‘ನಮ್ಮ ಯಾತ್ರಿ’ ಆ್ಯಪ್ ಆರಂಭಗೊಂಡು 5 ತಿಂಗಳು 19 ದಿನ ಕಳೆದಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಸಂಪಾದನೆಯಲ್ಲಿ ಸೈ ಎನಿಸಿಕೊಂಡಿದ್ದ ‘ನಮ್ಮ ಯಾತ್ರಿ’ ಪ್ರಯಾಣಿಕರಿಂದ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ, ಆ್ಯಪ್ನಲ್ಲಿ ವಿಧಿಸಲಾಗುತ್ತಿರುವ ಅಧಿಕ ಶುಲ್ಕಗಳೇ ಕಾರಣ ಎನ್ನಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್ ಹಾವಳಿಯನ್ನು ತಡೆಯಲು ಆಟೋ ಚಾಲಕರೇ ಒಗ್ಗೂಡಿ ‘ನಮ್ಮ ಯಾತ್ರಿ’ ಆ್ಯಪ್ ರಚಿಸಿದರು. ಈ ಆ್ಯಪ್ ನಗರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಯಶಸ್ಸಿನ ಹಾದಿಯಲ್ಲಿ ದಾಪುಗಾಲಿಡುತ್ತಿದೆ.
ಓಲಾ, ಉಬರ್, ರ್ಯಾಪಿಡೋದಂತಹ ಅಗ್ರಿಗೇಟರ್ ಕಂಪನಿಗಳು ಆಟೋ ಸೇವೆಗೆ ವಿಧಿಸುತ್ತಿದ್ದ ದುಬಾರಿ ದರದಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದರು. ಜಿಎಸ್ಟಿ ಜತೆಗೆ ‘ಕನ್ವೀನಿಯನ್ಸ್’ ಶುಲ್ಕಗಳ ಹೆಸರಿನಲ್ಲಿ ಈ ಅಗ್ರಿಗೇಟರ್ ಕಂಪನಿಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು. ಇದರಿಂದ ಬೇಸತ್ತಿದ್ದ ಪ್ರಯಾಣಿಕರು ಮತ್ತು ಆಟೋ ಚಾಲಕರು ‘ನಮ್ಮ ಯಾತ್ರಿ’ ಕಡೆಗೆ ಮುಖ ಮಾಡಿದ್ದಾರೆ. ಆದರೆ, ಪ್ರಯಾಣಿಕರ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ‘ನಮ್ಮ ಯಾತ್ರಿ’ ಆ್ಯಪ್ ವಿಫಲವಾಗಿದೆ.
‘ನಮ್ಮ ಯಾತ್ರಿ’ ಆ್ಯಪ್ ಆರಂಭಗೊಂಡು 5 ತಿಂಗಳು 19 ದಿನ ಕಳೆದಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಸಂಪಾದನೆಯಲ್ಲಿ ಸೈ ಎನಿಸಿಕೊಂಡಿದ್ದ ‘ನಮ್ಮ ಯಾತ್ರಿ’ ಪ್ರಯಾಣಿಕರಿಂದ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ, ಆ್ಯಪ್ನಲ್ಲಿ ವಿಧಿಸಲಾಗುತ್ತಿರುವ ಅಧಿಕ ಶುಲ್ಕಗಳೇ ಕಾರಣ ಎನ್ನಲಾಗಿದೆ.
‘ನಮ್ಮ ಯಾತ್ರಿ’ ಆಟೋ ದರ ಹೇಳಿದ್ದೊಂದು – ಆಗಿದ್ದೊಂದು
ಜಿಲ್ಲಾಡಳಿತ ನಿಗದಿ ಮಾಡಿರುವ ದರದಂತೆ ಮೊದಲ ಎರಡು ಕಿಲೋ ಮೀಟರ್ಗೆ ₹30 ಮತ್ತು ನಂತರದ ಪ್ರತಿ ಕಿಲೋ ಮೀಟರ್ಗೆ ₹15 ದರದಲ್ಲಿ ಆಟೋ ರಿಕ್ಷಾ ಚಾಲನೆ ಮಾಡಲಾಗುತ್ತದೆ. ಆಟೋ ನಿಲ್ದಾಣದಿಂದ ಮನೆ ತನಕ ರಿಕ್ಷಾಗಳನ್ನು ತಂದು, ಪ್ರಯಾಣಿಕರ ಕರೆದೊಯ್ಯುವುದರಿಂದ ಪಿಕಪ್ ಶುಲ್ಕವಾಗಿ ₹10 ಹೆಚ್ಚುವರಿ ಪಡೆಯಲಾಗುತ್ತಿದೆ ಎಂದು ಆ್ಯಪ್ ಸಂಸ್ಥೆ ಹೇಳಿತ್ತು.
ಆದರೆ, ವಾಸ್ತವದಲ್ಲಿ ಕೋರಮಂಗಲದ ಬಳಿಯ ಈಜಿಪುರದ ಮಂಗಳ ಅಪಾರ್ಟ್ಮೆಂಟ್ನಿಂದ ಪ್ರಕಾಶನಗರದ ಮಸ್ಜೀದ್ ಈ ಆಶ್ರಫೀಯಾವರೆಗೂ ಸುಮಾರು 12 ಕೀಮೀ ದೂರವಾಗುತ್ತದೆ. ಸಾಮಾನ್ಯ ಆಟೋದಲ್ಲಿ ಈ ಮಾರ್ಗದಲ್ಲಿ ಪ್ರಯಾಣಿಸಿದರೇ, ಒಟ್ಟು ₹180 ದರವಾಗುತ್ತದೆ. ‘ನಮ್ಮ ಯಾತ್ರಿ’ ಆ್ಯಪ್ ಮೊದಲೇ ಹೇಳಿದಂತೆ ಪಿಕಪ್ ಶುಲ್ಕವಾಗಿ ₹10 ಹೆಚ್ಚುವರಿ ಪಡೆಯಲಾಗುತ್ತದೆ. ಆ ಮಾರ್ಗದಲ್ಲಿ ಕ್ರಮಿಸಿದರೇ ಒಟ್ಟು 12 ಕಿ.ಮೀಗೆ ₹190 ರಿಂದ ₹200 ಪ್ರಯಾಣದ ವೆಚ್ಚವಾಗಬೇಕಿತ್ತು. ಆದರೆ, ಪ್ರಯಾಣಿಕರಿಂದ ₹205, ₹223 ಹಾಗೂ ₹233 ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ. ಹೇಳಿದ್ದ ದರಕ್ಕಿಂತ ಹೆಚ್ಚಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸ್ವತಃ ನಮ್ಮ ಯಾತ್ರಿ ಪ್ರಯಾಣಿಕರೇ ಆರೋಪಿಸಿದ್ದಾರೆ.
‘ನಮ್ಮ ಯಾತ್ರಿ’ ಆ್ಯಪ್ನಲ್ಲಿ ಪ್ರಯಾಣಿಕರು ರೈಡ್ ಬುಕ್ ಮಾಡುವಾಗ, ಒಂದಕ್ಕಿಂತ ಅಧಿಕ ಬಾರಿ ರೈಡ್ ಕ್ಯಾನ್ಸಲ್ ಆಗುತ್ತಿದೆ. ಪ್ರಯಾಣಿಕರು ರೈಡ್ ಅನ್ನು ಕ್ಯಾನ್ಸಲ್ ಮಾಡದೇ ಇದ್ದರೂ, ಆಟೋ ಚಾಲಕರೇ ರೈಡ್ ಕ್ಯಾನ್ಸಲ್ ಮಾಡಿದರೂ ಅದರ ವೆಚ್ಚವನ್ನೂ ಪ್ರಯಾಣಿಕರ ಮರುದಿನದ ರೈಡ್ ಮೇಲೆ ಹೇರಲಾಗುತ್ತದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಮಾರ್ಗದಲ್ಲಿ ಬರುವ ಸಮಯದಲ್ಲಿ ಪ್ರತಿಭಟನೆ, ಟ್ರಾಫಿಕ್ ಅಥವಾ ಯಾವುದೇ ಕಾರ್ಯಕ್ರಮ ನಡೆಯುತ್ತಿದ್ದರೇ, ಅದರಿಂದ ಸಮಯ ವ್ಯರ್ಥವಾದರೇ ವೇಟಿಂಗ್ ಚಾರ್ಜ್ ಎಂದು ಪ್ರಯಾಣಿಕರ ಮೇಲೆ ಹೊರಿಸಲಾಗುತ್ತಿದೆ.
ಆದರೆ ಈ ಹೆಚ್ಚುವರಿ ಶುಲ್ಕಗಳ ಬಗ್ಗೆ ಯಾವುದೇ ದಾಖಲಾತಿ ಆ್ಯಪ್ನಲ್ಲಿ ಆಗುವುದಿಲ್ಲ. ಬದಲಾಗಿ ಮತ್ತೊಮ್ಮೆ ಆ್ಯಪ್ ಬಳಕೆ ಮಾಡಿದಾಗ, ಕೆಲವೊಮ್ಮೆ ಅಂತಿಮ ಶುಲ್ಕ ತೆರಬೇಕಾದಾಗ ನಿಗದಿಯಾಗಿ ತೋರಿಸಿರುವುದಕ್ಕಿಂತ ಹೆಚ್ಚು ಶುಲ್ಕವನ್ನು ಪ್ರಯಾಣಿಕರಿಗೆ ಹೇರಲಾಗುತ್ತದೆ. “ಪ್ರಯಾಣಕರ ಕುಂದು ಕೊರತೆ ಹೇಳಿಕೊಳ್ಳುವ ವಿಭಾಗವೂ ಇಲ್ಲ. ಆ್ಯಪ್ನ ಕಮೆಂಟ್ ವಿಭಾಗದಲ್ಲಿ ಅಭಿಪ್ರಾಯಗಳನ್ನು ತಿಳಿಸಿದರೆ, ಆ್ಯಪ್ನಲ್ಲಿ ಅದಕ್ಕೆ ಪ್ರತಿಕ್ರಿಯೆಯೂ ಸಿಗುವುದಿಲ್ಲ” ಎಂದು ಪ್ರಯಾಣಿಕರು ಹೇಳಿದ್ದಾರೆ.
‘ನಮ್ಮ ಯಾತ್ರಿ’ ಆ್ಯಪ್ ವಹಿವಾಟು
ನವೆಂಬರ್ 1ರಿಂದ ಅಧಿಕೃತವಾಗಿ ‘ನಮ್ಮ ಯಾತ್ರಿ’ ಆ್ಯಪ್ ಸೇವೆ ಆರಂಭವಾಗಿದೆ. ಆ್ಯಪ್ನಿಂದ ದೊರೆತ ಮಾಹಿತಿ ಪ್ರಕಾರ ಈವರೆಗೆ 6.52 ಲಕ್ಷ ಪ್ರಯಾಣಿಕರು ಈ ಆ್ಯಪ್ ಬಳಸುತ್ತಿದ್ದಾರೆ. 53 ಸಾವಿರಕ್ಕೂ ಹೆಚ್ಚು ಚಾಲಕರು ಈ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡಿದ್ದು, 10.61ಲಕ್ಷ ಟ್ರಿಪ್ಗಳನ್ನು ಚಾಲಕರು ನಿರ್ವಹಿಸಿದ್ದಾರೆ. ಇಲ್ಲಿಯವರೆಗೂ ₹16.71ಕೋಟಿ ಸಂಪಾದಿಸಿದೆ.
ನಿತ್ಯ ಸರಾಸರಿ 15 ಸಾವಿರಕ್ಕೂ ಹೆಚ್ಚು ಟ್ರಿಪ್ ನಿರ್ವಹಿಸಲಾಗುತ್ತಿದೆ. ಪ್ರತಿನಿತ್ಯ ₹17 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದೆ.
ಪ್ರಯಾಣಿಕರ ಸ್ನೇಹಿ ಆಗಬೇಕಿದೆ ‘ನಮ್ಮ ಯಾತ್ರಿ’
“ಮನೆಯಿಂದ ರೈಡ್ ಬುಕ್ ಮಾಡಿದರೇ ಕೆಲವು ಆಟೋ ಚಾಲಕರು ನೀಡಿದ ಲೋಕೇಶನವರೆಗೂ ಬರದೇ ಮುಖ್ಯ ರಸ್ತೆಯವರೆಗೂ ನಡೆದುಕೊಂಡು ಬನ್ನಿ ಎನ್ನುತ್ತಾರೆ. ನಡೆದು ಸಾಗಿದಾಗ ಪಿಕ್ಅಪ್ ಚಾರ್ಜ್ ಎಂದು ₹10 ಹೆಚ್ಚುವರಿ ಶುಲ್ಕ ತನ್ನಿಂತಾನಾಗೇ ಸೇರಿಕೊಂಡಿರುತ್ತದೆ. ಕಳೆದ ಒಂದೆರಡು ತಿಂಗಳಿಂದ ನಿತ್ಯವೂ ಇದೇ ದಾರಿಯಲ್ಲಿ ಪ್ರಯಾಣಿಸಿದರೂ, ದರದಲ್ಲಿ 10-30 ರೂಪಾಯಿವರೆಗೆ ಏರಿಳಿತ ಇದ್ದೇ ಇದೆ. ಈ ಬಗ್ಗೆ ಪ್ರತಿ ಬಾರಿ ಆ್ಯಪ್ನಲ್ಲಿ ದೂರು ನೀಡಲಾಗಿದೆ. ಆದರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಆ್ಯಪ್ ಸಂಪೂರ್ಣ ಆಟೋದವರಿಗೆ ನೆರವಾಗುವಂತೆ ರೂಪುಗೊಂಡಿದೆ. ಪ್ರಯಾಣಿಕ ಸ್ನೇಹಿಯಲ್ಲ” ಎಂದು ‘ನಮ್ಮ ಯಾತ್ರಿ’ ಆಟೋ ಪ್ರಯಾಣ ಮಾಡುವ ಪ್ರಭಾ ಈ ದಿನ.ಕಾಮ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ನಕಲಿ ನೇರ ನೇಮಕಾತಿ ಪ್ರಮಾಣ ಪತ್ರಗಳ ಹಾವಳಿ: ಬೆಸ್ಕಾಂನಿಂದ ದೂರು ದಾಖಲು
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ನಮ್ಮ ಯಾತ್ರಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, “ಆ ರೀತಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪ್ರಯಾಣಿಕರಿಗೆ ವಿಧಿಸುವುದಿಲ್ಲ. ನಮ್ಮ ಯಾತ್ರಿ ವೆಬ್ಸೈಟ್ನಲ್ಲಿ ಪ್ರತಿ ಟ್ರಿಪ್ ಹಾಗೂ ಹಣ ಗಳಿಸಿದ ಮಾಹಿತಿ ಸೇರಿದಂತೆ ಪ್ರತಿಯೊಂದು ಅಂಕಿ ಅಂಶ ಕಾಣಿಸುತ್ತದೆ” ಎಂದು ಸ್ಪಷ್ಟನೆ ನೀಡಿದರು.