ಜಿಲ್ಲೆಯಲ್ಲಿ ಕೆಲವು ವಾರಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಕಳೆದ ಒಂದು ವಾರದಿಂದ ಮುಂಜಾನೆ ಬಿಸಿಲಿನಿಂದ ಶುರುವಾಗುವ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಧಗೆ ಏರತೊಡಗುತ್ತದೆ. ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಮಳೆಯಾಗುತ್ತಿದೆ. ಒಮ್ಮೊಮ್ಮೆ ಮಧ್ಯಾಹ್ನದ ವೇಳೆಯಲ್ಲೇ ಬಿರುಗಾಳಿ, ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ.
ಬೇಸಿಗೆಯ ಧಗೆ ಮರೆಸಿದ ಅಕಾಲಿಕ ಮಳೆಗೆ ಬೇಸತ್ತ ಜನ ʼಈ ಮಳಿ ಏನ್ ಮಳಗಾಲ್ದಾಗ್ ಮಾಡಿನಂಗೇ ಸಾಕ್ ಮಾಡ್ಯಾದ್ʼ ಎಂದು ಆಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೆಲವೆಡೆ ಸಾಲ ಮಾಡಿ ಮಾವು, ಪಪ್ಪಾಯ, ಬಾಳೆ, ಕಲ್ಲಂಗಡಿ, ಮಾವು, ಈರುಳ್ಳಿ ಸೇರಿದಂತೆ ಇತರೆ ತರಕಾರಿ ಬೆಳೆಗಳ ಮೇಲೆ ಹಾಕಿದ ಬಂಡವಾಳ ಅಕಾಲಿಕ ಮಳೆಯಿಂದ ಬಹುಪಾಲು ಹಾನಿಯಾಗಿದೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಜಿಲ್ಲಾದ್ಯಂತ ಲಕ್ಷಾಂತರ ಮೌಲ್ಯದ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕೈಗೊಂಡಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ 325ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಬಸವಕಲ್ಯಾಣ, ಔರಾದ್, ಹುಲಸೂರ, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನಲ್ಲಿ ಬೆಳೆದ ಮಾವು 122.25 ಹೆಕ್ಟೇರ್, ಪಪ್ಪಾಯ 87.3, ಟೊಮೆಟೊ 43.3, ಕಲ್ಲಂಗಡಿ 29.97, ಈರುಳ್ಳಿ 18, ತರಕಾರಿ 13.8 ಸೇರಿದಂತೆ ಒಟ್ಟು 325 ಹೆಕ್ಟೇರ್ ತೋಟಗಾರಿಕೆ ಬೆಳೆ ನೆಲಕಚ್ಚಿದ್ದು, ಆದಾಯ ನಿರೀಕ್ಷೆಯಲ್ಲಿದ್ದ ಸುಮಾರು 350 ಬೆಳೆಗಾರರಿಗೆ ಅಕಾಲಿಕ ಮಳೆ ಸಂಕಷ್ಟಕ್ಕೆ ದೂಡಿದೆ.
ಬೆಳೆ ಹಾನಿ ಕುರಿತು ತೋಟಗಾರಿಕೆಯ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾನಿಗೀಡಾದ ಜಮೀನುಗಳಿಗೆ ತೆರಳಿ, ಜಿಯೊ ಟ್ಯಾಗ್ ಸಹಿತ ರೈತರ ಫೋಟೊಗಳನ್ನು ತೆಗೆದುಕೊಂಡು ಹಾನಿಯ ಅಂದಾಜು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿ ವಿಜಯಕುಮಾರ್ ಜಿ. ಹೇಳುತ್ತಾರೆ.
ಆಲಿಕಲ್ಲು ಮಳೆಗೆ ಬೆಳೆ ಬರ್ಬಾದ್ :
ʼಐದು ಎಕರೆ ಭೂಮಿಯಲ್ಲಿ ಪಪ್ಪಾಯ ಬೆಳೆದಿದ್ದೆ, ಎರಡು ವಾರದ ಹಿಂದೆ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಪಪ್ಪಾಯ ಸಂಪೂರ್ಣ ಹಾಳಾಗಿದೆ. ʼಏನ್ ಮಾಡ್ಬೇಕ್, ನಮ್ ರೈತರ ಹಣೆಬರಹನೇ ಇಷ್ಟು, ಲಾಕೋ ರೂಪಾಯಿ ಹಾಕಿ ಪಪ್ಪಾಯ ಛಂದ್ ಬೆಳೆಸಿದಾ, ಕೈಗೆ ಬಂದ್ ಯಾಳಿಗಿ ಮಳಿ, ಗಾರ್ ಬಿದ್ದಿ ಎಲ್ಲ ಬರ್ಬಾದ್ ಆಗಿ, ಪಪ್ಪಾಯ ಗಿಡಗೆಳೆಲ್ಲ ಒಣಗಿನ ಕಡ್ಡಿ ಹಾಂಗ್ ಆಗ್ಯಾವ್. ಹಿಂಗಾಗಿ ನಾಲ್ಕೈದ್ ಲಾಕ್ ರೂಪಾಯಿ ಹಾಳಾಗ್ಯಾದ್. ಅಧಿಕಾರಿಗಳು ಹೊಲುಕ್ ಬಂದಿ ಸರ್ವೇ ಏನೋ ಮಾಡ್ಕೊಂಡ್ ಹೋಗ್ಯಾರ್, ಖರೇ ನಾವ್ ಕಳ್ಕೊಂಡಿನ್ ಅರ್ಧನೂ ರೊಕ್ಕನೂ ಸರ್ಕಾರ ಕೊಡಲ್ಲ, ಇದರಿಂದ ಭಾಳ್ ಪರೇಶ್ಯಾನ್ ಆಗಿದ್ದೇವ್ʼ ಎಂದು ಖಟಕ್ ಚಿಂಚೋಳಿ ಗ್ರಾಮದ ರೈತ ಮಲ್ಲಿಕಾರ್ಜುನ್ ಅವರು ತಮ್ಮ ನೋವು ತೋಡಿಕೊಂಡರು.
ʼಹೋದ್ ವರ್ಷ್ ಇಷ್ಟ್ ಮಳಿ ಇದ್ದಿಲ್ಲ, ಹಿಂಗ್ ಯಾವುದೂ ಬೆಳಿಗಿ ಹಾನಿ ಆಗಿದಿಲ್ಲ ನೋಡಿ. ಹಿಂಗಾಗಿ ಹೋದವರ್ಷ್ ಏನಾರಾ ಪಂದ್ರಾ ಲಾಕ್ ಪಪ್ಪಾಯ ಬೆಳಿ ಕೈಯಿಗಿ ಬಂದಿತ್ತು. ಈ ವರ್ಷ ನಮ್ ಮೈನಾತಿ ಎಲ್ಲಾನೂ ಈ ಅವಖಳಿ ಮಳಿ ಖರಾಬ್ ಮಾಡ್ತುʼ ಅಂತ ರೈತ ಮಲ್ಲಿಕಾರ್ಜುನ್ ಅವರು ತಮ್ಮ ಸಂಕಟ ʼಈದಿನ.ಕಾಮ್ʼ ಜೊತೆಗೆ ಹಂಚಿಕೊಂಡರು.
ʼಒಂದೂವರೆ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದೇನೆ. ಕಟಾವಿನ ಬಳಿಕ ಹೊಲದಲ್ಲಿ ಸಂಗ್ರಹಿಸಿಟ್ಟ ಸುಮಾರು 150 ಕ್ವಿಂಟಲ್ನಷ್ಟು ಈರುಳ್ಳಿ ಅಕಾಲಿಕ ಮಳೆಯಿಂದಾಗಿ ಬಹುಪಾಲು ಬೆಳೆ ಹಾನಿಯಾಗಿದೆ. ಲಕ್ಷಾಂತರ ಮೌಲ್ಯದ ಹಾನಿಯಾದ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕುʼ ಎಂದು ಭಾಲ್ಕಿ ತಾಲೂಕಿನ ರೈತ ಶಿವಕುಮಾರ್ ಆಗ್ರಹಿಸುತ್ತಾರೆ.

ʼಈ ವರ್ಷವೇ ಹೊಸದಾಗಿ ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಕಲ್ಲಂಗಡಿ ಬೆಳೆ ಜಲಾವೃತವಾಗಿದೆ. ಕಟಾವಿಗೆ ಮುನ್ನವೇ ಬೆಳೆ ನೀರಲ್ಲಿ ಮುಳುಗಿದೆ. ಇದರಿಂದ ಕನಿಷ್ಠ 5 ಲಕ್ಷ ರೂಪಾಯಿ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಕುರಿತು ಇನ್ನೂ ಸಮೀಕ್ಷೆ ನಡೆಸಿಲ್ಲʼ ಎಂದು ಹುಮನಾಬಾದ್ ತಾಲ್ಲೂಕಿನ ವರವಟ್ಟಿ(ಕೆ) ಗ್ರಾಮದ ಯುವ ರೈತ ವೀರೇಶ ರೆಡ್ಡಿ ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾರಿಗೆ ಬಸ್ ಪಲ್ಟಿ : ಇಬ್ಬರಿಗೆ ಗಾಯ; ತಪ್ಪಿದ ಭಾರಿ ಅನಾಹುತ
ಮುಂದುವರೆದ ಮಳೆ ಅಬ್ಬರದಿಂದ ಅನೇಕ ಕಡೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ಕೆಲವೆಡೆ ಬೆಳೆ ಹಾನಿಯಾದರೂ ಜಂಟಿ ಸಮೀಕ್ಷೆ ಕಾರ್ಯ ಇನ್ನೂ ಕೈಗೊಂಡಿಲ್ಲ. ಶೀಘ್ರದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.