ಸಾಂಸ್ಕೃತಿಕ ಅಧ್ಯಯನವು ಸಮಾಜ, ರಾಜಕಾರಣ, ಆರ್ಥಿಕತೆ, ಧಾರ್ಮಿಕತೆ ಹಾಗೂ ಲಿಂಗ ರಾಜಕಾರಣಗಳಲ್ಲಿ ಕಂಡು ಬರುವ ಅಧಿಕಾರ ಮತ್ತು ಅಧೀನತೆಯ ಸಂಕಥನವಾಗಿದೆ. ಹಲವು ಸಿದ್ಧಾಂತಗಳನ್ನು ಪರಿಕಾರವಾಗಿ ಬಳಸಿ ಸಾಂಸ್ಕೃತಿಕ ಅಧ್ಯಯನ ನಡೆಸಲಾಗುತ್ತಿದೆ ಎಂದು ಸ್ಲೋವಾಕಿಯಾದ ಕೊಮೆನಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ದುಶಾನ್ ಡೀಕ್ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಶೋಧಕರೊಂದಿಗೆ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ʼಸಾಂಸ್ಕೃತಿಕ ಅಧ್ಯಯನವು ಆಧುನಿಕ ಸಂಶೋಧನೆಯ ಭಾಗವಾಗಿದೆ. ಇದೊಂದು ಬೌದ್ಧಿಕ ಮತ್ತು ವೈಚಾರಿಕ ಪ್ರಕ್ರಿಯೆಯಾಗಿದೆʼ ಎಂದರು.
ʼಅಧಿಕಾರದ ರಚನೆ, ಚಾರಿತ್ರಿಕ ಸಂದರ್ಭಗಳು, ಸಮಾಜದ ಸ್ತರ ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಾಂಸ್ಕೃತಿಕ ಅಧ್ಯಯನವು ಒದಗಿದ ಅರಿವಿನ ಕಣ್ಣಾಗಿದೆ. ಮಾರ್ಕ್ಸ್ ವಾದಿ, ಸ್ತ್ರೀವಾದಿ ಸಿದ್ಧಾಂತಗಳನ್ನು ಅನ್ವಯಿಸಿ ಮಾನವಶಾಸ್ತ್ರ, ಸಮಾಜಶಾಸ್ತ್ರ ಸೇರಿ ಅಂತರ್ಶಿಸ್ತೀಯ ಅಧ್ಯಯನದ ಕ್ರಮ ಸಾಂಸ್ಕೃತಿಕ ಅಧ್ಯಯನದಲ್ಲಿ ಸಾಧ್ಯʼ ಎಂದರು.
ʼಚರಿತ್ರೆಯ ರೂಪುಗೊಳ್ಳುವ ಕ್ರಮ ಯಾವಾಗಲು ಕೇಂದ್ರದಿಂದಲೇ ಅನುಸರಿಸಿದ್ದೇವೆ. ಜನ ಸಮುದಾಯದ ಸಂಸ್ಕೃತಿ, ಆಚರಣೆ, ನಂಬಿಕೆಗಳ ಒಟ್ಟು ಮೌಲ್ಯಗಳನ್ನು ಗ್ರಹಿಸಿದರೆ, ಅಂಚಿನಲ್ಲಿನರಿಗೂ ಇರುವ ಐತಿಹಾಸಿಕ ಅಸ್ಮಿತೆಯನ್ನು ಕಟ್ಟಿಕೊಡಬಹುದು. ಜನ ಸಮುದಾಯದಿಂದಲೇ ಕಲ್ಯಾಣ ನೆಲದಲ್ಲಿ ಚಳುವಳಿ ಆರಂಭವಾಯಿತು. ಜನರ ತೀವ್ರವಾದ ಅನುಭವಗಳೇ ಸೃಜನಗೊಂಡು ವಚನಗಳಾದವು. ವಚನ ಸಾಹಿತ್ಯ ತನ್ನೊಳಗೆ ಹಲವು ತಾತ್ವಿಕತೆಗಳು ಇರಿಸಿಕೊಂಡು ಇಂದಿಗೂ ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿಯಲ್ಲಿ ಹಲವು ಆಯಾಮಗಳಲ್ಲಿ ವಿಶ್ಲೇಷಣೆಗೆ ಒಳಗಾಗುತ್ತಿದೆʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಂಸ್ಕೃತಿಕ ಅಧ್ಯಯನವನ್ನು ವಿದ್ವತ್ ವಲಯದಲ್ಲಿ, ಬೌದ್ಧಿಕ ಲೋಕದಲ್ಲಿ ವಿಮರ್ಶೆಯ ಹೊಸ ಮಾದರಿಯಾಗಿ ಈ ಕಾಲದಲ್ಲಿ ಪರಿಗಣಿಸಲಾಗುತ್ತದೆ. ಬಹುತ್ವದ ಆಯಾಮವನ್ನು ಪ್ರತಿಪಾದಿಸುವ ಸಾಂಸ್ಕೃತಿಕ ಅಧ್ಯಯನವು ಜನಪ್ರಿಯ ಸಂಸ್ಕೃತಿಯ ಕುರಿತು ಅನುಸಂಧಾನ ನಡೆಸುತ್ತಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಾತಿ ಆದಾಯ ಪ್ರಮಾಣ ಪತ್ರಕ್ಕೆ ಸಹಾಯವಾಣಿ ಆರಂಭ : ಡಿಸಿ ಶಿಲ್ಪಾ ಶರ್ಮಾ
ಡಾ.ದುಶಾನ್ ಡೀಕ್ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಪವನ ಪಾಟೀಲ, ನೀಲಮ್ಮ ಮೇತ್ರೆ, ನಾಗವೇಣಿ ಬಿರಾದಾರ,ರೋಶನ್ ಬಿ, ಸಂಗೀತಾ ಮಹಾಗಾವೆ, ಗುರುದೇವಿ ಕಿಚಡೆ, ಪ್ರವೀಣ ಬಿರಾದಾರ, ಕೃಷ್ಣ ಸಸ್ತಾಪುರ, ನಾಗರಾಜ ನಾಸೆ ಅನೇಕರಿದ್ದರು. ಚನ್ನಬಸಪ್ಪ ಗೌರ ನಿರೂಪಿಸಿದರು. ಗಂಗಾಧರ ಸಾಲಿಮಠ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.