ರಾಷ್ಟ್ರ ಪುರುಷ, ರಾಷ್ಟ್ರವೀರ, ಧರ್ಮನಿರಪೇಕ್ಷ, ಜಾತ್ಯಾತೀತ ಮಹಾವೀರ, ರೈತ ಅಭಿವೃದ್ಧಿ, ಸ್ವದೇಶ ರಾಜ್ಯಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಇಂದಿನ ಯುವ ಜನಾಂಗವು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.
ಬೀದರ್ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಇಡೀ ದೇಶದಲ್ಲಿ ಶಿವಾಜಿ ಮಹಾರಾಜರಂತಹ ರಾಜರಿಲ್ಲ. ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ, ಶೌರ್ಯ, ಮಹಿಳಾ ಗೌರವ, ಜಾತ್ಯಾತೀತ ಮನೋಭಾವನೆ ಇತರೆ ರಾಜರಲ್ಲಿ ಕಾಣುವುದು ತೀರ ಕಡಿಮೆ. ರೈತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ನಡೆಸಿ ಗೆದ್ದಿದರು. ಗೆರಿಲ್ಲಾ ಯುದ್ಧ ಪರಿಣಿತರಾಗಿದ್ದರು. ತಾಯಿ ಜೀಜಾಮಾತಾ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಂಡ ಶಿವಾಜಿ ಮಹಾರಾಜರು ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ರಾಜ್ಯ ನಿರ್ಮಿಸಿದರುʼ ಎಂದು ತಿಳಿಸಿದರು.
ʼಶಿವಾಜಿ ಮಹಾರಾಜರು ಧರ್ಮನಿರಪೇಕ್ಷ, ಧರ್ಮಾತೀತ, ಜಾತ್ಯಾತೀತ ಆಗಿದ್ದರು. ಅವರ ಅಂಗರಕ್ಷಕರೇ ಮುಸ್ಲಿಂ ಸಮುದಾಯದವರಾಗಿದ್ದರು. ಅನೇಕ ಹುದ್ದೆಗಳಲ್ಲಿ ಮುಸ್ಲಿಂ ನಾಯಕರನ್ನು ನೇಮಿಸಿದ್ದರು. ಎಲ್ಲ ಸಮುದಾಯದವರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲವು ಜಾತಿ-ಜಾತಿಗಳಲ್ಲಿ ಕೋಮು-ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದ್ದು, ಎಲ್ಲ ಸಮುದಾಯಗಳು ಒಟ್ಟಾಗಿ ಸಹೋದರತ್ವದಿಂದ ಬಾಳಬೇಕುʼ ಎಂದು ನುಡಿದರು.

ʼನಮ್ಮ ಕರ್ನಾಟಕ-ಮಹಾರಾಷ್ಟ್ರದ ಸಂಬಂಧಗಳು ಶತಶತಮಾನಗಳಿಂದಲೂ ಭಾತೃತ್ವ ರೀತಿಯಲ್ಲಿವೆ. ಶಿವಾಜಿಯ ತಂದೆಯ ಸಮಾಧಿ ದಾವಣಗೆರೆಯಲ್ಲಿದೆ. ಶಿವಾಜಿಯು ಕರ್ನಾಟಕದಲ್ಲಿ ಅನೇಕ ದಿನ ಉಳಿದು ಅನನ್ಯವಾದ ಸಂಬಂಧ ಹೊಂದಿದ್ದರು. ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇತ್ತೀಚೆಗೆ ಉತ್ತಮ ಅಭಿವೃದ್ಧಿಯಾಗುತ್ತಿದೆʼ ಎಂದು ತಿಳಿಸಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಮಾತನಾಡಿ, ʼಶಿವಾಜಿ ಮಹಾರಾಜರು ಈ ದೇಶ ಕಂಡ ಪ್ರಸಿದ್ಧ ಮಹಾಪುರುಷರು. ಶಿವಾಜಿಯು ಯಾರ ವಿರೋಧಿಯೂ ಆಗಿರಲಿಲ್ಲ. ಎಲ್ಲ ಸಮುದಾಯಗಳನ್ನು ಒಟ್ಟಾಗಿ ರಾಜ್ಯಭಾರ ಮಾಡುತ್ತಿದ್ದರು. ಅನೇಕ ದೊಡ್ಡ ಹುದ್ದೆಗಳನ್ನು ಅಲ್ಪಸಂಖ್ಯಾತರ ಸಮುದಾಯದವರಿಗೆ ನೀಡಿದ್ದರು. ಸಮಾಜದಲ್ಲಿ ವೈವಿದ್ಯತೆ ಇದೆ. ಬೀದರನಲ್ಲಿ ಎಲ್ಲ ಸಮುದಾಯದವರು ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದಾರೆʼ ಎಂದು ತಿಳಿಸಿದರು.
ʼದೇವರನ್ನು ಕಾಣುವ ವ್ಯವಸ್ಥೆಯಲ್ಲಿಯೂ ವೈವಿದ್ಯತೆ ಇವೆ. ಬೀದರ, ಕರ್ನಾಟಕ, ದೇಶ, ವಿದೇಶಗಳಲ್ಲಿಯೂ ಆಯಾ ಪ್ರದೇಶಕ್ಕನುಗುಣವಾಗಿ ದೇವರನ್ನು ಕಾಣುವ ರೀತಿ, ತತ್ವ, ಕಲ್ಪನೆ ವೈವಿಧ್ಯಮಯವಾಗಿದೆ. ಆದರೆ ಮನುಷ್ಯ ಮಾತ್ರ ಎಲ್ಲೆಡೆ ಒಂದೇ ರೀತಿ ಆಗಿದ್ದಾನೆ. ಈ ನೆಲ, ಜಲ, ವಾಯು, ರಕ್ತ ಒಂದೇ, ಸಸ್ಯಹಾರ, ಮಾಂಸಾಹಾರ ಅವರವರ ಆಹಾರ ಪದ್ಧತಿಯಷ್ಟೆ, ಎಲ್ಲ ಸಮುದಾಯದವರು ಸೇರಿ ಬೀದರ ಜಿಲ್ಲೆಯನ್ನು ಅಭಿವೃದ್ಧಿಗೊಳಿಸೋಣʼ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಧಾರಶಿವ ಮಹಾರಾಷ್ಟ್ರದ ಮಾಜಿ ಸಂಸದ ಪ್ರೋ.ರವೀಂದ್ರ ವಿಶ್ವನಾಥರಾವ ಗಾಯಕವಾಡ ಅವರು ಅತಿಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೇಪ್ಪ ಖಾಶಂಪೂರ, ಈಶ್ವರಸಿಂಗ್ ಠಾಕೂರ ಹಾಗೂ ಸಮಾಜದ ಗಣ್ಯರಿಂದ ಪೂಜೆ ನೆರೆವೇರಿತು.
ಈ ಸುದ್ದಿ ಓದಿದ್ದೀರಾ? ಈದಿನ ವರದಿಗೆ ಸ್ಪಂದಿಸಿದ ಸಿಎಂ ಕಚೇರಿ : ಸ್ವಚ್ಛವಾದ ಬೀದರ್ನ ʼಪಾಪನಾಶ ಕೆರೆʼ
ಬೀದರ ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಘಾಟಬೋರಳ ಸಮಾಜದ ಮುಖಂಡ ಮದನರಾವ ಬಿರಾದಾರ, ರಘುನಾಥ ಜಾಧವ, ಅರ್ಜುನ ಬಿಲ್ಲೆ, ಪಂಡಿತ ಜಾಧವ್ ಬಾಳೂರು ಸೇರಿದಂತೆ ಸಮಾಜದ ಗಣ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.