ಪತ್ರಕರ್ತರು ಒಂದೇ ಒಂದು ದಿನ ತಮ್ಮ ಬರಹ ನಿಲ್ಲಿಸಿದರೆ, ಮಾಧ್ಯಮಗಳು ಸ್ತಬ್ಧಗೊಳ್ಳುವವು. ಲೋಕದ ಚರಿತ್ರೆ , ಸಾಂಸ್ಕೃತಿಕ ದಾಖಲೆಯೇ ಸ್ಥಗಿತಗೊಳ್ಳುವ ಅಪಾಯ ಎದುರಾಗುತ್ತದೆ ಎಂದು ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರಹೇಳಿದರು.
ಹುಲಸೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿಅವರು ವಿಶೇಷ ಉಪನ್ಯಾಸ ನೀಡಿದರು.
ʼಸ್ಥಳೀಯ ಚರಿತ್ರೆ ಮತ್ತು ಸ್ಥಳೀಯ ಸಾಂಸ್ಕೃತಿಕ ಲೋಕದ ದಾಖಲೀಕರಣಕ್ಕೆ ಮಾಧ್ಯಮ ಕೆಲಸ ಮಹತ್ವದ್ದು. ವಿದ್ಯುನ್ಮಾನ ಮಾಧ್ಯಮ ರಾಜಧಾನಿ ಕೇಂದ್ರಿತ ಸುದ್ದಿಗೆ ಹೆಚ್ಚು ಮಹತ್ವ ನೀಡುತ್ತಿವೆ. ಸಣ್ಣ ಪುಟ್ಟ ಊರುಗಳ, ನಿರ್ಲಕ್ಷಿತ ಸಮುದಾಯಗಳ, ಜನ ಸಮುದಾಯದ ಸಮಸ್ಯೆ ಸವಾಲುಗಳು ಕಡೆಗೆ ಬೆಳಕು ಹರಿಸಬೇಕಾದ ಅನಿವಾರ್ಯತೆ ಇದೆ. ಮುದ್ರಣ ಮಾಧ್ಯಮಕ್ಕೆ ಜನಪರ ಕಾಳಜಿ, ಬದ್ಧತೆ ಮತ್ತು ಒಲವು ಉಳಿಸಿಕೊಂಡಿವೆʼ ಎಂದು ಅಭಿಪ್ರಾಯಪಟ್ಟರು.
ʼಸ್ವಾತಂತ್ರ್ಯ ಚಳುವಳಿ, ಕರ್ನಾಟಕ ಏಕೀಕರಣ, ರೈತ, ಮಹಿಳಾ, ದಲಿತ-ಬಂಡಾಯ ಮೊದಲಾದ ಚಳುವಳಿಗಳನ್ನು ರೂಪಿಸಿದ, ಸಮಾಜವನ್ನು ಜಾಗೃತವಾಗಿ ಇರಿಸಿದ ಮಾಧ್ಯಮ ಈ ಕಾಲಘಟ್ಟದಲ್ಲಿ ಉದ್ಯಮವಾಗಿ ರೂಪಗೊಂಡಿದೆ . ಬಂಡವಾಳಶಾಹಿ, ಪ್ರಭುತ್ವಗಳ ಅಡಿಯಾಳು ಆಗದ ಎಚ್ಚರ ಮಾಧ್ಯಮಗಳಿಗೆ ಇದ್ದರೆ ಅಂಥ ಮಾಧ್ಯಮಗಳಿಂದ ಪ್ರಜ್ಞಾವಂತ ಜಗತ್ತು ಕಟ್ಟಲು ಸಾಧ್ಯʼ ಎಂದರು
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ʼಪತ್ರಕರ್ತರ ಕುಟುಂಬದವರ ವೈದ್ಯಕೀಯ ಸೌಲಭ್ಯಕ್ಕಾಗಿ ಪತ್ರಕರ್ತ ಸಂಜೀವಿನಿ ಕಾರ್ಡ್ ಬಂದಿದೆ. ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಉಚಿತ ಬಸ್ ಪಾಸ್, 60 ವರ್ಷ ದಾಟಿದ ಪತ್ರಕರ್ತರಿಗೆ 15 ಸಾವಿರ ಮಾಶಾಸನ ಸರ್ಕಾರದಿಂದ ದೊರೆಯುವಂತೆ ಕಾರ್ಯನಿರತ ಕರ್ನಾಟಕ ಪತ್ರಕರ್ತರ ಸಂಘ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆʼ ಎಂದರು.
ಪಿಎಸ್ಐ ಶಿವಪ್ಪಾ ಮೇಟಿ ಮಾತನಾಡಿ, ʼಪತ್ರಿಕೆಯವರು ಸಮಸ್ಯೆ ಮುನ್ನೆಲೆಗೆ ತಂದರೆ ಸಂಬಂಧಿತ ಅಧಿಕಾರಿಗಳು ಬಗೆಹರಿಸುತ್ತಾರೆ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನ ನೀಡಿದರೆ ನಾಲ್ಕನೇ ಅಂಗ ಮಾಧ್ಯಮಕ್ಕೆ ವಿಶೇಷ ಅಧಿಕಾರ ಸಮಾಜವೇ ನೀಡಿದೆʼ ಎಂದರು.

ಬಸವಕಲ್ಯಾಣ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ಥಂಡ ಜೋಷಿ ಮಾತನಾಡಿ, ʼಪತ್ರಿಕೆ, ಆಡಳಿತ ಮತ್ತು ಸಾರ್ವಜನಿಕ ವಲಯ ಇವುಗಳ ನಡುವೆ ಅಂತರ್ ಸಂಬಂಧವಿದೆ. ಸಮಾಜದ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಈ ಭಾಗದ ಅಭಿವೃದ್ಧಿಯಲ್ಲಿ, ಬೆಳವಣಿಗೆಯಲ್ಲಿ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆ ಬಗೆಹರಿಸುವಲ್ಲಿ ಮಾಧ್ಯಮಗಳ ಕಾಳಜಿ ದೊಡ್ಡದು. ಈ ತಾಲೂಕಿನ ಬೆಳವಣಿಗೆಗಾಗಿ ಪತ್ರಕರ್ತರು ಪ್ರಾಮಾಣಿಕವಾಗಿ ಶ್ರಮಿಸಿʼ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರಲು ಪತ್ರಿಕೆಗಳ ಪಾತ್ರ ಮಹತ್ವದ್ದು. ಕನ್ನಡದ ಕೆಲಸಗಳಿಗಾಗಿ, ಗಡಿ ಸಮಸ್ಯೆ ಬಗೆಹರಿಸಲು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅಭಿವೃದ್ಧಿ ಬಗ್ಗೆ ಮಾಧ್ಯಮ ಕಾಳಜಿ ವಹಿಸಿವೆ. ಉದಯೋನ್ಮುಖ ತಾಲೂಕು ಹುಲಸೂರಿನ ಅಭಿವೃದ್ಧಿಯ ಬಗೆಗೆ ಮಾಧ್ಯಮ ದಿಕ್ಸೂಚಿಯಾಗಲಿʼ ಎಂದು ಆಶಿಸಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಸೂರ್ಯಕಾಂತ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿದರು.
ಇದನ್ನೂ ಓದಿ : ಬೀದರ್ | ವಿಶ್ವಾಸಾರ್ಹತೆ ಉಳಿಸಿಕೊಂಡ ಮುದ್ರಣ ಮಾಧ್ಯಮ : ದೇವಯ್ಯ ಗುತ್ತೇದಾರ್
ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಾರಾಣಿ ಭೋಸ್ಲೆ, ಯುವ ಮುಖಂಡ ಅರವಿಂದ ಹರಪಲ್ಲೆ, ಉದಯಕುಮಾರ್ ಮುಳೆ,
ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ನಂದೋಡೆ, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಎಸ್ಸಿ ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮೇಂದ್ರ ಭೋಸ್ಲೆ, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸಂತೋಷ ಚೆಟ್ಟಿ, ಪ್ರದೀಪ್ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಡಿ.ಕೆ.ಪ್ರಹ್ಲಾದ್, ದತ್ತಾತ್ರೆ ಸಾಬನೆ, ಶಿವರಾಜ ಖಪಲೆ ನಿರೂಪಿಸಿದರು. ಗುರುಪ್ರಸಾದ್ ಮೆಂಟೆ ಸ್ವಾಗತಿಸಿದರು. ಬಸವಕುಮಾರ ಕೌಟೆ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಹುಲಸೂರಕರ ವಂದಿಸಿದರು.