ಆಧುನಿಕ ಕಾಲಘಟ್ಟದಲ್ಲಿ ಹಲವು ಬಗೆಯ ಜ್ಞಾನ ದೊರೆಯುತ್ತಿವೆ. ವಿದ್ಯಾರ್ಥಿಗಳು ಈ ಕಾಲದ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಹೆಚ್ಚು ಬಳಕೆ ಮಾಡಿಕೊಳ್ಳಲಿ ಎಂದು ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ಡಾ. ಶ್ರೀಕಾಂತ ಚವ್ಹಾಣ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಎ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ʼವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಹೆಚ್ಚಿನ ಅಧ್ಯಯನದಿಂದ ಸಮಾಜವನ್ನು ಅರ್ಥೈಸಿಕೊಳ್ಳಲು ಸಾಧ್ಯ. ಯಾವುದೂ ಕೂಡ ಪ್ರಶ್ನಿಸುವ, ಚಿಂತನೆ ನಡೆಸುವ ಗುಣಗಳು ಮೈಗೂಡಿಸಿಕೊಳ್ಳಬೇಕುʼ ಎಂದರು.
ಪತ್ರಕರ್ತ ಬಾಲಾಜಿ ಕುಂಬಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಜಗತ್ತಿನ ಎಲ್ಲ ವಿದ್ಯಮಾನಗಳು, ಚರಿತ್ರೆ, ಸಾಹಿತ್ಯ ಸೇರಿ ಹಲವು ಸಂಗತಿಗಳನ್ನು ಕುರಿತು ಕಾಲೇಜಿನ ಒಂದು ವರ್ಗ ಕೋಣೆಯಲ್ಲಿ ಮುಕ್ತವಾಗಿ ಚರ್ಚಿಸುವ ಮೂಲಕ ಲೋಕವನ್ನು ಗ್ರಹಿಸಬೇಕು. ಮುಕ್ತ ಸಂವಾದಕ್ಕೆ ಶಾಲಾ-ಕಾಲೇಜು ವೇದಿಕೆಗಳಾಗಬೇಕು. ಅಧ್ಯಯನದ ಮುಕ್ತ ಓದಿನ ಸ್ವರೂಪವೇ ಬಹುಶಿಸ್ತೀಯ ಹಾಗೂ ಅಂತರ್ಶಿಸ್ತೀಯ ಅಧ್ಯಯನವಾಗಿದೆʼ ಎಂದರು.
ʼಸಮಾಜದಲ್ಲಿ ಶಿಕ್ಷಣದ ಕೊರತೆಯಿಲ್ಲ, ಆದರೆ ಮಾನವೀಯ ಮೌಲ್ಯಗಳ, ಮನುಷ್ಯತ್ವದ ಕೊರತೆ ಎದ್ದು ಕಾಣುತ್ತಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ರೂಢಿಸಿಕೊಳ್ಳಬೇಕು. ಬುದ್ಧ,ಬಸವ, ಅಂಬೇಡ್ಕರ್, ಗಾಂಧೀಜಿ, ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾತ್ಮರ ಜೀವನ ನಮಗೆ ದಾರಿದೀಪವಾಗಬೇಕುʼ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಜಗತ್ತಿನ ಎಲ್ಲ ಸಂಕಿರ್ಣತೆಗಳ ಅರಿಯಲು ಸಿದ್ಧಾಂತ, ಥಿಯರಿಗಳ ಅನುಸಂಧಾನದಿಂದ ಸಾಧ್ಯ. ನಮ್ಮ ಹಿಂದಣ ಹಲವು ನಂಬಿಕೆಗಳಿಂದ, ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವ ಓದು ನಮ್ಮದಾಗಬೇಕು. ನಮ ಪ್ರತಿದಿನದ ಓದು ಹೊಸ ವಿಚಾರ, ಆಲೋಚನೆಗಳ ಮಾರ್ಗವಾಗಿ ರೂಪುಗೊಳ್ಳಬೇಕುʼ ಎಂದರು
ಹಿರಿಯ ಸಾಹಿತಿ ಡಾ.ಎಂ.ಮಕ್ತುಂಬಿ ಮಾತನಾಡಿ, ʼಶಿಕ್ಷಣ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸ್ಥಾನಮಾನಗಳ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡುತ್ತದೆʼ ಎಂದರು.
ಬಸವಕಲ್ಯಾಣ ತಾಲೂಕು ಕಸಾಪ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು ಪ್ರಾಚಾರ್ಯೆ ಮಾಯಾ ಮುರಾಳೆ, ಶ್ರೀ ಬಸವೇಶ್ವರ ಸ್ನಾತಕೋತ್ತರ ಪದವಿ ಕಾಲೇಜು ಪ್ರಾಚಾರ್ಯೆ ಡಾ.ಶಾಂತಲಾ ಪಾಟೀಲ, ಚೆನ್ನಬಸಪ್ಪ ಶೆಟ್ಟೆಪ್ಪ ಗೌರ, ಡಾ.ಬಸವರಾಜ ಖಂಡಾಳೆ ಮಾತನಾಡಿದರು.
ಇದನ್ನೂ ಓದಿ : ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು; ಸಚಿವ ಈಶ್ವರ ಖಂಡ್ರೆ ರಾಜೀನಾಮೆ ನೀಡಲಿ : ಖೂಬಾ
ಐಕ್ಯುಎಸಿ ಸಂಯೋಜಕ ಪವನ ಪಾಟೀಲ, ವಿವೇಕಾನಂದ ಶಿಂಧೆ, ಗಂಗಾಧರ ಸಾಲಿಮಠ, ಸಂಗೀತಾ ಮಹಾಗಾವೆ, ಜಗದೇವಿ ಜವಳಗೆ, ಶೃತಿ ನೀಲಮಠ, ಸಚಿನ್ ಬಿಡವೆ, ಸುಜಾವುದ್ದಿನ, ಕೃಷ್ಣಪ್ಪ ಸೈದಾಪುರ, ಗಣೇಶ ಮೇತ್ರೆ, ಶ್ರೀನಿವಾಸ ಉಮಾಪುರೆ, ನಾಗರಾಜ ನಾಸೆ, ಕೃಷ್ಣ ಗೌಳಿ, ರೋಶನ್ ಬೀ, ಗುರುದೇವಿ ಕಿಚಡೆ, ಪ್ರಶಾಂತ ಬುಡಗೆ, ಮಯೂರಿ ಪಾಟೀಲ ಮೊದಲಾದವರು ಇದ್ದರು. ದಾಕ್ಷಾಯಿಣಿ ನಿರೂಪಿಸಿದರು. ನೀಲಾಂಬಿಕಾ ಪತಂಗೆ ಸ್ವಾಗತಿಸಿದರು. ಅನುಪಮಾ ವಂದಿಸಿದರು.