ಡಿ.26ರಂದು ‘ನೂರು ವಿದ್ಯುತ್ ಚಾಲಿತ’ ಬಸ್ಗಳ ಲೋಕಾರ್ಪಣೆ ಬೆಳಗ್ಗೆ 11 ಗಂಟೆಗೆ ವಿಧಾನ ಸೌಧದ ಪೂರ್ವದ್ವಾರದ ಮುಂಭಾಗ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ನಮ್ಮ ಫೆಡರೇಶನ್ಗೆ ಆಹ್ವಾನ ನೀಡಲಾಗಿದೆ. ಆದರೆ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ನೌಕರರ ಸಂಘಟನೆ ಅಧ್ಯಕ್ಷ ಅನಂತಸುಬ್ಬರಾವ್ ಬಹಿರಂಗ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
“ಆಹ್ವಾನ ಪತ್ರ ಕಳಿಸಿದ್ದಕ್ಕೆ ಧನ್ಯವಾದಗಳು. ಈ ಕಾರ್ಯಕ್ರಮ ಯಶಸ್ವಿಯಾಗಲಿ ಹಾಗೂ ಬಿಎಂಟಿಸಿ ತನ್ನ ಚಟುವಟಿಕೆಗಳನ್ನು ಇನ್ನೂ ಹೆಚ್ಚಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ಕೊಡಲು ಮುಂದಾಗಲಿ ಎಂದು ನಾವು ಹಾರೈಸುತ್ತೇವೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಸಾರಿಗೆ ಸಚಿವರು ಹಾಗೂ ಹಲವಾರು ಗಣ್ಯರು ಭಾಗವಹಿಸುವುದು ಬಹಳ ಸಂತೋಷದ ವಿಷಯವಾಗಿದೆ. ಈ ಗಣ್ಯರೆಲ್ಲರಿಗೂ ನಮ್ಮ ನಮನಗಳು” ಎಂದು ತಿಳಿಸಿದ್ದಾರೆ.
“ಆದರೆ ಕೆಲ ಕಾರಣಗಳಿಂದ ನಮ್ಮ ಫೆಡರೇಷನ್ ವತಿಯಿಂದ ನಾವು ಭಾಗವಹಿಸುತ್ತಿಲ್ಲ. ಏಕೆಂದರೆ, ಮೊದಲನೆಯದಾಗಿ ಸತ್ಯವತಿ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ತೆಗೆದುಕೊಂಡ ದಿನದಿಂದ ಈವರೆಗೂ ಒಮ್ಮೆಯಾದರೂ ಕಾರ್ಮಿಕ ಸಂಘಟನೆಗಳ ಜತೆ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಸಂಘ ವಿರೋಧಿಯಾದ ನಿಮಗೆ ನಾವು ಬೇಡದಿರುವುದರಿಂದ ನಿಮ್ಮ ಕಾರ್ಯಕ್ರಮಗಳೂ ನಮಗೆ ಬೇಡ” ಎಂದು ಹೇಳಿದ್ದಾರೆ.
“ನಿಮ್ಮ ಕಚೇರಿಗೆ ಯಾವುದೇ ನೌಕರರನ್ನು ಒಳಗೆ ಕರೆದು ಅವರ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಈವರೆಗೆ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ನಡೆಸುವುದಾಗಲಿ ಅಥವಾ ನಾವು ಬರೆದಿರುವ ಪತ್ರಗಳಿಗೆ ಜವಾಬು ಕೊಡುವ ಅಭ್ಯಾಸವಾಗಲಿ ನಿಮ್ಮಲ್ಲಿಲ್ಲ” ಎಂದು ಹೇಳಿದ್ದಾರೆ.
“ನಿಮ್ಮ ವೈಖರಿಯಲ್ಲಿ ಕಾರ್ಮಿಕರಿಗಾಗಲಿ ಸಂಘಟನೆಗಳಿಗಾಗಲಿ ಯಾವುದೇ ಗೌರವವನ್ನೂ ಕೊಟ್ಟಿಲ್ಲ. ಹಾಗೂ ನಿಮಗೆ ಕಾರ್ಮಿಕ ಸಂಘಗಳೊಡನೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೈಗಾರಿಕಾ ಶಾಂತಿ ಕಾಪಾಡಬೇಕೆನ್ನುವ ಮನೋಭಾವನೆ ಇಲ್ಲ ಎನ್ನುವುದು ನಮ್ಮ ಅನುಭವವಾಗಿದೆ. ಬಹುಶಃ ಈ ಹಿಂದಿನ ಪತ್ರವನ್ನು ಬೇರೆ ಯಾರೋ ಬರೆದು ನೀವು ಸಹಿ ಮಾಡಿದಂತಿದೆ” ಎಂದಿದ್ದಾರೆ.
“ನೀವು ಎಂಡಿಯಾಗಿ ಬಂದ ನಂತರ ನಿಮ್ಮ ಆಡಳಿತ ದರ್ಪವನ್ನು ಬಿಟ್ಟು ನೌಕರರ ಬೇರಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ನಿಮ್ಮ ಕೆಲವು ಸಮೀಪವರ್ತಿ ಅಧಿಕಾರಿಗಳನ್ನು ಬಿಟ್ಟರೆ ಬೇರೆಲ್ಲರೂ ಅಸಮಾಧಾನದಿಂದ ನಿಮ್ಮ ಕಾರ್ಯಕ್ಷಮತೆಯ ಬಗ್ಗೆ ಕುದಿಯುತ್ತಿದ್ದಾರೆ. ಡಿಪೋ ಮ್ಯಾನೇಜರ್ಗಳಿಂದ ಹಿಡಿದು ಎಲ್ಲ ಅಧಿಕಾರಿಗಳಿಗೂ ಮನಸೋ ಇಚ್ಛೆ ಕೀಳು ಮತ್ತು ಕೆಟ್ಟ ಭಾಷೆಯಲ್ಲಿ ನೀವು ಸಂಬೋಧಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಿಮ್ಮ ಇಂತಹ ವರ್ತನೆಗೆ ನಮ್ಮ ಧಿಕ್ಕಾರವಿರಲಿ!” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕಕ್ಕೆ ಲಗ್ಗೆಯಿಟ್ಟ ಜೆಎನ್ 1 : ಎಂಟು ಜನರಲ್ಲಿ ಪಾಸಿಟಿವ್
“ಸಂವಿಧಾನದತ್ತವಾಗಿ ಹಾಗೂ 1926ರಲ್ಲೇ ಬಂದಂತಹ ಇಂಡಿಯನ್ ಟ್ರೇಡ್ ಯೂನಿಯನ್ ಆಕ್ಟ್ ಪ್ರಕಾರ ನಮಗೆ ಕಾರ್ಮಿಕ ಸಂಘಗಳನ್ನು ರಚಿಸುವ ಹಕ್ಕಿದೆ. ನಮ್ಮ ಕರಪತ್ರವನ್ನು ನೌಕರರ ನಡುವೆ ಹಂಚಿದ್ದಕ್ಕಾಗಿ ರೆಗ್ಯುಲೇಷನ್ 23ರ ಪ್ರಕಾರ ವಿಚಾರಣೆ ನಡೆಸುತ್ತಿದ್ದೀರಿ. ಮಾಧ್ಯಮದೊಂದಿಗೆ ನ್ಯಾಯವಾಗಿ ಮಾತನಾಡಿದ್ದಕ್ಕೆ ಟ್ರೇಡ್ ಯೂನಿಯನ್ ಕಾರ್ಯಕರ್ತರನ್ನು ಅಮಾನತಿನಲ್ಲಿ ಇಟ್ಟಿದ್ದೀರಿ. ಕೈಗಾರಿಕಾ ಒಪ್ಪಂದಗಳನ್ನು ಉಲ್ಲಂಘಿಸಿ ಸೇಡಿನ ಮನೋಭಾವದಿಂದ ನೌಕರರನ್ನು ಕೆಲಸದಿಂದ ಅಮಾನತು ಮಾಡುತ್ತಿದ್ದೀರಿ. ಒಟ್ಟಾರೆ, ಬಿಎಂಟಿಸಿಯಲ್ಲಿ ಕೈಗಾರಿಕಾ ಬಾಂಧವ್ಯವನ್ನೇ ನಾಶ ಮಾಡುವ ಧೂಮಕೇತುವಿನಂತೆ ಕಾಣಿಸುತ್ತಿದ್ದೀರಿ. ಆದರೂ ನಿಮ್ಮಲ್ಲಿ ತಪ್ಪುಗಳನ್ನು ಕಂಡುಹಿಡಿಯುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
“ನಿಮ್ಮ ಹಿನ್ನೆಲೆಯನ್ನು ಗೊತ್ತಿರುವ ಸರ್ಕಾರ ಜನಪರವಾದ ಸಾರಿಗೆ ನಿಗಮದಂತಹ ಸೇವಾಸಂಸ್ಥೆಯ ಜವಾಬ್ದಾರಿಯನ್ನು ನಿಮಗೆ ಕೊಡಬಾರದಿತ್ತು. ಈಗಲೂ ಕೂಡ ಸರ್ಕಾರ ಬಿಎಂಟಿಸಿಯ ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸಲು ಮಾನವೀಯತೆ ಮತ್ತು ಹೃದಯವಂತಿಕೆ ಇರುವ ಒಬ್ಬ ಅಧಿಕಾರಿಯನ್ನು ನಿಮ್ಮ ಸ್ಥಳಕ್ಕೆ ಹಾಕಿ ಹಳಿ ತಪ್ಪಿರುವ ಬಿಎಂಟಿಸಿಯನ್ನು ಸರಿಪಡಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.