ನಿಸರ್ಗವೇ ನಿಜವಾದ ದೇವರು. ಹಲವು ಜೀವ ಜಂತುಗಳು ಭೂಮಿ, ಗಾಳಿ, ನೀರು ಸೇರಿ ಇಡೀ ಪಂಚಭೂತಗಳಲ್ಲಿ ಉಳಿದಿವೆ. ಪಂಚಭೂತಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರದ್ದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅದ್ವೈತಾನಂದ ಮಹಾಸ್ವಾಮಿಗಳು ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಜೀವ ವಿಜ್ಞಾನ ವಿಭಾಗದಿಂದ ಸಸ್ಯ ಮತ್ತು ಸೂಕ್ಷ್ಮ ಜೀವಿಗಳ ಅಧ್ಯಯನದ ಕಾರ್ಯಾಗಾರದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ʼವಿಜ್ಞಾನ ಹೊರ ಜಗತ್ತಿನ ಬಗ್ಗೆ ತಿಳಿಸಿದರೆ ಆಧ್ಯಾತ್ಮ ಅಂತರಂಗದ ಬಗೆಗೆ ತಿಳಿಸುತ್ತದೆʼ ಎಂದರು.
ಹುಲಸೂರ ತೋಟಗಾರಿಕೆ ಇಲಾಖೆ ಅಧಿಕಾರಿ ಅಶ್ವಿನಿ ಯದಲಗುಂಡಿ ಮಾತನಾಡಿ, ʼಜನರಲ್ಲಿ ಆಹಾರ ಪ್ರಜ್ಞೆ ಬೆಳೆದಂತೆ ಸಾವಯವ ಕೃಷಿ ಹೆಚ್ಚಾಗಿದೆ. ಸಾವಯವ ಸಲಕರಣೆಗಳಿಗೆ ಮಾರುಕಟ್ಟೆಯ ಗುಣ ಬಂದಿದೆ. ಬಹು ವಾರ್ಷಿಕ ಬೆಳೆ ತೋಟಗಾರಿಕೆಯಲ್ಲಿ ಪಡೆಯಬಹುದು. ಗಿಡ, ಮರ, ಹೆಣ್ಣು, ಔಷಧೀಯ ಗಿಡಗಳು, ಎಲ್ಲದರ ಸಮಗ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಅನುಕೂಲ. ಪ್ರತಿಯೊಬ್ಬರು ಪರಿಸರ ವ್ಯವಸ್ಥೆ ಕುರಿತು ಗಂಭೀರವಾಗಿ ಅರಿಯಬೇಕಾಗಿದೆ. ಜೇನು ಹುಳು ನಾಶವಾದರೆ ನಿಸರ್ಗದ ಚಲನೆಯ ನಿಂತು ಹೋಗುತ್ತದೆ. ಜೇನು ಹುಳುಗಳು ನಿಸರ್ಗದ ವಿಸ್ಮಯ. ಔಷಧಿ ಗುಣವಿರುವ ಮಶ್ರೂಮ್ ಹೆಚ್ಚು ಬೆಲೆಬಾಳುವ ಆಹಾರವಾಗಿ ಬಳಸುತ್ತಾರೆʼ ಎಂದರು.
ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಹಾಗೂ ಆಧುನಿಕತೆಯಿಂದಾಗಿ ನಿಸರ್ಗದಿಂದ ವಿಮುಖರಾಗುತ್ತಿದ್ದೇವೆ. ಪರಿಸರದಿಂದ ಕಲಿಯಬೇಕಾದ ಹಲವು ಪಾಠಗಳಿಂದ ವಂಚಿತರಾಗುತ್ತಿದ್ದೇವೆ. ಪರಿಸರದ ಕುರಿತಾದ ಆಸಕ್ತಿ, ಕುತೂಹಲ ಕಡಿಮೆಯಾಗಿವೆ. ಮನುಷ್ಯ ಪಕೃತಿಯೊಂದಿಗಿನ ಸಾವಯವ ಸಂಬಂಧ ಕಡಿದುಕೊಂಡು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾನೆʼ ಎಂದು ಕಳವಳ ವ್ಯಕ್ತಪಡಿಸಿದರು.
ʼಮಣ್ಣಿನ ಸತ್ವ, ಸಸ್ಯ ಸಂಸ್ಕೃತಿ ಮತ್ತು ಜೀವ ಸಂಕುಲ ಒಂದಕ್ಕೊಂದು ಗಾಢವಾದ ಸಂಬಂಧವನ್ನು ಹೊಂದಿವೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪರಿಸರವಾದಿ ಚಿಂತನೆ ಕುರಿತೇ ಕನ್ನಡ ಸಾಹಿತ್ಯದಲ್ಲಿ ಒಂದು ಪರಂಪರೆಯಿದೆ. ಪಂಪ, ಕುವೆಂಪು, ಬಿಜಿಎಲ್ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ನಾಗೇಶ್ ಹೆಗಡೆ, ಮಾಧವ ಗಾಡ್ಗಿಳ್ ಮೊದಲಾದವರ ಬರಹಗಳು ಪರಿಸರ ಕೇಂದ್ರಿತವಾಗಿವೆʼ ಎಂದರು.

ನೇತ್ರತ್ವ ವಹಿಸಿದ ಅನುಭವ ಮಂಟಪ ಸಂಚಾಲಕ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ʼಹಲವು ಶರಣೆಯರು ತಮ್ಮ ವಚನಗಳಲ್ಲಿ ಪರಿಸರ ಪ್ರಜ್ಞೆಯಿಂದ ಬರೆದಿದ್ದಾರೆ. ಶರಣರ ಬಹುಪಾಲು ವಚನಗಳಲ್ಲಿ ಪರಿಸರ ಚಿಂತನೆ ಅಡಕವಾಗಿದೆʼ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಸುಜಾತಾ, ಉಪನ್ಯಾಸಕರಾದ ಶ್ರೀನಿವಾಸ ಉಮಾಪುರೆ, ನಾಗವೇಣಿ ವಟಗೆ, ಗುರುದೇವಿ ಕಿಚಡೆ, ಸಚಿನ್ ಬಿಡವೆ, ಅಶೋಕ ಕುಂಬಾರ, ಗಂಗಾಧರ ಬಿರಾದಾರ , ಸಚಿನ್ ಕವಟೆ , ಶಂಕರ ಕವಟೆ , ಅಮರಪಾಲ, ಸಂಜು ಕುಮಾರ್ ಪಟ್ನೆ ಮೊದಲಾದವರು ಇದ್ದರು.
ಇದನ್ನೂ ಓದಿ : ಬೀದರ್ | ಮುಂಗಾರು ಮಳೆ : 36 ಮನೆಗಳಿಗೆ ಹಾನಿ, ಇಬ್ಬರ ಸಾವು
ಬಿಎಸ್ಸಿ ವಿದ್ಯಾರ್ಥಿಗಳಿಂದ ಅನುಭವ ಮಂಟಪ ಪರಿಸರದ ಹಾಗೂ ತ್ರಿಪುರಾಂತ ಕೆರೆ ಸುತ್ತಲಿನ ಗಿಡ ಮರ ಮತ್ತು ಜೀವಜಾಲದ ಕುರಿತು ವಿಶೇಷ ಅಧ್ಯಯನ , ಕ್ಷೇತ್ರಕಾರ್ಯ ಮಾಡಲಾಯಿತು.ಕಾರ್ಯಾಗಾರದ ಸಂಯೋಜಕ ಅಶೋಕರೆಡ್ಡಿ ಗದಲೇಗಾಂವ ಪ್ರಾಸ್ತಾವಿಕ ಮಾತನಾಡಿದರು. ಸ್ನೇಹಾ ರಾಜಪೂತ್ ಮತ್ತು ಶಾಂಭವಿ ಸಾಲಿಮಠ ನಿರೂಪಿಸಿದರು. ಆರತಿ ವೆಂಕಟರೆಡ್ಡಿ ವಂದಿಸಿದರು.