ಇಂದಿನ ಡಿಜಿಟಲ್ ಯುಗದ ವ್ಯವಹಾರದಲ್ಲಿ ಸೈಬರ್ ವಂಚನೆ ಹಾಗೂ ಮೋಸಗಳು ನಿರಂತರವಾಗಿ ನಡೆಯುತ್ತಿದ್ದು, ಇದರ ಬಗ್ಗೆ ಹೆಚ್ಚು ಎಚ್ಚರವಹಿಸಿ, ಜನಸಾಮಾನ್ಯರು ಜಾಗೃತಗೊಳ್ಳಬೇಕಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ತಿಳಿಸಿದರು.
ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ʼಡಿಜಿಟಲ್ ತಂತ್ತಜ್ಞಾನ ಹಾಗೂ ಸೈಬರ್ ಸೆಕ್ಯೂರಿಟಿ ಅರಿವುʼ ಹಮ್ಮಿಕೊಂಡಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಪ್ರತಿದಿನ ಎಲ್ಲಾದರೂ ಒಂದು ಕಡೆ ಸೈಬರ್ ಅಪರಾಧಗಳು ಜರುಗುತ್ತಲೇ ಇವೆ. ವಂಚಕರು ವಿನೂತನ ತಂತ್ರಜ್ಞಾನದಿಂದ ಜನರಿಗೆ ಮೋಸ ಮಾಡುತ್ತಿದ್ದಾರೆʼ ಎಂದರು.
ಭಾಲ್ಕಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಶಿವಾನಂದ ಪವಾಡಶೆಟ್ಟಿ ಮಾತನಾಡಿ, ʼವ್ಯಕ್ತಿಗಳ ವೈಯಕ್ತಿಕ ಮಾಹಿತಿ ಅವರಿಗೆ ಗೊತ್ತಿಲ್ಲದಂತೆಯೇ ವಂಚಕರಿಗೆ ಸುಲಭವಾಗಿ ದೊರೆಯುತ್ತಿರುವುದು ದುರಂತವಾಗಿದೆ. ಪ್ರತಿಯೊಬ್ಬರು ತಮ್ಮ ಡಿವೈಸ್ಗಳನ್ನು ಅತ್ಯಂತ ಜಾಗೃತಿ ವಹಿಸಿ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮೊಬೈಲ್ ಬಳಕೆಯ ಸಂದರ್ಭದಲ್ಲೂ ಸಹ ಸದಾ ಎಚ್ಚರ ವಹಿಸಬೇಕಾಗಿದೆʼ ಎಂದರು.
ಭಾಲ್ಕಿ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕ ಗುರುಪಾದ ಬಿರಾದಾರ ಮಾತನಾಡಿ, ʼವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಬಳಕೆದಾರರು ಯಾವುದೋ ಗ್ರೂಪಿಗೆ ಅಡ್ಮಿನ್ ಆಗಿದ್ದರೆ ಆ ಗ್ರೂಪಿಗೆ ಅಪರಾಧದ ಅಂಶಗಳು ಹರಿದಾಡಿದರೆ ಅದರ ಅಡ್ಮಿನ್ ಅವರನ್ನು ಜವಾಬ್ದಾರರಾಗಿ ಮಾಡಲಾಗುತ್ತದೆ. ವಂಚಕರಿಂದ ಫೇಕ್ಕಾಲ್, ಹನಿಟ್ರ್ಯಾಪ್, ವಿಡಿಯೋ ಕಾಲ್, ಓಟಿಪಿ ಬಳಕೆ ಹಾಗೂ ಎಟಿಎಮ್ ಮೋಸದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದಿನ ಆಧುನಿಕ ಯುಗದಲ್ಲಿ ಇವುಗಳ ನಿಯಂತ್ರಣ ತುರ್ತಾಗಿದೆ. ಇಲ್ಲದಿದ್ದರೆ ಅಮಾಯಕರು ಮೋಸಗಾರರ ವಂಚನೆಗೆ ಒಳಗಾಗುತ್ತಾರೆʼ ಎಂದರು.
ʼಯಾರೇ ಮೋಸಕ್ಕೆ ಒಳಗಾದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲೆಯಲ್ಲಿನ ಸೈಬರ್ ಅಪರಾಧ ಕೇಂದ್ರಕ್ಕೆ ದೂರು ಸಲ್ಲಿಸಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಜಾಗೃತರಾಗಿರಬೇಕು. ಸುಳ್ಳು ಕರೆಗಳಿಗೆ ಮೋಸ ಹೋಗದಂತೆ ನಿಗಾವಹಿಸಬೇಕುʼ ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಂಸ್ಕೃತಿಕ ಅಧ್ಯಯನವು ಆಧುನಿಕ ಸಂಶೋಧನೆಯ ಭಾಗ : ದುಶಾನ್ ಡೀಕ್
ರಾಷ್ಟ್ರೀಯ ಮಾಹಿತಿ ಕೇಂದ್ರದ ಕೆ.ಶ್ರೀನಿವಾಸ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶಾಂತಲಿಂಗ ಸಾವಳಗಿ, ನಾಗಭೂಷಣ ಕಮಠಾಣೆ, ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್, ಕುಲಸಚಿವೆ(ಆಡಳಿತ) ಸುರೇಖಾ, ಶಿಕ್ಷಣ ನಿಕಾಯದ ಡೀನ್ ಡಾ.ಮಲ್ಲಿಕಾರ್ಜುನ ಕನಕಟ್ಟೆ, ವಾಣಿಜ್ಯ ಹಾಗೂ ನಿರ್ವಹಣಾ ನಿಕಾಯದ ಡೀನ್ ಡಾ.ಶರಣಪ್ಪ ಮಲಗೊಂಡ, ಧನ್ನೂರಾ ಪೊಲೀಸ್ ಉಪನಿರೀಕ್ಷಕ ವಿಶ್ವರಾಧ್ಯ ಹಾಗೂ ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಅಜಿತಕುಮಾರ, ಭರತರಾಜ್ ಹಾಗೂ ಸಿಬ್ಬಂದಿ ಇದ್ದರು.