ಕರ್ನಾಟಕ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಅಭಿಯಾನ ಆರಂಭಿಸಿದ್ದು, ಇದೀಗ ಜನಹಿತ/ಆಕರ್ಷಕ ಬೆಂಗಳೂರು ವಿಷಯಕ್ಕೆ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ್ ರಾಯಪುರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ), “ಬ್ರ್ಯಾಂಡ್ ಬೆಂಗಳೂರು ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಉತ್ತಮ ಆಡಳಿತ, ನಾಗರಿಕ ಕೇಂದ್ರಿತ ನೀತಿ, ಸೇವಾ ವಿತರಣೆ, ಭೂ-ಪ್ರಾದೇಶಿಕ ಯೋಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಪನ್ಮೂಲ ಹಂಚಿಕೆಯ ದೃಷ್ಟಿಯಿಂದ ಗಮನಹರಿಸಬೇಕಾದ ಏಳು ವಿಷಯಗಳನ್ನು ಗುರುತಿಸಲಾಗಿದೆ” ಎಂದು ಮಾಹಿತಿ ನೀಡಿದೆ.
“ಈ ಉಪಕ್ರಮದ ಭಾಗವಾಗಿ, ‘ಜನಹಿತ/ಆಕರ್ಷಕ ಬೆಂಗಳೂರು’ ವಿಷಯಕ್ಕೆ ವಿಶೇಷ ಆಯುಕ್ತ(ಹಣಕಾಸು) ಹಾಗೂ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ, ಬೆಂಗಳೂರಿನ ಶೈಕ್ಷಣಿಕ ಸಂಸ್ಥೆಯನ್ನು ಪಾಲುದಾರರಾಗಿ ಮಾಡಿದೆ” ಎಂದು ತಿಳಿಸಿದೆ.
“ಜನಹಿತ/ಆಕರ್ಷಕ ಬೆಂಗಳೂರು(ವೈಬ್ರೆಂಟ್ ಬೆಂಗಳೂರು) ಅನ್ನು ಸರಿಯಾದ ಅನುಕ್ರಮದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಯ ಅಡಿ ಒಂದು ಸಮಿತಿಯನ್ನು ರಚಿಸಿಕೊಳ್ಳಲಾಗಿದೆ” ಎಂದು ಜನಹಿತ/ಆಕರ್ಷಕ ಬೆಂಗಳೂರಿನ ನೋಡಲ್ ಅಧಿಕಾರಿ ಜಯರಾಮ್ ರಾಯಪುರ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಪೀಳಿಗೆಗಾಗಿ ಭವಿಷ್ಯದ ಬೆಂಗಳೂರು ನಿರ್ಮಾಣ : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
‘ವೈಬ್ರೆಂಟ್ ಬೆಂಗಳೂರು’ ಸಮಿತಿಗೆ ಸರ್ಕಾರ ಕೆಲವು ಅಂಶಗಳನ್ನು ಸೂಚಿಸಿದೆ. ಅವು ಇಂತಿವೆ:
- ಫ್ಲೈಓವರ್ಗಳ ಕೆಳಗಿರುವ ಜಾಗವನ್ನು ಜನರ ಅನುಕೂಲಕ್ಕಾಗಿ ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆ ಯೋಚಿಸಬೇಕು.
- ರಸ್ತೆಯ ಉದ್ದಕ್ಕೂ ಖಾಲಿ ಮೂಲೆ ಅಥವಾ ರಸ್ತೆಯ ಕೊನೆಯಲ್ಲಿ ಅಥವಾ ಬದಿಯಲ್ಲಿ ಸಣ್ಣ ತೆರೆದ ಜಾಗವನ್ನು ಕಾಂಕ್ರೀಟ್ ಬೆಂಚುಗಳನ್ನು ಹಾಕುವ ಮೂಲಕ ಜನರು ಕುಳಿತುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಸುಂದರಗೊಳಿಸಬೇಕು.
- ಬೆಂಗಳೂರು ನಗರದ ಗೋಡೆಗಳನ್ನು ನಗರದ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಬಿಂಬಿಸಲು ಕಲಾತ್ಮಕವಾಗಿ ಚಿತ್ರಿಸಬೇಕು. ಇದರಿಂದ ಗೋಡೆಗಳ ವಿರೂಪ ಕಾಣುವುದನ್ನು ತಪ್ಪಿಸಬಹುದು.
- ಬೆಂಗಳೂರು ನಗರದ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಲು ಮತ್ತು ಪ್ರದರ್ಶಿಸಲು ಸಾಂಸ್ಕೃತಿಕ ಉತ್ಸವಗಳನ್ನು ನಡೆಸಲು ಆಂಫಿ-ಥಿಯೇಟರ್ಗಳ ಅಗತ್ಯವಿದೆ.
- ಸಾರ್ವಜನಿಕ ಸದಸ್ಯರ ನಡುವೆ ಅನೌಪಚಾರಿಕ ಬೌದ್ಧಿಕ ಚರ್ಚೆ ನಡೆಸಲು ತೆರೆದ ಸ್ಥಳಗಳನ್ನು ಬಳಸಿಕೊಳ್ಳಬಹುದು.
- ಜನರ ಓದುವ ಹವ್ಯಾಸವನ್ನು ಹೆಚ್ಚಿಸಲು ಬಿಬಿಎಂಪಿ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ವಾಚನಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.