ಬೆಂಗಳೂರು: ‘ಪರಿಸರಕ್ಕಾಗಿ ನಾವು’ ಸಂಘಟನೆ ವತಿಯಿಂದ ಏಪ್ರಿಲ್ 6ರಂದು ‘ಪರಿಸರ ಪ್ರಣಾಳಿಕೆಗಾಗಿ ಬೆಂಗಳೂರು ಸಮಾವೇಶ’ವನ್ನು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ಕಾರ್ಯಕರ್ತ ನಾಗೇಶ ಹೆಗಡೆ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಆಕರ್ಷಕ ಭರವಸೆಗಳನ್ನು ಹೊಂದಿರುವ ಪ್ರಣಾಳಿಕೆಗಳನ್ನು ಸಿದ್ಧಪಡಿಸುತ್ತಿವೆ. ಆದರೆ, ಈ ಬಾರಿ ಪರಿಸ್ಥಿತಿ ಎಂದಿನಂತಿಲ್ಲ. ನಾವೆಲ್ಲ ಒಂದು ಮಹಾ ಪರಿಸರ ಬಿಕ್ಕಟ್ಟಿನ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ. ಆದ್ದರಿಂದ, ಎಲ್ಲ ಪಕ್ಷಗಳು ಪರಿಸರ ಸಂರಕ್ಷಣೆಯ ವಿಚಾರಗಳನ್ನು ತಮ್ಮ ಪ್ರಣಾಳಿಕೆಗಳಲ್ಲಿ ಸೇರಿಸಬೇಕು” ಎಂದು ಒತ್ತಾಯಿಸಿದರು.
“ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಇಲ್ಲದಿದ್ದರೆ ಮತ್ತೆಂದೂ ಸರಿಪಡಿಸಲು ಸಾಧ್ಯವಾಗದಂತಹ ಪರಿಸರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ, ನೀರಿನ ಅಭಾವ, ಬಿಸಿ ಗಾಳಿ, ಪ್ರವಾಹ, ಬರಗಾಲ, ಹಿಮಗಡ್ಡೆ ಕರಗುವಿಕೆ ಇತ್ಯಾದಿ ಸಮಸ್ಯೆಗಳಿಗೆ ನಾವು ಸಿಲುಕಿದ್ದೇವೆ. ಹಾಗಾಗಿ, ಸದ್ಯ ನಮ್ಮ ದೇಶದ ಚುನಾವಣೆಯಲ್ಲಿ ಭಾಗವಹಿಸುವ ಎಲ್ಲ ಪಕ್ಷಗಳು, ಪಕ್ಷ ಬೇಧ ಮರೆತು ತಮ್ಮ ಪ್ರಣಾಳಿಕೆಗಳಲ್ಲಿ ಪರಿಸರ ತುರ್ತು ಎದುರಿಸುವ ವಿಚಾರಗಳನ್ನು ಆದ್ಯತೆಯ ಮೇರೆಗೆ ಸೇರಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
“ಪರಿಸರಕ್ಕಾಗಿ ನಾವು” ಕರ್ನಾಟಕದ ಸಮಾನ ಮನಸ್ಕ ಪರಿಸರ ಕಾರ್ಯಕರ್ತರು ಸೇರಿ ಸ್ಥಾಪಿಸಿರುವ ಸಂಘಟನೆ. ಹವಾಗುಣ ವೈಪರಿತ್ಯ ಮತ್ತು ಇತರ ಗಂಭೀರ ಪರಿಸರ ಸಮಸ್ಯೆಗಳನ್ನು ಎದುರಿಸಲು ನಾವು ವೈಯಕ್ತಿಕ, ಸಾಮುದಾಯಿಕ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಸ್ಥಳೀಯವಾಗಿ ರಚನಾತ್ಮಕ ಕಾರ್ಯ ಮಾಡುವುದರೊಂದಿಗೆ ಸರಕಾರದ ನೀತಿ ಮತ್ತು ಕಾನೂನು ವಿಷಯದಲ್ಲಿ ಸುಸ್ಥಿರತೆ ಮತ್ತು ಸಮಾನತೆಯ ಗುರಿಯಿಟ್ಟುಕೊಂಡು ಪ್ರಭಾವ ಬೀರುವ ಪ್ರಯತ್ನ ನಮ್ಮದು ಎಂದು ಸಂಘಟಕರು ತಿಳಿಸಿದ್ದಾರೆ.
ಶೋಭಾ ಭಟ್, ಆಂಜನೇಯ ರೆಡ್ಡಿ ನೀರಾವರಿ, ಪಾರ್ವತಿ ಶ್ರೀರಾಮ್, ಪಾಪೇಗೌಡ, ವಿಶಾಲಾಕ್ಷಿ, ಪರಿಸರ ಮಂಜು ಭಾಗವಹಿಸಿದ್ದರು.
