ಮಹಿಳೆಯರಿಗೂ, ಸಾರಿಗೆ ನಿಗಮಗಳಿಗೂ ಬಲ ತುಂಬಿದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ʼಶಕ್ತಿʼ ಯೋಜನೆ ಜಾರಿಗೆ ಬಂದು 2025ರ ಜೂನ್ 11ಕ್ಕೆ ಎರಡು ವರ್ಷ ಪೂರ್ಣಗೊಂಡಿದೆ. ಶಕ್ತಿ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ 8.29 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆದಿದ್ದು, ಇದರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ₹237.80 ಕೋಟಿ ಆದಾಯ ಬಂದಿದೆ.
2023ರ ರಾಜ್ಯ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಘೋಷಿಸಿದ ʼಪಂಚ ಗ್ಯಾರಂಟಿʼಗಳಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಯೋಜನೆ ಇದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಜಾರಿಗೆ ಬಂದ ನಂತರ ಮಹಿಳೆಯರಿಗಾಗಿ ಘೋಷಿಸಿದ ʼಶಕ್ತಿʼ ಯೋಜನೆಯನ್ನು 2023ರ ಜೂ.11 ರಂದು ಜಾರಿಯಾಗಿತ್ತು. ಇದರಿಂದ ಮಹಿಳೆಯರು ರಾಜ್ಯದಲ್ಲಿ ಯಾವುದೇ ಮೂಲೆಗೆ ಹೋದರೂ ಸಾರಿಗೆ ನಿಗಮದ ಕೆಂಪು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.
ಈ ಯೋಜನೆಯಿಂದ ಸಾರಿಗೆ ನಿಗಮಗಳಿಗೂ ಆರ್ಥಿಕ ʼಶಕ್ತಿʼ ಬರುವ ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿ ಎರಡು ವರ್ಷ ಪೂರೈಸಿ ಯಶಸ್ವಿಯಾಗಿ ಮುಂದುವರಿಯುತ್ತಿದೆ.
ಶಕ್ತಿ ಯೋಜನೆ ಜಾರಿಯಾದ ಮೊದಲ ತಿಂಗಳಲ್ಲಿ 17 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ, ಜುಲೈ ತಿಂಗಳಿಂದ ನವೆಂಬರ್ವರೆಗೆ ಸರಾಸರಿ ಪ್ರತಿ ತಿಂಗಳು 30 ಲಕ್ಷ ಮಹಿಳೆಯರು ಪ್ರಯಾಣ ಬೆಳೆಸಿದರು. ಡಿಸೆಂಬರ್ ತಿಂಗಳಲ್ಲಿ ಆ ಸಂಖ್ಯೆ 37 ಲಕ್ಷಕ್ಕೆ ಏರಿಕೆಯಾಗಿತ್ತು. ಮಹಿಳೆಯರ ಉಚಿತ ಪ್ರಯಾಣದಿಂದ ಸಂಸ್ಥೆಗೆ ₹10 ಕೋಟಿಗೂ ಅಧಿಕ ಆದಾಯ ಸಂದಾಯವಾಗಿತ್ತು. ಆ ವರ್ಷದಲ್ಲಿ ಗಳಿಸಿದ ಗರಿಷ್ಠ ವರಮಾನದ ತಂದುಕೊಟ್ಟ ತಿಂಗಳು ಇದಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಪ್ರಯಾಣದ ಪ್ರಮಾಣ ಬಹಳ ಕಡಿಮೆಯಾಗಿತು.
ಸಾರಿಗೆ ಇಲಾಖೆಯ ಕೆಂಪು ಬಸ್ಗಳಲ್ಲಿ ಮಹಿಳಾ ಮತ್ತು ಬಾಲಕಿಯರು ಸೇರಿ ಪ್ರತಿ ದಿನ ಸರಾಸರಿ 1.13 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಪ್ರತಿ ದಿನ ಸರಾಸರಿ ₹32.53 ಲಕ್ಷ ಲಾಭ ಇಲಾಖೆಗೆ ಸಂದಾಯವಾಗುತ್ತಿದೆ.
ಈ ವರ್ಷವೇ ಹೆಚ್ಚು ಆದಾಯ :
2025ರಲ್ಲಿ ಪ್ರತಿ ತಿಂಗಳು 30 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ₹10 ಕೋಟಿ ಆದಾಯ ಸಂದಾಯವಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಕಳೆದ ಮೇ ಒಂದೇ ತಿಂಗಳಲ್ಲಿ 40 ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಓಡಾಡಿದ್ದು, ಇದರಿಂದ ಬರೋಬ್ಬರಿ ₹13.42 ಕೋಟಿ ಆದಾಯ ಬಂದಿದೆ. ಯೋಜನೆ ಜಾರಿಯಾದ ಬಳಿಕ ಬೀದರ್ ವಿಭಾಗಕ್ಕೆ ಅತೀ ಹೆಚ್ಚು ಆದಾಯ ತಂದುಕೊಟ್ಟ ತಿಂಗಳು ಇದೇ ಆಗಿದೆ.
2024ರ ಜೂನ್ 11ಕ್ಕೆ ಶಕ್ತಿ ಯೋಜನೆ ಒಂದು ವರ್ಷ ಪೂರೈಸಿದ ಹೊತ್ತಿಗೆ ಸಾರಿಗೆ ಸಂಸ್ಥೆ ಬರೋಬ್ಬರಿ ₹110 ಕೋಟಿ ವರಮಾನ ಗಳಿಸಿತು. ಆ ವರ್ಷ ಒಟ್ಟು 3.99 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಿದರು. 2024-25ನೇ ವರ್ಷದಲ್ಲಿ 2 ವರ್ಷ ಪೂರೈಸಿದ ಹೊತ್ತಿಗೆ 4.30 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ಬೆಳೆಸಿದ್ದು, ಇದರಿಂದ ₹127.80 ಕೋಟಿ ಆದಾಯ ಸಂದಾಯವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ₹17.80 ಕೋಟಿ ಹೆಚ್ಚುವರಿ ಲಾಭ ಸಾರಿಗೆ ಇಲಾಖೆಗೆ ಸಂದಾಯವಾಗಿರುವುದು ಗಮನಾರ್ಹ ಸಂಗತಿ.
ʼ119 ಹೊಸ ಬಸ್ ಸೇರ್ಪಡೆ :
‘ಶಕ್ತಿ ಯೋಜನೆ ಜಾರಿಯಾಗುವ ಮುನ್ನ ಬೀದರ್ ವಿಭಾಗದಲ್ಲಿ ಒಟ್ಟು 534 ಬಸ್ಗಳಿದ್ದವು. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ 119 ಹೊಸ ಬಸ್ ಸೇರ್ಪಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 612 ಬಸ್ಗಳಿದ್ದು, ಅದರಲ್ಲಿ ರಾಜ್ಯದ ಗಡಿಭಾಗದ ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ 89 ಬಸ್ಗಳಿಗೆ ಅನುಮತಿ ನೀಡಿ ಓಡಿಸಲಾಗುತ್ತಿದೆ. 141 ಅಂತರರಾಜ್ಯ ಬಸ್ಗಳಿದ್ದು, ಅದರಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ಇಲ್ಲʼ ಎಂದು ಕೆಕೆಆರ್ಟಿಸಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ್ ಫುಲೇಕರ್ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.
‘ಬೀದರ್ ಜಿಲ್ಲೆಯಿಂದ ಕಲಬುರಗಿ, ಕೊಪ್ಪಳ, ಗುಡ್ಡಾಪುರ, ಕೂಡಲಸಂಗಮ, ಮುಗಳಖೇಡ್, ಹುಬ್ಬಳಿ, ಬೆಂಗಳೂರು, ಶಿವಮೊಗ್ಗ, ಯಾದಗಿರಿ, ವಿಜಯಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಪ್ರಯಾಣಿಸಲು 78 ಹೊಸ ಬಸ್ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಒಟ್ಟು 330 ಟ್ರಿಪ್ ಪ್ರಮಾಣ ಜಾಸ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬಸ್ ಸೇವೆ ವಿಸ್ತರಿಸಲಾಗುವುದು’ ಎಂದು ಹೇಳಿದರು.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ :
ʼಜಿಲ್ಲೆಯಲ್ಲಿ ʼಶಕ್ತಿʼ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಅಂದಾಜು ಶೇ 45ರಷ್ಟು ಹೆಚ್ಚಳವಾಗಿದೆ. ಇದರಿಂದ ಪುರುಷ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದೆ. ಬಸ್ಗಳ ಸಂಖ್ಯೆ ಹೆಚ್ಚಿಸಿ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟು ʼಶಕ್ತಿ ಯೋಜನೆಗೆ ಬಲ ತುಂಬಿದ್ದೇವೆ. ಇದರಿಂದ ಗಡಿ ಜಿಲ್ಲೆಯ ಮಹಿಳೆಯರು ದೇವಸ್ಥಾನ, ಪ್ರವಾಸಿ ತಾಣ ಸೇರಿ ವಿವಿಧೆಡೆ ಭೇಟಿ ನೀಡಲು ಅನುಕೂಲವಾಗಿದೆ. ಅಲ್ಲದೇ ಸರ್ಕಾರಿ, ಖಾಸಗಿ ನೌಕರರು, ಕೂಲಿ-ಕಾರ್ಮಿಕರು, ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆʼ ಎಂದು ತಿಳಿಸಿದರು.
ʼಜಿಲ್ಲಾ ಮತ್ತು ತಾಲ್ಲೂಕು, ಹಳ್ಳಿಗಳಲ್ಲಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಯಾವುದೇ ತರಹದ ತೊಂದರೆಯಾಗದಂತೆ ಬೆಳಿಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಹೆಚ್ಚುವರಿ ಬಸ್ಗಳ ಕಾರ್ಯಾಚರಣೆ ಮಾಡಲಾಗಿದೆ. ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಂದ ಕೋರಿಕೆ ಬಂದಲ್ಲಿ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲು ಈಗಾಗಲೇ ಎಲ್ಲ ಕ್ರಮ ಕೈಗೊಳ್ಳಲಾಗಿದೆʼ ಎಂದು ವಿಭಾಗದ ಅಧಿಕಾರಿಗಳು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಹಳಿ ತಪ್ಪಿದ್ದೆಲ್ಲಿ?
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಿನಿಕತನದ ವೀಡಿಯೊಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬ ಚರ್ಚೆಗಳು ಪುರುಷ ಪ್ರಧಾನತೆಯ ಮೂಲ ಶಿಕ್ಷಣ. ಯೋಜನೆಯ ಕೆಟ್ಟ ಪರಿಣಾಮಗಳನ್ನು ಹೆಚ್ಚಾಗಿ ಬಿಂಬಿಸುವುದು, ಅದನ್ನೇ ಆಧಾರವಾಗಿಟ್ಟುಕೊಂಡ ಜನಪ್ರತಿನಿಧಿಗಳು, ಸಾರ್ವಜನಿಕರು ಮಹಿಳೆಯರ ಕುರಿತು ನೀಡುವ ಅಸಂಬದ್ಧ ಹೇಳಿಕೆಗಳು ಬಹುಚರ್ಚೆಗೆ ಒಳಪಟ್ಟಿದ್ದವು. ಆದರೆ, ಕಲ್ಯಾಣ ಯೋಜನೆ ಮಹಿಳಾ ಸಬಲೀಕರಣಕ್ಕೆ ಹೇಗೆ ಪೂರಕವಾಗಬಲ್ಲದು ಎನ್ನುವುದಕ್ಕೆ ʼಶಕ್ತಿʼ ಯೋಜನೆ ಸಾಬೀತುಪಡಿಸಿದೆ ಎನ್ನಬಹುದು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.