- ಅರಗ ಜ್ಞಾನೇಂದ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ
ರಾಷ್ಟ್ರದ ದಲಿತ ನಾಯಕ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರ ದೇಹದ ಬಣ್ಣ, ರೂಪ, ಮುಖಭಾವಗಳ ಬಗ್ಗೆ ವ್ಯಂಗ್ಯ ಮಾಡಿರುವ ಅರಗ ಜ್ಞಾನೇಂದ್ರ ಅವರ ಮಾತುಗಳು ದುಃಖದ ಹಾಗೂ ಸಹಿಸದ ವಿಚಾರ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
“ಕುಲ ಕುಲವೆಂದು ಹೊಡೆದಾಡಬೇಡಿ ಎಂಬ ಕನಕದಾಸರ ನುಡಿಯಂತೆ ನಾವೆಲ್ಲರೂ ದೇಶದ ಅಸ್ಪೃಶ್ಯತೆಯನ್ನು ನಿವಾರಿಸುವ, ತೊಡೆದು ಹಾಕುವ , ಸರ್ವರಿಗೂ ಸಮ ಪಾಲು-ಸಮ ಬಾಳು ನೀಡುವ ಕಾಲಘಟ್ಟದಲ್ಲಿ ಇರುವಾಗ, ಮನಸ್ಮೃತಿಯ ಹರಿಕಾರರಂತೆ ಅರಗ ಜ್ಞಾನೇಂದ್ರ ಹೇಳಿಕೆ ಇವರ ಸಂಸ್ಕೃತಿಯನ್ನು ತೋರಿಸುತ್ತದೆ. ನಮ್ಮ ಸಂವಿಧಾನಕ್ಕೆ, ರಾಷ್ಟ್ರದ ದಲಿತ ಸಮುದಾಯಗಳಿಗೆ ಹಾಗೂ ಉತ್ತರ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ಯಾವುದೇ ಕಾರಣಕ್ಕೂ ಇವರ ಹೇಳಿಕೆ ಸಹಿಸಲು ಸಾಧ್ಯವಿಲ್ಲ ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿವಿ ಪುರಂನ ‘ತಿಂಡಿ ಬೀದಿ’ ರಸ್ತೆ ಅಭಿವೃದ್ಧಿ
“ಕಾಂಗ್ರೆಸ್ ಸರ್ಕಾರವು ಇವರ ಮೇಲೆ ಮೊಕದ್ದಮೆಯನ್ನು ಹಾಕಿ, ಇವರ ವಿರುದ್ಧ ಎಫ್ಐಆರ್ ಮಾಡಬೇಕಿದೆ. ಇವರ ಶಾಸಕತ್ವವನ್ನು ಅನೂರ್ಜಿತಗೊಳಿಸುವಂತಹ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಂಡಲ್ಲಿ ಮುಂದಿನ ದಿನಮಾನಗಳಲ್ಲಿ ಯಾರೂ ದಲಿತ ವರ್ಗಗಳನ್ನು ತುಚ್ಚವಾಗಿ ನೋಡುವುದು, ಮಾತನಾಡುವುದು ತಪ್ಪುತ್ತದೆ. ಸರ್ಕಾರ ಈ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಬೇಕೆಂದು” ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.