ದೇಶದ ಜಾತಿವ್ಯವಸ್ಥೆಯಿಂದ ಘೋರ ಅವಮಾನ, ದೌರ್ಜನ್ಯಗಳನ್ನು ಅನುಭವಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು, ತಾವು ಬರೆದ ಸಂವಿಧಾನದಲ್ಲಿ ಯಾವುದೇ ಜಾತಿಗಳ ವಿರುದ್ದವೂ ಕೇಡು, ಸೇಡು ಬಯಸದೆ ಎಲ್ಲ ಜಾತಿ, ಧರ್ಮ, ವರ್ಗಗಳಿಗೂ ಸಮಾನ ನ್ಯಾಯ ಕಲ್ಪಿಸುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಭಾರತದ ಮಹಾತಾಯಿಯೇ ಆಗಿದ್ದಾರೆ ಎಂದು ಪತ್ರಕರ್ತ, ಲೇಖಕ ಎನ್ ರವಿಕುಮಾರ್(ಟೆಲೆಕ್ಸ್) ವಿಶ್ಲೇಷಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಡಾ. ಬಿ ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್ನ ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಈ ದೇಶದ ಸಮಾಜದಲ್ಲಿ ಅವಮಾನ, ನೋವು, ದೌರ್ಜನ್ಯಗಳನ್ನು ನುಂಗಿದ ಅಂಬೇಡ್ಕರ್ ಅವರು ಈ ದೇಶದ ದಲಿತ, ದಮನಿತರ ಪಾಲಿಗೆ ಬದುಕನ್ನು ರೂಪಿಸಿಕೊಟ್ಟವರು. ಜಾತೀಯತೆಯಿಂದ ಕುರುಡಾಗಿದ್ದ ಭಾರತಕ್ಕೆ ಅರಿವಿನ ಕಣ್ಣುಗಳನ್ನು ಕೊಟ್ಟ ನಿಜವಾದ ನಾಯಕ ಅಂಬೇಡ್ಕರ್” ಎಂದರು.
“ಅಂಬೇಡ್ಕರ್ ಅವರ ಅಸ್ತಿತ್ವ, ಅಸ್ಮಿತೆಯನ್ನು ಹತ್ತಿಕ್ಕಲು ಹಿಂದಿನಿಂದಲೂ ಕುತಂತ್ರಗಳು ನಡೆಯುತ್ತಲೇ ಬಂದಿವೆ. ಆದರೆ ಹತ್ತಿಕ್ಕಿದಷ್ಟು ಅಂಬೇಡ್ಕರ್ ಎದ್ದು ನಿಲ್ಲುತ್ತಿದ್ದಾರೆ. ಅವರನ್ನು ನಿರಾಕರಿಸಿದಷ್ಟು ಆವರಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
“ಅಂಬೇಡ್ಕರ್ ಅವರು ಸಂವಿಧಾನವನ್ನೇ ಬರೆದಿಲ್ಲ. ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಶೋಕಿಯಾಗಿದೆ ಎಂದವರೇ ಇಂದು ಅಂಬೇಡ್ಕರ್ ಅವರನ್ನು ಎತ್ತಿಕೊಂಡು ಮೆರವಣಿಗೆ ಹೊರಟಿದ್ದಾರೆ. ಇದು ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕಿರುವ ತಾಕತ್ತು. ಅಂಬೇಡ್ಕರ್ ಎಂದಿಗೂ ಅಳಿಸಲಾಗದ ಮಹಾ ಪ್ರತಿಭೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು” ಎಂದರು.
“ವೈವಿಧ್ಯಮಯ ಮತ್ತು ವೈರುಧ್ಯಮಯವಾದ ಭಾರತಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲದೆ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯದ ಹೊಳವನ್ನು ಕೊಟ್ಟ ಅಂಬೇಡ್ಕರ್ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯ ನಿರರ್ಥಕವೆಂದು ಹೇಳಿದ್ದು, ಸ್ವಾತಂತ್ರ್ಯದ ಪರಿಕಲ್ಪನೆಗೆ ಸ್ಪಷ್ಟತೆಯ ಜೀವ ತುಂಬಿದ ಅಂಬೇಡ್ಕರ್ ಅವರ ಹೋರಾಟ, ತ್ಯಾಗ ಮತ್ತು ಅವರು ಬರೆದ ಶ್ರೇಷ್ಠ ಸಂವಿಧಾನದಿಂದಾಗಿ ಎಲ್ಲರಿಗೂ ನ್ಯಾಯ ಹಾಗೂ ಹಕ್ಕುಗಳು ಸಿಕ್ಕಿವೆ. ಇಂತಹ ಸಂವಿಧಾನವನ್ನು ಉಳಿಸಿಕೊಳ್ಳುವಲ್ಲಿಯೇ ದೇಶದ ಉಳಿವಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೈವೀಕರಿಸುವುದಕ್ಕಿಂತ ಅವರ ವಿಚಾರಧಾರೆಗಳನ್ನು ಅನುಸರಿಸುವ ಮೂಲಕ ಬಹುಜನ ಭಾರತವನ್ನು ಮುನ್ನಡೆಸಬೇಕಾದ ಹೊಣೆಗಾರಿಕೆ ಯುವ ಸಮೂಹದ ಮೇಲಿದೆ” ಎಂದು ಕರೆ ನೀಡಿದರು.
“ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲವಾಗಿ ಶಿಕ್ಷಣ, ಉದ್ಯೋಗ, ನ್ಯಾಯ, ಹಕ್ಕುಗಳನ್ನು ಪಡೆದ ಜನಸಮುದಾಯಗಳೇ ಇಂದು ಅಂಬೇಡ್ಕರ್ ಅವರ ಸಿದ್ಧಾಂತವನ್ನು ವಿರೋಧಿವವರು, ಜಾತಿವಾದಿಗಳು ಹಾಗೂ ಕೋಮುವಾದಿಗಳ ಜೊತೆ ನಿಲ್ಲುತ್ತಿವೆ. ಮೀಸಲಾತಿ ಫಲಾನುಭವಿಗಳೇ ಮೀಸಲಾತಿ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹವಾಗಿದೆ. ದೇಶವೆಂದರೆ ಕೇವಲ ಮಣ್ಣಲ್ಲ, ಜನತೆಯೇ ಆಗಿದ್ದಾರೆ. ಅದಕ್ಕಾಗಿ ಸಂವಿಧಾನದ ಪೀಠಿಕೆ ’ಭಾರತದ ಜನತೆಯಾದ ನಾವು’ಗಳೆಂದು ಆರಂಭವಾಗುತ್ತದೆ. ಇಂತಹ ಉದಾತ್ತ ಬಂಧುತ್ವ ಪರಿಕಲ್ಪನೆಯನ್ನು ಕೊಟ್ಟವರು ಅಂಬೇಡ್ಕರ್. ಹಾಗಾಗಿ ಇಂಥ ಅದ್ಭುತವಾದ ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ದೇಶ ಉಳಿಯುತ್ತದೆ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹೊಸ ತಲೆಮಾರುಗಳನ್ನು ಜಾತಿ, ಧರ್ಮದ ಹೆಸರಿನ ರಾಜಕೀಯ ಪಿತೂರಿಗಳಿಂದ ಬಿಡಿಸಿ ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನವನ್ನು ಮಾದರಿಯನ್ನಾಗಿ ಅನುಸರಿಸಲು ಸನ್ನದ್ಧಗೊಳಿಸುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜ ಗೌರವವಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿವಾಹೇತರ ಸಂಬಂಧದ ಶಂಕೆ; ಮಸೀದಿ ಎದುರು ಮಹಿಳೆಯ ಮೇಲೆ ಹಲ್ಲೆ
ಕಾರ್ಯಕ್ರಮಕ್ಕೂ ಮುನ್ನ ರವಿಕುಮಾರ್(ಟೆಲೆಕ್ಸ್) ಅವರು ಈ ದಿನ ಡಾಟ್ ಕಾಮ್ ಹೊರತಂದಿರುವ ʼಅರಿವೇ ಅಂಬೇಡ್ಕರʼ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಕಾಲೇಜಿನ ಶಿಕ್ಷಣಾರ್ಥಿಗಳಿಂದ ಅಂಬೇಡ್ಕರ್ ಜೀವನ ಚರಿತ್ರೆಯ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಅಂಬೇಡ್ಕರ್ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಸಿದ್ದರಾಜು, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಮುಶವಿರ್ ಬಾಷಾ, ಸಂಶೋಧಕ ಹನುಮಂತಪ್ಪ, ಡಾ. ಬಿ ಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ನ ನಿದೇಶಕಿ ನೇತ್ರಾವತಿ ಸುಭಾಷ್, ಸಾವಿತ್ರಿ ಗಣೇಶಪ್ಪ, ಪತ್ರಕರ್ತ ಶಿವಶಂಕರ್ ಇದ್ದರು.