ʼಶಿಕ್ಷಣಕ್ಕೆ ಭದ್ರತೆ, ಜೀವನ, ಬದುಕು, ಅನ್ನ, ನೆಮ್ಮದಿ ಸೇರಿದಂತೆ ನಾನಾ ಅರ್ಥಗಳಿವೆ. ಈ ಅರ್ಥಗಳಿಗೆ ಪೂರಕವಾಗುವಂಥ ಕನ್ನಡ ಪಠ್ಯಪುಸ್ತಕಗಳು ಸಿದ್ಧಪಡಿಸಬೇಕು. ಎಸ್ಇಪಿ ಜಾರಿಗೆ ಬಂದರೆ ಕನ್ನಡ ಉಳಿದು ಬೆಳೆಯುತ್ತದೆʼ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನುಡಿದರು.
ಬೀದರ್ ನಗರದಲ್ಲಿ ಶನಿವಾರ ಕರ್ನಾಟಕ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಿದ ʼಕನ್ನಡ ಶಾಲೆಗಳ ಸ್ಥಿತಿ-ಗತಿ ಪರಿಹಾರೋಪಾಯಗಳುʼ ಕುರಿತಾದ ಸಂವಾದ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ʼಕನ್ನಡ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಳು ಅನುತೀರ್ಣರಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹುಡಕಬೇಕಾಗಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆʼ ಎಂದರು.
ʼಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಎಲ್ಲ ವಲಯಗಳಿಗೆ ಅನುಕೂಲತೆಗಳು ದೊರಕಬೇಕು. ಸರ್ಕಾರದ ನಿಲುವು ಅಚಲವಾಗಿದೆ. ರಾಜ್ಯದಲ್ಲಿ 55 ಸಾವಿರ ಶಿಕ್ಷಕರ ಹುದ್ದೆಗಳು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಈ ದಿಶೆಯಲ್ಲಿ ಪ್ರಾಧಿಕಾರ ಸರ್ಕಾರದ ಗಮನ ಸೆಳೆದಿದೆ. ಕನ್ನಡ ಕಟ್ಟುವಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಅಧಿಕಾರಿಗಳು, ಪಾಲಕರು-ಪೋಷಕರ ಸಹಾಯ ಸಹಕಾರ ದೂರದೃಷ್ಟಿ ಅವಶ್ಯಕವಾಗಿದೆʼ ಎಂದರು.
ಅಖಿಲ ಕರ್ನಾಟಕ ಅನುದಾನಿತ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ʼಕರ್ನಾಟಕದಲ್ಲಿ 9-10 ವರ್ಷಗಳಿಂದ ಖಾಸಗಿ ಕನ್ನಡ ಶಾಲೆಗಳು ಮುಚ್ಚುತ್ತಿದ್ದಾರೆ. ಸರ್ಕಾರದ ವಿಪರಿತ ಕಠಿಣ ನಿಯಮಗಳಿಂದ ಕನ್ನಡ ಶಾಲೆಗಳು ಸೋತು ಸೊರಗುತ್ತಿವೆ. ನಮ್ಮ ಕನ್ನಡ ಶಾಲೆ ಹಾಗೂ ಮಾತೃಭಾಷೆ ಉಳಿಯಬೇಕಾಗಿದೆ. ಅನುದಾನಿತ ಕನ್ನಡ ಶಾಲಾ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಕನ್ನಡ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮವಾಗಿ ಪರಿವರ್ತಿಸುವುದು ತಕ್ಷಣವೇ ನಿಲ್ಲಿಸಬೇಕುʼ ಎಂದು ಆಗ್ರಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಮಾತನಾಡಿ, ʼಕರ್ನಾಟಕದಲ್ಲಿ ಶತಮಾನ ಕಂಡ ಅನೇಕ ಶಾಲೆಗಳಿವೆ. ಅವುಗಳಿಗೆ ಸರ್ಕಾರ ವಿಶೇಷ ಸೌಲಭ್ಯಗಳು ಕೊಡಬೇಕೆಂಬ ದಿಶೆಯಲ್ಲಿ ಪ್ರಾಧಿಕಾರ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಕನ್ನಡ ಶಾಲೆಗಳಿವೆ. ಅವುಗಳಿಗೆ ಶಕ್ತಿ ತುಂಬುವ ಕೆಲಸ ಪ್ರಾಧಿಕಾರ ಮಾಡಲಿದೆʼ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಕಾಶಿನಾಥ ಚೆಲ್ವಾ ಮಾತನಾಡಿ, ʼಕನ್ನಡ ಶಾಲೆಗಳಿಗೆ ವಿಶೇಷ ಪ್ಯಾಕೇಜ್ ಕೊಡಬೇಕು. ಅಂಗನವಾಡಿ ಶಾಲೆಗಳನ್ನು ಮೇರ್ಲ್ದಜೆಗೇರಿಸಬೇಕು. ಕನ್ನಡ ಶಾಲೆಗಳಿಗೆ ಕೊಠಡಿ, ನೀರು, ವಿದ್ಯುತ್, ಆಟದ ಮೈದಾನ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಿದರೆ ಕನ್ನಡ ಉಳಿಯುತ್ತವೆʼ ಎಂದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ, ʼಕನ್ನಡ ಭಾಷೆ ಬಳಕೆ ಮಾಡಿದರೆ ಮಾತ್ರ ಉಳಿಯುತ್ತದೆ. ಇಲ್ಲವಾದಲ್ಲಿ ಅಳಿಯುತ್ತದೆʼ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು, ಸಾಹಿತಿಗಳು ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದರು. ಸಾಹಿತ್ಯ ಸಂಘದ ಜಂಟಿ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ 36 ಪಿಯು ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ!
ಸಾಹಿತಿ ಎಸ್.ಬಿ. ಕುಚಬಾಳ ನಾಡಗೀತೆ ಹಾಡಿದರು. ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ. ಅಶೋಕ ಕೋರೆ ನಿರೂಪಿಸಿದರು. ಡಾ.ಸುರೇಖಾ ಬಿರಾದಾರ ವಂದಿಸಿದರು