ಅಲ್ಲಮಪ್ರಭು ಮತ್ತು ಬಸವಣ್ಣನವರು ಭಾರತೀಯ ದಾರ್ಶನಿಕ ಪರಂಪರೆಯ ಬಹುದೊಡ್ಡ ತತ್ವಜ್ಞಾನಿಗಳು. ಆಧುನಿಕ ಕಾಲಘಟ್ಟದಲ್ಲಿ ಎದುರಾಗುತ್ತಿರುವ ಹಲವು ಬಿಕ್ಕಟ್ಟುಗಳನ್ನು ವಚನಗಳ ಸರಿಯಾದ ಅಧ್ಯಯನದಿಂದ ದಾಟಬಹುದು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಕಾಂತ ಚೌಹಾಣ್ ಹೇಳಿದರು.
ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಸಹಯೋಗದಲ್ಲಿ ಅಲ್ಲಮಪ್ರಭು ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲ್ಲಮನ ವಚನಗಳ ವಿವಿಧ ಆಯಾಮಗಳು ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼಸಾಮಾಜಿಕ ಪರಿವರ್ತನೆಯ ಅಂಶಗಳು ಒಳಗೊಂಡ ವಚನ ಸಾಹಿತ್ಯ ಮಾನವೀಯತೆ ಮತ್ತು ಸಮಾನತೆಯ ಆಶಯದಿಂದಾಗಿ ಸಾವಿರಾರು ವರ್ಷಗಳ ಕಾಲ ಮತ್ತೇ ಮತ್ತೇ ಅನುಸಂಧಾನಕ್ಕೆ ಒಳಪಡುತ್ತದೆʼ ಎಂದರು.
ʼಮೌಢ್ಯ, ಕಂದಾಚಾರ ವಿರೋಧಿಸುವ ನಿಲುವು ವಚನಕಾರರದು. ಮಾರ್ಕ್ಸ್ ಹೇಳುವ ಮೊದಲೇ ಸಮತಾವಾದವನ್ನೂ ಶರಣರು ಪ್ರತಿಪಾದಿಸಿದ್ದರು. ಧರ್ಮಾತೀತ ಮತ್ತು ಜಾತ್ಯತೀತ ಆಲೋಚನೆ ವಚನಗಳ ತಾತ್ವಿಕತೆಯಾಗಿವೆ. ಬೌದ್ಧ ತಾತ್ವಿಕತೆ ಮತ್ತು ಅಲ್ಲಮನ ತಾತ್ವಿಕತೆಗಳಲ್ಲಿ ಹೆಚ್ಚು ಸಾಮ್ಯತೆಗಳಿವೆ. ನಮ್ಮ ಅಧ್ಯಯನದ ಕೊರತೆಗಳಿಂದಾಗಿ ಮಹಾನ್ ದಾರ್ಶನಿಕರನ್ನು ಧಾರ್ಮಿಕ, ಜಾತಿಯ ಆವರಣದಲ್ಲಿ ಇಡುತ್ತಿದ್ದೇವೆ. ಜಗತ್ತಿನ ಎಲ್ಲ ಮಹಾನ್ ವ್ಯಕ್ತಿಗಳು ಧಾರ್ಮಿಕ ಮತ್ತು ಜಾತಿಯ ಹಂಗುಗಳನ್ನು ಹರಿದುಕೊಂಡಿದ್ದಾರೆʼ ಎಂದು ವಿಶ್ಲೇಷಿಸಿದರು.
ಅಲ್ಲಮನ ವಚನಗಳ ತಾತ್ವಿಕ ಆಯಾಮ ಕುರಿತು ಶ್ರೀ ಬಸವೇಶ್ವರ ಕಾಲೇಜು ಅಧ್ಯಾಪಕ ಡಾ.ಭೀಮಾಶಂಕರ ಬಿರಾದಾರ ಅವರು ಮಾತನಾಡಿ, ʼಅಲ್ಲಮ ಕನ್ನಡ ಸಾಂಸ್ಕೃತಿಕ ಜಗತ್ತಿನ ಬಹುದೊಡ್ಡ ದಾರ್ಶನಿಕ ಪ್ರತಿಭೆ. ಕವಿತ್ವ ಹಾಗೂ ದಾರ್ಶನಿಕತೆ ಮೇಳೈಸಿಕೊಂಡ ಮಹಾಪ್ರತಿಭೆ. ಹಲವು ರೂಪಕ ಹಾಗೂ ಪ್ರತಿಮೆಗಳಿಂದಲೇ ಲೋಕದ ಅರಿವನ್ನು ವಿಸ್ತರಿಸಿದ್ದಾನೆ. ಅವನ ಭಾಷಿಕ ಶಕ್ತಿ ಅಗಾಧʼ ಎಂದರು.
ʼಮಹಾ ಸಂದೇಹಿಯಾದ ಅಲ್ಲಮನಲ್ಲಿ ಎಲ್ಲವೂ ಒರೆಗೆ ಹಚ್ಚುವ ಗುಣವಿತ್ತು. ನಿತ್ಯ ಸಂಚಾರಿ ಅಲ್ಲಮ ಭಾರತೀಯ ಪಂಥಗಳಾದ ಬೌದ್ಧ, ನಾಥ, ಶೈವ, ಸೂಫಿ ಈ ಎಲ್ಲ ಜ್ಞಾನ ಪರಂಪರೆ ಅರಿತರೂ ಯಾವೊಂದು ಚೌಕಟ್ಟಿಗೂ ಸಿಗದೇ ನಿತ್ಯ ಬಯಲಿನ ಜಾಯಮಾನ ಅವನಲ್ಲಿತ್ತುʼ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ ಮಾತನಾಡಿ, ʼಅಲ್ಲಮನ ವಚನಗಳು ಜೀವನದ ಬೆರಗು ಬಯಲುಗೊಳಿಸುತ್ತವೆ. ಅವರು ಜ್ಞಾನ ಹಾಗೂ ಅರಿವಿನ ಕಾರಣದಿಂದ ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಎಲ್ಲ ಶರಣರ ವಿಚಾರಗಳನ್ನು ಪರೀಕ್ಷಿಸುವ ಮತ್ತು ವಿಮರ್ಶಿಸುವ ಸಾಮರ್ಥ್ಯ ಹೊಂದಿದ್ದರುʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ʼನಾಡಿನ ಶ್ರೇಷ್ಠ ದಾರ್ಶನಿಕ ಅಲ್ಲಮ ಇಡೀ ವಿಶ್ವದ ಎಲ್ಲ ತತ್ವಜ್ಞಾನಿಗಳ ಸಾಲಿನಲ್ಲಿ ನಿಲ್ಲುತ್ತಾನೆ. ಶರಣ ಚಳುವಳಿಯ ನೇತಾರ ಬಸವಣ್ಣನವರಾದರೆ ಅದನ್ನು ತಾತ್ವಿಕ ಗಟ್ಟಿಗೊಳಿಸಿದ್ದು ಅಲ್ಲಮ. ವಚನಕಾರರ ಸೈದ್ಧಾಂತಿಕ ಬದ್ಧತೆಗೆ ಅಲ್ಲಮ ಇಂಬು ಕೊಟ್ಟಿದ್ದರುʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತಂಗಿಯನ್ನು ಪ್ರೀತಿಸಿದಕ್ಕೆ ಯುವಕನನ್ನು ಕೊಲೆಗೈದ ಸಹೋದರರು
ಹುಲಸೂರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸೂರ್ಯಕಾಂತ ಪಾಟೀಲ, ದೇವೇಂದ್ರ ಬರಗಾಲೆ, ಲಕ್ಷ್ಮೀಬಾಯಿ ಪಾಟೀಲ, ನಾಗಪ್ಪ ನಿಣ್ಣೆ, ರೇವಣಸಿದ್ದಪ್ಪ ಡೋಂಗರೆ, ಬಸವಣ್ಣೆಪ್ಪ ನೆಲೋಗಿ, ಅಂಬಾರಾಯ ಸೈದಾಪುರೆ, ಕುಪೇಂದ್ರ ಬಿರಾದಾರ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಶಾಲಿವಾನ ಕಾಕನಾಳೆ ಸ್ವಾಗತಿಸಿದರು, ರಾಜಶೇಖರ ಬಿರಾದಾರ ವಂದಿಸಿದರು.