ಬಸವ ಪಂಚಮಿ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಮಕ್ಕಳಿಗೆ ಹಾಲು, ಹಣ್ಣು ವಿತರಣೆ ಕಾರ್ಯಕ್ರಮ ನಡೆಯಿತು. ಬಸವ ಪಂಚಮಿ ಅಂಗವಾಗಿ ಭಾಲ್ಕಿ ಹಿರೇಮಠದಲ್ಲಿ ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಶ್ರೀಮಠದ ಪ್ರಸಾದ ನಿಲಯದ ಮಕ್ಕಳಿಗೆ ಹಾಲು ಕುಡಿಸಿ ಪ್ರತಿಯೊಬ್ಬರು ಮೌಢ್ಯತೆಯಿಂದ ಹೊರ ಬರುವಂತೆ ಕರೆ ನೀಡಿದರು.
ಭಾಲ್ಕಿ : ಬಸವ ಪಂಚಮಿ ಮತ್ತು ಅಕ್ಕನಾಗಮ್ಮ ಜಯಂತಿ ಆಚರಣೆ
ವಚನ ಸಾಹಿತ್ಯ ರಕ್ಷಣೆಯಲ್ಲಿ ಅಕ್ಕನಾಗಮ್ಮನ ಪಾತ್ರ ಬಹುದೊಡ್ಡದಾಗಿದೆ. ಕಲ್ಯಾಣ ಕ್ರಾಂತಿಯ ನಂತರ ಕಲ್ಯಾಣದಿಂದ ಉಳವಿಯವರೆಗೆ ವಚನಗಳು ಉಳಿಸಿ, ರಕ್ಷಿಸಿದ ವಚನ ಮೂರ್ತಿ ಎಂದರೆ ಅಕ್ಕನಾಗಮ್ಮತಾಯಿ ಎಂದು ಬಸವಕಲ್ಯಾಣ
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಪಂಚಮಿ ಮತ್ತು ಅಕ್ಕನಾಗಮ್ಮ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಬಸವಣ್ಣನವರ ವ್ಯಕ್ತಿತ್ವ ರೂಪಗೊಳ್ಳಲು ಅಕ್ಕನಾಗಮ್ಮ ತಾಯಿಯವರದ್ದು ಬಹುದೊಡ್ಡ ಪಾತ್ರವಿದೆ. ಬಸವಣ್ಣನವರ ಬಾಲ್ಯದಿಂದ ಕೊನೆಯವರೆಗೂ ಅವರ ಜೊತೆಗಿದ್ದು ಅವರ ಹೆಗಲಿಗೆ ಹೆಗಲು ಕೊಟ್ಟು ಚಳುವಳಿ ಮುನ್ನಡೆಸಲು ಅವಿರತವಾಗಿ ಶ್ರಮಿಸಿದರುʼ ಎಂದು ತಿಳಿಸಿದರು.

ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಲಿಂಗಾಯತ ಧರ್ಮ ಅತ್ಯಂತ ವೈಚಾರಿಕ ಮತ್ತು ವೈಜ್ಞಾನಿಕ ಧರ್ಮವಾಗಿದೆ. ಇಲ್ಲಿ ಮೌಢ್ಯ, ಅಂಧಶ್ರದ್ಧೆ, ಕಂದಾಚಾರಕ್ಕೆ ಒಂದಿನಿತೂ ಅವಕಾಶವಿಲ್ಲ. ದೇಶದಲ್ಲಿ ಲಕ್ಷಾಂತರ ಮಕ್ಕಳು ಪೌಷ್ಠಿಕ ಆಹಾರ ಸಿಗದೆ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅದ್ಯಾಗೂ ನಾವು ಮಕ್ಕಳಿಗೆ ಹಾಲು ಕುಡಿಸದೇ ಕಲ್ಲನಾಗರಿಗೆ ಹಾಲನ್ನು ಹಾಕುತ್ತೇವೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಇದನ್ನು ಮನಗಂಡು ಶ್ರೀಮಠದ ವತಿಯಿಂದ ಪ್ರತಿವರ್ಷ ಬಡಮಕ್ಕಳಿಗೆ ಹಾಲು ಕುಡಿಸುವ ಮೂಲಕ ಬಸವಪಂಚಮಿಯನ್ನು ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ. ಇದು ಎಲ್ಲ ಕಡೆ ಆಚರಣೆ ಮಾಡಬೇಕುʼ ಎಂದು ನುಡಿದರು.
ಅರ್ಬನ್ ಬ್ಯಾಂಕ್ ನಿರ್ದೇಶಕಿ ಮನಿಷಾ ಶರಣ ಸಂಗಮೇಶ ವಾಲೆ ಅವರು ಬಡಮಕ್ಕಳಿಗೆ ಹಾಲು ದಾಸೋಹ ನೀಡಿದರು. ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್.ಪಾಟೀಲ, ಶಿವಾನಂದ ಹೈಬತಪುರೆ, ಮಹಾನಂದಾ ಮಾಶೆಟ್ಟೆ, ಹಾಗೂ ಅಕ್ಕನಬಳಗದ ತಾಯಂದಿರು ಉಪಸ್ಥಿತರಿದ್ದರು. ಶ್ರೀಮಠದ ವಿದ್ಯಾರ್ಥಿಳಿಂದ ಪ್ರಾರ್ಥನೆ ನೆರವೇರಿತು. ನವಲಿಂಗ ಪಾಟೀಲ ನಿರೂಪಿಸಿದರು.. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಪ್ರಾರ್ಥನೆ ನಡೆಸಿ ಕೊಟ್ಟರು.
ಬೀದರ್ : ವಸತಿ ಶಾಲೆಯ ಮಕ್ಕಳಿಗೆ ಹಾಲು, ಹಣ್ಣು ವಿತರಣೆ
ಬೀದರ ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ ವತಿಯಿಂದ ಬಸವ ಪಂಚಮಿಯನ್ನು ನಗರದ ನವ ಜೀವನ ವಿಶೇಷ ವಸತಿ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಯಿತು.
ಅನುಭವ ಮಂಟಪ ಬಸವಕಲ್ಯಾಣದ ಮಾತೆ ಸುಗುಣ ತಾಯಿಯವರು ದಿವ್ಯ ನೇತೃತ್ವ ವಹಿಸಿ ಮಾತನಾಡಿ, ʼಬಸವಣ್ಣನವರು ದೀನ ದಲಿತರ, ಅಂಗವಿಕಲರ ಮಕ್ಕಳ, ಸ್ತ್ರೀಯರ ಕಲ್ಯಾಣ ಬಯಸುವ ಕರುಣಾಮಿಯಾಗಿದ್ದರು. ಸಕಲ ಜೀವಿಗಳ ಕಲ್ಯಾಣ ಬಯಸುವ ವಿಶ್ವದ ಮಹಾಪುರುಷರಾಗಿದ್ದರು, ಬಸವ ಪಂಚಮಿ ದಿವಸವು ಬಸವಣ್ಣನವರು ಲಿಂಗೈಕ್ಯರಾದ ದಿವಸ. ಈ ಪ್ರಯುಕ್ತ ಅಂಗವಿಕಲ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಸೇವಾ ಕಾರ್ಯವಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಉಮಾಕಾಂತ ಮೀಸೆ, ಶ್ರೀಕಾಂತ ಬಿರಾದರ್, ಸಂಗ್ರಾಮ ಎಂಗಳೆ, ಸಂಗ್ರಾಮಪ್ಪ ಬಿರಾದರ, ಭೀಮಶಂಕರ್ ಬಿರಾದರ, ತೀರ್ಥಮ್ಮ ರೆಡ್ಡಿ, ಶರಣಪ್ಪ ಮತ್ತು ಶಾಲೆಯ ಮುಖ್ಯಸ್ಥರಾದ, ರೆಡ್ಡಿ, ಅನಿಲ್ ಕುಮಾರ ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು, ಸಿಬ್ಬಂದಿ ಉಪಸ್ಥಿತರಿದ್ದರು.
ಜನವಾಡದಲ್ಲಿ ಅಲೆಮಾರಿ ಮಕ್ಕಳಿಗೆ ಹಾಲು ವಿತರಣೆ
ಮಾನವ ಬಂಧುತ್ವ ವೇದಿಕೆ ವತಿಯಿಂದ ಬೀದರ್ ತಾಲ್ಲೂಕಿನ ಜನವಾಡ ಗ್ರಾಮದಲ್ಲಿ ಮಂಗಳವಾರ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿ ಗ್ರಾಮದ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು ವಿತರಿಸಲಾಯಿತು.

ವೇದಿಕೆಯ ಸಂಚಾಲಕ ಗೌತಮ ಮುತ್ತಂಗಿಕರ್ ಮಾತನಾಡಿ, ʼಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ವೇದಿಕೆಯು ಹತ್ತು ವರ್ಷಗಳಿಂದ ಮೌಢ್ಯ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತ ಬಂದಿದೆ. ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ. ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ. ಹೀಗಾಗಿ ಹುತ್ತಿಗೆ ಎರೆದು ಹಾಲು ವ್ಯರ್ಥ ಮಾಡುವ ಬದಲು ಅಪೌಷ್ಟಿಕತೆ ಹೋಗಲಾಡಿಸಲು ಮಕ್ಕಳಿಗೆ ಹಾಲು ವಿತರಿಸಲಾಗಿದೆʼ ಎಂದು ತಿಳಿಸಿದರು.
ಸಂಗನಹಳ್ಳಿ ಗ್ರಾಮದ ಸಮಾಜ ಸೇವಕ ಜಿತೇಂದ್ರ ಕವಾಲೆ ಹಾಗೂ ಅಶೋಕ ಕಡಮಂಚಿ, ರಾಮು ಚೆಟ್ಟೆಪ್ಪ ಮತ್ತಿತರರು ಇದ್ದರು.