ಕ್ರೀಡೆ ಜೀವನದ ಏಳಿಗೆಗಾಗಿ ಬಹಳ ಅವಶ್ಯಕವಾಗಿದೆ. ಒಗ್ಗಟ್ಟಿನ ಪ್ರಜ್ಞೆ, ನಾಯಕತ್ವ ಕೌಶಲ್ಯ, ತ್ರಾಣ, ದೈಹಿಕ ಶಕ್ತಿ, ಯೋಜನೆ ಮತ್ತು ಕಾರ್ಯತಂತ್ರ ಗುಣಗಳನ್ನು ಅಭಿವೃದ್ದಿಪಡಿಸಲು ಸಹಾಯಕವಾಗಿದೆ ಎಂದು ಹುಮನಾಬಾದ್ ಡಿವೈಎಸ್ಪಿ ಜೆ.ಎಸ್.ನ್ಯಾಮೇಗೌಡ ಹೇಳಿದರು.
ಬಸವಕಲ್ಯಾಣ ಇಂಜಿನೀಯರಿಂಗ್ ಕಾಲೇಜು ಆವರಣದಲ್ಲಿ ನ.19 ರಿಂದ 20ರವರೆಗೆ ಎರಡು ದಿನಗಳ ಕಾಲ ಆಯೋಜಿಸಿರುವ ವಿಟಿಯು ಕಲಬುರಗಿ ವಲಯದ ಅಂತರ ಕಾಲೇಜುಗಳ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಕ್ರೀಡೆ ಜೊತೆಗೆ ಹೆಚ್ಚಿನ ಅಧ್ಯಯನ ಮೈಗೂಡಿಸಿಕೊಂಡರೆ ಮಾನಸಿಕವಾಗಿ ಗಟ್ಟಿಯಾಗಬಹುದು. ವಿದ್ಯಾರ್ಥಿಗಳಿಗೆ ಕ್ರೀಡೆ ಬಹಳ ಮುಖ್ಯವಾದ ಚಟುವಟಿಕೆಯಾಗಿದೆʼ ಎಂದು ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಒಬ್ಬ ವ್ಯಕ್ತಿಯನ್ನು ದೈಹಿಕ, ಮಾನಸಿಕವಾಗಿ ಆರೋಗ್ಯವಾಗಿಡುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆ ನಮ್ಮನ್ನು ದೈಹಿಕವಾಗಿ ಸದೃಢಗೊಳಿಸುವುದು ಅಲ್ಲದೇ ನಮ್ಮನ್ನು ಕ್ರೀಯಾಶೀಲತೆ ಹಾಗೂ ಚುರುಕಾಗಿಸುತ್ತದೆʼ ಎಂದರು.
ʼನಮ್ಮ ಬಿಇಟಿ ಸಂಸ್ಥೆಯಿಂದ ಶಿಕ್ಷಣ ಜೊತೆಗೆ ಕ್ರೀಡೆಗೆ ಬೇಕಾಗುವ ಇನ್ನೂ ಹೆಚ್ಚಿನ ರೀತಿಯ ಸವಲತ್ತುಗಳು ಒದಗಿಸುತ್ತೇವೆ. ಇಂದು ಕ್ರೀಡೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಯಶಸ್ವಿಯಾಗಿ ಜಯ ಸಾಧಿಸಿ ರಾಜ್ಯ ಮಟ್ಟದಲ್ಲೂ ಕೀರ್ತಿ ತರಬೇಕುʼ ಎಂದು ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ವಿಟಿಯು ಕಲಬುರಗಿ ವಲಯದ 15 ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಚನ ಕಂಠಪಾಠ ಸ್ಪರ್ಧೆ : 816 ವಚನ ಹೇಳಿದ ವಿದ್ಯಾರ್ಥಿ ಶಿವರಾಜ ಪ್ರಥಮ ಸ್ಥಾನ
ಕಾರ್ಯಕ್ರಮದಲ್ಲಿ ಬಿಇಟಿ ಸಂಸ್ಥೆಯಡಿ ಬರುವ ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಡಾ.ನಾಗಯ್ಯಾ ಸ್ವಾಮಿ, ವಿಶ್ವನಾಥಯ್ಯ ಸ್ವಾಮಿ, ನೀಲಕಂಠ ಕೋಡ್ಲೆ, ಶಿವಕುಮಾರ ಸ್ವಾಮಿ, ಹಾಗೂ ಶಂಕರ ಆಗರಗಿ, ಗೋವಿಂದ ಕನಕಾ ಹಾಗೂ ದತ್ತಣ್ಣಾ ಮಂಟಗೆ ಸೇರಿದಂತೆ ಎಲ್ಲ ಕಾಲೇಜಿನ ಎಲ್ಲ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಡಾ.ಲೀಲಾ ನಿರೂಪಿಸಿದರು. ಡಾ.ಅರುಣಕುಮಾರ ಯಲಾಲ್ ಸ್ವಾಗತಿಸಿದರು. ಪ್ರೇಮಸಾಗರ ಪಾಟೀಲ್ ವಂದಿಸಿದರು.