ಭಾನುವಾರ ಟ್ರಿನಿಟಿ ಮತ್ತು ಎಂ ಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ, ಎರಡು ಗಂಟೆಗಳ ಅವಧಿಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಟಿಸೆಲ್) ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, “ಜುಲೈ 2ರಂದು ಕಾಮಗಾರಿ ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ (ಎರಡು ಗಂಟೆಗಳ ಅವಧಿಗೆ) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ಹೇಳಿದೆ.
“ಕೆಂಗೇರಿ ಮತ್ತು ಎಂ.ಜಿ ರಸ್ತೆ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ವಿಭಾಗಗಳ ರೈಲುಗಳ ಸೇವೆಯು ಆಯಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 7 ಗಂಟೆಗೆ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿದೆ” ಎಂದಿದೆ.
“ನಮ್ಮ ಮೆಟ್ರೋ ಪಯಾಣಿಕರು ಸದರಿ ಆಗಿರುವ ಬದಲಾವಣೆಯನ್ನು ಗಮನಿಸಬೇಕೆಂದು ಕೋರಿದೆ. ಪ್ರಯಾಣಿಕರಿಗೆ ಇದರಿಂದಾಗುವ ಅನಾನುಕೂಲತೆಗೆ ವಿಷಾದಿಸಿದೆ” ಎಂದು ಹೇಳಿದೆ.