನಗರದಲ್ಲಿ 350 ಶೌಚಾಲಯಗಳಿವೆ. ಇನ್ನೂ ಶೌಚಾಲಯಗಳ ನಿರ್ಮಾಣ ಮಾಡುತ್ತೇವೆ. ಆದರೆ, ನಗರದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಹಾಗಾಗಿ ಈ ಬಗ್ಗೆ ಸಂಪೂರ್ಣ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸುತ್ತೇವೆ. ಸ್ವಚ್ಛ ಸರ್ವೇಕ್ಷಣಾ ನಗರದಲ್ಲಿರುವ ಶೌಚಾಲಯಗಳ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿದೆ. ಶೌಚಾಲಯಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ವರದಿ ನೀಡಿದೆ” ಎಂದು ತಿಳಿಸಿದರು.