ಬಸವಣ್ಣನವರ ಕಾಯಕದ ಪುಣ್ಯ ಭೂಮಿಯಲ್ಲಿ ಬಸವಣ್ಣನವರ ಆಶಯದಂತೆ ಮತ್ತು ತತ್ವ ಸಿದ್ಧಾಂತಕ್ಕೆ ಧಕ್ಕೆ ಬರಬಾರದೆಂಬ ಉದ್ದೇಶದಿಂದ ಬಸವಕಲ್ಯಾಣ ನಗರದಲ್ಲಿ ಸೆ.22ರಿಂದ ಅ.2ರವರೆಗೆ ರಂಭಾಪುರಿ ಸ್ವಾಮೀಜಿ ನೇತ್ರತ್ವದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಬಸವಕಲ್ಯಾಣ ಹಾರಕೂಡ ಸಂಸ್ಥಾನ ಮಠದ ಚನ್ನವೀರ ಶಿವಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ರಂಭಾಪುರಿ ಪೀಠದ ʼಮಾನವ ಧರ್ಮಕ್ಕೆ ಜಯವಾಗಲಿʼ ಎಂಬ ಘೋಷ ವಾಕ್ಯದ ಉದ್ದೇಶದಂತೆ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ನಮ್ಮ ಸಮಿತಿಯ ತೀರ್ಮಾನದಂತೆ ಭಕ್ತರು ಹೊರುವ ಬದಲು ಅಲಂಕೃತ ವಾಹನದಲ್ಲಿ ಮಾಡಬೇಕೆಂದು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ ರಂಭಾಪುರಿ ಶ್ರೀಗಳು ಅವರ ಪೀಠದ ಪರಂಪರೆಯಂತೆ ಭಕ್ತರ ಹೆಗಲ ಮೇಲೆಯೇ ಪಲ್ಲಕ್ಕಿ ಉತ್ಸವ ಮಾಡಿಕೊಳ್ಳುತ್ತೇವೆ ಎಂದು ಹಠ ಹಿಡಿದಿರುವ ಕಾರಣ ಈ ಸಮಾರಂಭದಿಂದ ಹಿಂದೆ ಸರಿದಿದ್ದೇನೆ ಎಂದು ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಗಳ ಬರೆದ ಪತ್ರದಲ್ಲಿ ಏನಿದೆ?
ʼಕೆಲ ತಿಂಗಳ ಹಿಂದೆ ಭಕ್ತರು ಮತ್ತು ಕೆಲವು ಮಠಾಧೀಶರು ಸಭೆ ಸೇರಿ ರಂಭಾಪುರಿ ಜಗದ್ಗುರುಗಳ ವಾರ್ಷಿಕ ʼದಸರಾ ದರ್ಬಾರ್ ಸಮಾರಂಭವನ್ನು ಬಸವಣ್ಣನವರ ಕಾಯಕದ ಪುಣ್ಯ ಭೂಮಿ ಬಸವಕಲ್ಯಾಣದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
ದಸರಾ ದರ್ಬಾರ್ ಸಮಾರಂಭದ ಸ್ವಾಗತ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅನುಮತಿ ಮೇರೆಗೆ ಸಮಿತಿಯ ಕಾರ್ಯಧ್ಯಕ್ಷರಾದ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರ ಸಮ್ಮುಖದಲ್ಲಿ 2025ರ ಆ.10ರಂದು ಹಾರಕೂಡ ಶ್ರೀಮಠದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಸಭೆ ಸೇರಿ ಹಾರಕೂಡ ಶ್ರೀಗಳ ನೇತೃತ್ವದಲ್ಲಿ ಎಲ್ಲರ ಸಹಮತದೊಂದಿಗೆ ವಿಜಯ ದಶಮಿ ದಿನದಂದು ಬಸವಕಲ್ಯಾಣದಲ್ಲಿ ನಡೆಯುವ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿಯ ಮೆರವಣಿಗೆಯನ್ನು ಭಕ್ತರ ಹೆಗಲ ಮೇಲೆ ಮಾಡದೆ ಅಲಂಕೃತ ವಾಹನದಲ್ಲಿ ನಡೆಸಬೇಕೆಂದು ಎಲ್ಲರ ಒಮ್ಮತದಿಂದ ತೀರ್ಮಾನಿಸಲಾಯಿತು.

ಆದರೆ, ಆ.13 ತಡೋಳಾ ರಾಜೇಶ್ವರ ಶಿವಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು 20 ಸ್ವಾಮೀಜಿಗಳು ಹಾರಕೂಡ ಮಠಕ್ಕೆ ಆಗಮಿಸಿದರು. ʼಬಸವಕಲ್ಯಾಣದಲ್ಲಿ ವಿಜಯ ದಶಮಿಯ ದಿನ ದಸರಾ ದರ್ಬಾರ್ ಸಮಾರಂಭದಲ್ಲಿ ನಾವು ರಂಭಾಪುರಿ ಸ್ವಾಮೀಜಿಯವರ ಅಡ್ಡಪಲ್ಲಕ್ಕಿಯನ್ನು ಭಕ್ತರ ಹೆಗಲ ಮೇಲೆಯೇ ಮಾಡುತ್ತೇವೆʼ ಎಂದು ಹಠ ಹಿಡಿದು ನಿರ್ಗಮಿಸಿದರು.
ʼನಾವು ಈ ಮೊದಲು ಸಮಿತಿಯವರು ತೆಗೆದುಕೊಂಡ ನಿರ್ಣಯ ಬದಲಿಸಲು ನಿರಾಕರಿಸಿ ʼದಸರಾ ದರ್ಬಾರ್ʼ ದಿಂದ ನಾನು ದೂರ ಸರಿಯಲು ತೀರ್ಮಾಸಿದ್ದೇವೆ. ಕೋಟ್ಯಂತರ ಬಸವ ಭಕ್ತರಿಗೂ ಮತ್ತು ಮಾನವೀಯತೆಯಲ್ಲಿ ನಂಬಿಕೆಯಿಟ್ಟ ಜನರ ಮನಸ್ಸುಗಳನ್ನು ಘಾಸಿಗೊಳಿಸಬಾರದೆಂದು ದಸರಾ ದರ್ಬಾರ್ದಿಂದ ನಾವು ದೂರ ಸರಿದಿದ್ದೇವೆʼ ಎಂದು ಹಾರಕೂಡ ಶ್ರೀಗಳು ತಿಳಿಸಿದ್ದಾರೆ.
ʼಈ ಸಮಾಜದಲ್ಲಿ ಒಡಕು ಉಂಟಾಗಬಾರದೆಂದು ನಮ್ಮ ನಿರ್ಣಯಕ್ಕೆ ಬದ್ಧವಾಗಿ ದಸರಾ ದರ್ಬಾರ್ ಸಮಾರಂಭದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದೇವೆ. ನಾವುಗಳು, ನಮ್ಮ ಮಠ ಮತ್ತು ನಾನು ಎಂದೂ ಯಾರಿಗೂ ಮನಸ್ಸು ನೋಯಿಸಿಲ್ಲ, ಮುಂದೆಯೂ ನೋಯಿಸುವುದಿಲ್ಲ. ಆದರೆ, ಅವರ ಪರಂಪರೆ ಬೇಡ ಎನ್ನಲು ನಮಗೆ ಹಕ್ಕಿಲ್ಲ, ಅವರು ಆಚರಿಸುವ ದಸರಾ ದರ್ಬಾರ್ಕ್ಕೆ ನಮ್ಮ ಶುಭ ಹಾರೈಕೆ ಇರುತ್ತದೆʼ ಎಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬೀದರ್ | 79ನೇ ಸ್ವಾತಂತ್ರ್ಯ ದಿನಾಚರಣೆ : ಧ್ವಜಾರೋಹಣ ನೆರೆವೇರಿಸಿದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಹಾರಕೂಡದ ಚನ್ನವೀರ ಶಿವಚಾರ್ಯ ಸ್ವಾಮೀಜಿ ಅವರು ʼಈದಿನ.ಕಾಮ್ʼ ಜೊತೆ ಮಾತನಾಡಿ, ʼಬಸವಕಲ್ಯಾಣದಲ್ಲಿ ಅಡ್ಡಪಲ್ಲಕಿಯಿಂದ ಸಮಸ್ಯೆಯಾಗುತ್ತದೆ. ಬೇಕಾದರೆ ಅಲಂಕೃತ ವಾಹನದಲ್ಲಿ ಮಾಡೋಣ ಎಂದು ತೀರ್ಮಾನಿಸಿದರೂ ರಂಭಾಪುರಿ ಶ್ರೀಗಳು ನಮ್ಮ ತೀರ್ಮಾನಕ್ಕೆ ಒಪ್ಪದೆ ʼನಮ್ಮ ಪರಂಪರೆಯಂತೆ ಅಡ್ಡಪಲ್ಲಕ್ಕಿ ಉತ್ಸವ ಮಾಡುತ್ತೇವೆʼ ಎಂದು ಹೇಳಿದ್ದಾರೆ. ಆದರಿಂದ, ದಸರಾ ದರ್ಬಾರ್ದಿಂದ ಹಿಂದೆ ಸರಿದಿದ್ದು, ಯಾವುದೇ ಕಾರಣಕ್ಕೂ ಆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲʼ ಎಂದು ಹೇಳಿದ್ದಾರೆ.