ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ ಕರಾವಳಿ ಮೀನುಗಾರರ ಕಲಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಸಂಘಕ್ಕೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಚಾಲನೆ ನೀಡಿದರು.
“ಮೀನುಗಾರರ ಬದುಕು ನೀರಿನ ಮೇಲೆ ಗುಳ್ಳೆ ಇದ್ದ ಹಾಗೆ. ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸಮುದ್ರದ ಆಳಕ್ಕೆ ದುಡಿಯಲು ಹೋಗುವ ಮೀನುಗಾರನ ಬದುಕು ನಿಜಕ್ಕೂ ಕಠಿಣ. ಇಂತಹ ಮೀನುಗಾರರು ಎಲ್ಲರು ಒಗ್ಗಟ್ಟಿನಿಂದ ಇಂದು ಜೊತೆಯಾಗಿ ತಮ್ಮವರ ಕ್ಷೇಮಭಿವೃದ್ಧಿಗಾಗಿ ಸಂಘ ಸ್ಥಾಪಿಸಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ಸಚಿವರು ಹೇಳಿದರು.
ಇಂದು ರಾಜ್ಯದಲ್ಲಿ ಮೀನುಗಾರಿಕೆ ಮಂತ್ರಿಯಾಗಿ ಸೇವೆ ಮಾಡುತ್ತಿರುವುದಕ್ಕೆ ಕಾರಣ ಮೀನುಗಾರರು. ಆ ಶ್ರೇಯಸ್ಸು ಅವರಿಗೇ ಸಲ್ಲಬೇಕಾಗುತ್ತದೆ. ಪೃಕೃತಿಗೆ ಸವಾಲೊಡ್ಡಿ ಸಮುದ್ರದ ಅಲೆಗಳ ವಿರುದ್ಧ ಹೋರಾಡುವ ಮೀನುಗಾರ ನಿಜಕ್ಕೂ ಯೋಧನೇ ಎನ್ನಬಹುದು ಎಂದು ಮೀನುಗಾರರಿಗೆ ಧನ್ಯವಾದಗಳು ಅರ್ಪಿಸಿದರು.
ತಾವು ಕಷ್ಟ ಪಟ್ಟು ದುಡಿಯುವ ಹಣದಲ್ಲಿ ನೀಡುತ್ತಿದ್ದ ಶೇಕಡಾ 22% ಹಣವನ್ನು ಶೇಕಡಾ 25% ಏರಿಸಬೇಕೆಂದು ಅನೇಕ ದಿನಗಳಿಂದ ಹೋರಾಟ ಮಾಡುತ್ತಿರುವ ಮೀನುಗಾರರು ಇಂದು ಹೋರಾಟದ ಜೊತೆಯಲ್ಲಿ ಮೀನುಗಾರರ ಕ್ಷೇಮಾಭಿವೃದ್ದಿ ಸಂಘ ಸ್ಥಾಪಿಸಿರುವುದು ಹಗಲಿರುಳು ದುಡಿಯುವ ಕರಾವಳಿಯ ಎಲ್ಲ ಮೀನುಗಾರ ಕಾರ್ಮಿಕರಿಗೆ ಧೈರ್ಯ ಬಂದಂತಾಗಿದೆ. ಮೀನುಗಾರರ ಕ್ಷೇಮಕ್ಕಾಗಿ ಇಲಾಖೆ 2 ವರ್ಷದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಧನ ನೀಡುತ್ತಿದೆ ಎಂದರು.

ಹಿಂದೆಲ್ಲ ಮೀನುಗಾರಿಕೆಗೆ ತೆರಳಿದಾಗ ಮೀನುಗಾರರು ನಾಪತ್ತೆಯಾದದಲ್ಲಿ ಯಾವುದೇ ಪರಿಹಾರ ಸಿಗುತ್ತಿರಲಿಲ್ಲ ಆದರೆ ನಾನು ನಮ್ಮ ಮೀನುಗಾರರ ಕುಟುಂಬದ ಜೊತೆಯಲ್ಲಿ ನಿಂತು ನಾಪತ್ತೆಯಾದ ಮೀನುಗಾರರಿಗೂ ಪರಿಹಾರ ನೀಡುವುದರ ಜೊತೆಯಲ್ಲಿ ಪರಿಹಾರದ ಮೊತ್ತವನ್ನು ಕೂಡಾ ₹10 ಲಕ್ಷ ರುಪಾಯಿಗೆ ಹೆಚ್ಚಿಸಿದ್ದೇನೆ. ಅಲ್ಲದೆ ಮೀನುಗಾರಿಕೆಗೆ ತೆರಳಿದಾಗ ಮೀನುಗಾರರು ಅಪಘಾತಕ್ಕಿಡದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುವುದರ ಜೊತೆಗೆ ಮೀನುಗಾರಿಕೆ ಬೋಟ್‘ಗಳು ಹಾನಿಯಾದಲ್ಲಿ ಅದಕ್ಕೂ ಪರಿಹಾರಕೊಡಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ವಸತಿ ರಹಿತ ಬಡ ಮೀನುಗಾರರಿಗೆ “ಮತ್ಸ್ಯಆಶ್ರಯ”ಯೋಜನೆಯಡಿಯಲ್ಲಿ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಸರಕಾರ ಇನ್ನು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸದಾ ಮೀನುಗಾರರಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ
ಸಂಘದ ಕಲಾಸಿಗಳಿಗೆ (ಕಾರ್ಮಿಕರು) ಯಾವುದೇ ತೊಂದರೆಯಾದರೆ ಅವರ ಕ್ಷೇಮಕ್ಕಾಗಿ ಸಂಘಕ್ಕೆ ವಯಕ್ತಿಕವಾಗಿ ₹5 ಲಕ್ಷ ರೂಪಾಯಿ ಸಹಾಯ ಹಣವನ್ನು ನೀಡಿ ಸಂಘದ ಎಲ್ಲ ಕಲಾಸಿಗಳಿಗೂ ಇಂದರಿಂದ ಸಹಾಯ ಆಗುವಂತಾಗಲಿ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ, ಡಿಪ್ ಸಿ ಟ್ರಾಲ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಕರುಣಾಕರ ಸಾಲಿಯನ್, ಡಿಪ್ ಸಿ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ದುರ್ಗಾಪರಮೇಶ್ವರಿ ದೇವಸ್ಥಾನದ ತಿಮ್ಮಪ್ಪ ಹೊನ್ನಿಮನೆ, ಹಾಗೂ ಮೀನುಗಾರ ಮುಖಂಡರು ಗಣ್ಯರು ಜೊತೆಗೆ ಕಲಾಸಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.