- ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಸೂಲಿ ಮಾಡುವುದೊಂದೇ ಈಗಿರುವ ಏಕೈಕ ಮಾರ್ಗ
- ಚುನಾವಣಾ ಅಕ್ರಮಗಳಿಗಾಗಿ ಖರ್ಚು ಮಾಡಿರುವ ಹಣವನ್ನು ವಸೂಲಿ ಮಾಡುವ ಧಾವಂತ
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ಎಗ್ಗಿಲ್ಲದ ವರ್ಗಾವಣೆ ದಂಧೆ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಮಂತ್ರಿ ಮಹೋದಯಗಳ ವರ್ಗಾವಣೆ ದಂಧೆ ನಿಜವೆಂಬುದು ಅವರದೇ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರ ಪತ್ರದಿಂದ ಸಾಬೀತಾಗುತ್ತಿದೆ. ಸರ್ಕಾರವು ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಅನುಮಾನ ಇದೆ” ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ನವರಿಗೆ ಕೇವಲ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಕಳ್ಳತನ ಮಾಡುವುದು ಗೊತ್ತಿದೆಯೇ ಹೊರತು, ಭ್ರಷ್ಟಾಚಾರ ಮುಕ್ತ ಸರ್ಕಾರ ಇದ್ದಲ್ಲಿ ಮಾತ್ರ ಈ ರೀತಿಯ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬಹುದು ಮತ್ತು ದೆಹಲಿ ಮಾದರಿಯ ಸಾಲ ಮುಕ್ತ ಬಜೆಟ್ಗಳನ್ನು ಘೋಷಿಸಬಹುದು ಎಂಬುದು ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದರು.
“ಚುನಾವಣಾ ಅಕ್ರಮಗಳಿಗಾಗಿ ಖರ್ಚು ಮಾಡಿರುವ ಹಣವನ್ನು ಕೂಡಲೇ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕೆಂಬ ಧಾವಂತ ಕಾಂಗ್ರೆಸ್ ಶಾಸಕರುಗಳಲ್ಲಿ ಇರುವುದು ಬಿ.ಆರ್.ಪಾಟೀಲ್ ಅವರ ಪತ್ರದಿಂದ ಸ್ಪಷ್ಟವಾಗುತ್ತಿದೆ ಎಂಬ ಅನುಮಾನ ರಾಜ್ಯದ ಜನತೆಯಲ್ಲಿ ಹಾಗೂ ನಮ್ಮಲ್ಲೂ ಕಾಡುತ್ತಿದೆ” ಎಂದರು.
“ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದಲ್ಲಿ ಯೋಜನೆಗಳಿಗಾಗಿ ಯಾವುದೇ ಹಣವಿಲ್ಲ. ಶಾಸಕರುಗಳಾರೂ ಅನುದಾನಕ್ಕಾಗಿ ಒತ್ತಾಯ ಮಾಡಬಾರದೆಂದು ಹೇಳುತ್ತಾರೆ. ಯೋಜನೆಗಳಲ್ಲಿ ಯಾವುದೇ ಕಮಿಷನ್ ಬಾರದ ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆಯೇ ಇವರಿಗೆ ಗಟ್ಟಿ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಸೂಲಿ ಮಾಡುವುದೊಂದೇ ಈಗಿರುವ ಏಕೈಕ ಮಾರ್ಗ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಗಳಿಂದಾಗಿ ಪರಿತಪಿಸುವುದು ಗ್ಯಾರಂಟಿ” ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಪೊಲೀಸ್ ಮಾಹಿತಿದಾರರ ಬಂಧನ
“ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಯಾರೊಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೆ ಅದಕ್ಕೆ ತದ್ವಿರುದ್ಧವಾಗಿ ಅವರ ಮಗ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ ಎಂಬ ಹೇಳಿಕೆ ನೀಡುತ್ತಿರುವುದು ದ್ವಂದ್ವದಿಂದ ಕೂಡಿದೆ. ಇಬ್ಬರು ಒಟ್ಟಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜನತೆಗೆ ಯಾರೊಂದಿಗೆ ಕೈಜೋಡಿಸುತ್ತೇವೆ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ” ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.