ಸಾರ್ವಜನಿಕರೊಂದಿಗೆ ಸೌಜನ್ಯಯುತವಾದ ಸ್ವಂದನಾಶೀಲ ವರ್ತನೆಯನ್ನು ತೋರಿಸದೇ ಕರ್ತವ್ಯದಲ್ಲಿ ಅಶಿಸ್ತು ತೋರಿರುವುದರಿಂದ ಬೀದರ್ ಪ್ರಾದೇಶಿಕ ಅರಣ್ಯ ವಲಯದ ಹೊನ್ನಿಕೇರಿ ಗಸ್ತು ಅರಣ್ಯ ಪಾಲಕ ದಸ್ತಗಿರಿಸಾಬ ಅವರನ್ನು ಅಮಾನತುಪಡಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಪ್ರಾದೇಶಿಕ ವಿಭಾಗ) ಆದೇಶಿಸಿದ್ದಾರೆ.
ʼಬೀದರ ನಗರದ ಏರ್ಪೊರ್ಟ್ ರಸ್ತೆಯಲ್ಲಿ ಏ.15 ರಂದು ರಾತ್ರಿ 9 ಗಂಟೆ ಸುಮಾರಿಗೆ ನೆಡುತೋಪು ನಿರ್ಮಾಣ ಮಾಡುವ ಕಾಮಗಾರಿ ಸಿದ್ಧತೆ ಮಾಡಿಕೊಳ್ಳುವ ವೇಳೆ ಸ್ಥಳೀಯ ದಿನಪತ್ರಿಕೆಯ ವರದಿಗಾರ ರವಿ ಭೂಸುಂಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮಧ್ಯ ವಾಗ್ವಾದ ಮತ್ತು ತಂಟೆ ತಕರಾರು ನಡೆದಿತ್ತು. ಈ ಸಂಬಂಧ ಬೀದರ್ ನಗರದ ಗಾಂಧಿ ಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲೆಯ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಗಸ್ತು ಅರಣ್ಯ ಪಾಲಕ ದಸ್ತಗಿರಿಸಾಬ ಅವರು ಸಾರ್ವಜನಿಕರೊಂದಿಗೆ ವಿನಯದಿಂದ ವರ್ತಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಗಳು 2021ರ ನಿಯಮ (3) ನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ಅಶಿಸ್ತು ತೋರಿರುವುದು ಹಾಗೂ ಈ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆಯಾಗಿ ಪ್ರಕರಣ ಸತ್ಯಾಸತ್ಯತೆಯು ತಿಳಿಯಬೇಕಾಗಿರುವುದರಿಂದ ಸದರಿ ಅಧಿಕಾರಿಯನ್ನು ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗುವ ಸಂಭವ ಹಿನ್ನೆಲೆ ದಸ್ತಗಿರಿಸಾಬ ಅವರನ್ನು ಕರ್ನಾಟಕ ಸಿವಿಲ್ ಸೇವಾ ( ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1) (ಡಿ) ಅನ್ವಯ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪತ್ರಕರ್ತನ ಮೇಲೆ ಹಲ್ಲೆ : ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ
ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ರಕರ್ತ ರವಿ ಭೂಸುಂಡೆ ಮೇಲೆ ನಡೆಸಿರುವ ಹಲ್ಲೆಯನ್ನು ಜಿಲ್ಲಾ ಹಾಗೂ ತಾಲ್ಲೂಕಿನ ಪತ್ರಕರ್ತರ ಸಂಘದ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿ, ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಬಂಧ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಟಿಪ್ಪಣಿ ಹೊರಡಿಸಿ ʼಪತ್ರಕರ್ತರೊಬ್ಬರ ಮೇಲೆ ಕೈಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕೂಡಲೇ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಿ ವರದಿ ನೀಡುವಂತೆʼ ಸೂಚಿಸಿದ್ದರು.