ಲೋಕದ ಎಲ್ಲ ಸಂಗತಿಗಳನ್ನು ಕುರಿತು ತಾರ್ಕಿಕವಾಗಿ, ವೈಚಾರಿಕವಾಗಿ ಪರಿಶೀಲಿಸುವ ಗುಣ ವಿಜ್ಞಾನಕ್ಕಿದೆ. ವೈಜ್ಞಾನಿಕ ವಲಯದಲ್ಲಿ ಎಲ್ಲವೂ ಪ್ರಶ್ನಾರ್ಹವೇ ಆಗಿದೆ ಎಂದು ಬಸವಕಲ್ಯಾಣ ತಹಶೀಲ್ದಾರ್ ಡಾ.ದತ್ತಾತ್ರೇಯ ಗಾದಾ ಹೇಳಿದರು.
ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ʼವಿಜ್ಞಾನದ ಕಡೆಗೆ ಒಂದೆರಡು ಹೆಜ್ಜೆʼ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼತನ್ನ ಆಳದಲ್ಲಿ ಹಲವು ಸಮರ್ಥವಾದ ಪ್ರಶ್ನೆಗಳನ್ನು , ಸವಾಲುಗಳನ್ನು ಇರಿಸಿಕೊಂಡು ಶೋಧಿಸುವ ಪ್ರಕ್ರಿಯೆ ವಿಜ್ಞಾನದ್ದಾಗಿದೆʼ ಎಂದರು.
ʼಪ್ರತಿ ಸವಾಲುಗಳಿಗೆ, ಪ್ರಶ್ನೆಗಳಿಗೆ ಪ್ರಯೋಗ, ಸಂಶೋಧನೆ ತರ್ಕದ ಮೂಲಕ ಫಲಿತಾಂಶಗಳನ್ನು ಕಂಡುಕೊಳ್ಳುವ ಪ್ರತೀತಿ ವಿಜ್ಞಾನದಲ್ಲಿದೆ. ಜಗತ್ತಿನ ಪ್ರತಿ ಸಂಗತಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಕಾಣಬೇಕು. ವಿಜ್ಞಾನದ ಸೈದ್ಧಾಂತಿಕ ಜ್ಞಾನದ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಹೊಸ ತಿಳುವಳಿಕೆ ಪಡೆಯಬೇಕುʼ ಎಂದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರವೀಂದ್ರನಾಥ ನಾರಾಯಣಪುರ ಮಾತನಾಡಿ, ʼಭಾರತೀಯ ಸಂವಿಧಾನ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಆದ್ಯತೆ ನೀಡಿದೆ. ಮೌಢ್ಯ ತೊಡೆದು ಹಾಕುವ ಉದ್ದೇಶ ಇದರ ಹಿಂದಿದೆ. ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವ ಗುಣ ವಿಜ್ಞಾನಕ್ಕಿದೆ. ವಿಜ್ಞಾನವೇ ಈ ಕಾಲದ ನಿಜವಾದ ಜೀವನ ಧರ್ಮವಾಗಿದೆʼ ಎಂದು ಹೇಳಿದರು.
ʼಕೃಷಿ, ಹೈನುಗಾರಿಕೆ, ಅಣು, ಕಣ , ಬಾಹ್ಯಕಾಶ, ತಂತ್ರಜ್ಞಾನ, ಆರೋಗ್ಯ ಸೇರಿ ಹಲವು ರೀತಿಯ ವೈಜ್ಞಾನಿಕ ಶೋಧನೆಗಳು ನಿರಂತರ ನಡೆದಿವೆ. ಮೂಲ ವಿಜ್ಞಾನದ ಬೆಳವಣಿಗೆಗಾಗಿಯೇ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸ್ಥಾಪನೆಯಾಗಿದೆ. ವಿಜ್ಞಾನವು ನಮ್ಮ ಸುತ್ತಲಿನ ಜಗತ್ತನ್ನು, ಪರಿಸರವನ್ನು ಅರ್ಥೈಸಿಕೊಂಡು ಕಲಿಯಬೇಕಾದ ವಿಷಯವಾಗಿದೆ. ಅದರ ಬದಲಾಗಿ ಕಂಠಪಾಠಮಾಡಿ ಕಲಿಯುತ್ತಿರುವುದು ಇಂದು ದುರಂತದ ಸಂಗತಿಯಾಗಿದೆʼ ಎಂದರು.
ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ʼನಮ್ಮ ಹಲವಾರು ಪ್ರಶ್ನೆಗಳಿಗೆ ಮತ್ತು ಸವಾಲುಗಳಿಗೆ ವೈಜ್ಞಾನಿಕ ಸಂಶೋಧನೆಗಳಲ್ಲಿ ಉತ್ತರಗಳಿವೆ. ಸಿ.ವಿ. ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದ ನೆನಪು ರಾಷ್ಟ್ರೀಯ ವಿಜ್ಞಾನದ ದಿನವಾಗಿ ಆಚರಿಸಲಾಗುತ್ತದೆ. ವೈಜ್ಞಾನಿಕ ಅರಿವು ಎಲ್ಲರಿಗೂ ಅತ್ಯಗತ್ಯʼ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವದಿಂದ ಬದುಕು ಕಟ್ಟಿಕೊಳ್ಳಬೇಕು. ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರ. ಎಲ್ಲರಲ್ಲೂ ವೈಜ್ಞಾನಿಕ ಮನೋಧರ್ಮ ಇರುವುದು ಅಗತ್ಯʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ನಲ್ಲಿ ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು, ಯಾರು ಏನಂದ್ರು?
ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ, ಅಶೋಕ ರೆಡ್ಡಿ, ವಿವೇಕಾನಂದ ಶಿಂಧೆ, ಗಂಗಾಧರ ಸಾಲಿಮಠ, ಸಚಿನ್ ಬಿಡವೆ, ನೀಲಮ್ಮ ಮೇತ್ರೆ, ನಾಗವೇಣಿ ಬಿರಾದಾರ, ಸಂಗೀತಾ ಮಹಾಗಾವೆ, ಜಗದೇವಿ ಜಾವಳಗೆ, ಕೃಷ್ಣ ಸದಲಾಪುರ ಸೇರಿ ಹಲವರಿದ್ದರು. ಡಾ. ಶಾಂತಲಾ ಖಂಡಾಳೆ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿದರು. ಪವನ ಪಾಟೀಲ ವಂದಿಸಿದರು.