ವಿಕ್ರಮ ವಿಸಾಜಿ ಬರೆದಿರುವ ‘ರಕ್ತ ವಿಲಾಪ’ ರಂಗಪಠ್ಯವು ವರ್ತಮಾನದ ಬೌದ್ಧಿಕ ಸಂವಾದ, ತಾತ್ವಿಕ ವಾಗ್ವಾದಗಳ ಅಗತ್ಯವನ್ನು ಪ್ರತಿಪಾದಿಸುತ್ತದೆ ಎಂದು ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಬೀದರ್ ನಗರದ ಕರ್ನಾಟಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಾಣ ಜಾಣೆಯರ ಕನ್ನಡ ಬಳಗ ಸಹಯೋಗದಲ್ಲಿ ಜರುಗಿದ ನಾನು ಓದಿದ ಪುಸ್ತಕ ಸಮಾರಂಭದಲ್ಲಿ ಪ್ರೊ. ವಿಕ್ರಮ ವಿಸಾಜಿ ಅವರ ‘ರಕ್ತ ವಿಲಾಪ’ ನಾಟಕದ ಕುರಿತು ಮಾತನಾಡಿದ ಅವರು ಮಾತನಾಡಿದರು.
ʼಸೈದ್ಧಾಂತಿಕ ಆಲೋಚನೆಗಳು ಕೇವಲ ತಾತ್ವಿಕವಾಗಿ ಎದುರಿಸುವ ಬದಲಾಗಿ ವೈಯಕ್ತಿಕ ಹಗೆತನಕ್ಕೆ ತಲುಪಿದಾಗ ಹಿಂಸೆ ಮತ್ತು ಕ್ರೌರ್ಯದ ಸ್ವರೂಪ ಪಡೆಯುತ್ತದೆ. ವ್ಯವಧಾನ, ಸಹನೆಗಳಿಂದ ಹೊಸ ಆಲೋಚನೆಗಳನ್ನು, ಸಂಶೋಧನೆಗಳನ್ನು ಎದುರಾಗುವ ಬಗೆ ತಿಳಿಸುತ್ತದೆ. ಸತ್ಯ- ಮಿಥ್ಯಗಳ, ಚಲನಶೀಲ, ಸ್ಥಗಿತ ಚಿಂತನೆಗಳ, ಹುಸಿ ನಂಬಿಕೆ, ಹೊಸ ವಿಚಾರಗಳ ಮುಖಾಮುಖಿಯನ್ನು ನಾಟಕಕಾರರು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆʼ ಎಂದು ವಿಶ್ಲೇಷಿಸಿದರು.
ʼಸಾಮಾಜಿಕ ಕಾಳಜಿ, ಮಾನವೀಯ ತುಡಿತದ ಜೊತೆಗೆ ಶ್ರಮ ಹಾಗೂ ಬೆವರನ್ನು ದೇಶಭಕ್ತಿಯಾಗಿ, ದೇವರು, ಧರ್ಮವನ್ನು ವಿಭಿನ್ನ ನೆಲೆಗಳಿಂದ ವ್ಯಾಖ್ಯಾನಿಸಲಾಗಿದೆ. ಆತ್ಮೋದ್ದಾರಕ್ಕಿಂತ ಸಾಮಾಜೋದ್ದಾರದ ನಿಲುವುಗಳನ್ನು ಹುಡುಕಿದೆ. ರಕ್ತ ವಿಲಾಪ ನಾಟಕ ಅಕಾಡೆಮಿಕ್ ವಲಯದ ಆಗುಹೋಗುಗಳನ್ನು, ಪ್ರಾಮಾಣಿಕ ಬರಹಗಾರ ಹಾಗೂ ಸಂಶೋಧಕನಿಗೆ ಎದುರಾಗುವ ಬಿಕ್ಕಟ್ಟುಗಳನ್ನು ಅರ್ಥಪೂರ್ಣವಾಗಿ ತಿಳಿಸುತ್ತದೆʼ ಎಂದರು.
ಹಲವು ಜಡ ನಂಬಿಕೆಗಳಿಂದ, ಪೂರ್ವಾಗ್ರಹಗಳಿಂದ ಮನಸ್ಸು ಬಿಡುಗಡೆಗೊಂಡರೆ ಮಾತ್ರ ಹೊಸ ಅರಿವು, ಆಲೋಚನೆಗೆ ಸ್ಥಳಾವಕಾಶ ಸಾಧ್ಯ. ಸಾಮಾಜಿಕ ದೃಷ್ಟಿಕೋನ ಹೊಂದಿರುವ ಯಾವುದೇ ಸಂಶೋಧನೆ ಹಾಗೂ ಬರಹ ಜೀವಂತಿಕೆ ಹೊಂದಿರುತ್ತದೆ. ಕನ್ನಡದ ಶ್ರೇಷ್ಠ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಬದುಕನ್ನು ಕೇಂದ್ರಿಕರಿಸಿದರೂ ನಿಜವನ್ನು ಪ್ರತಿಪಾದಿಸುವ ಭಾರತದ ಒಟ್ಟು ವಿದ್ವತ್ ವಲಯ ಎದುರಿಸುವ ಆತಂಕ, ಅಪಾಯ, ಕಳವಳ ನಾಟಕದ ಪ್ರಧಾನ ವಸ್ತುವಾಗಿದೆʼ ಎಂದು ಪ್ರತಿಪಾದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಮಾತನಾಡಿ,1993ರಲ್ಲಿ ಸ್ಥಾಪನೆಯಾದ ಕನ್ನಡ ಪುಸ್ತಕ ಪ್ರಾಧಿಕಾರವು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೂಲಕ ಓದುಗರ ಮನತಣಿಸುತ್ತಿದೆ. ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಸಹಕಾರ ನೀಡುತ್ತಾ ಬಂದಿದೆ. ರಾಜ್ಯದ ಪ್ರತಿಯೊಂದ ಕಾಲೇಜಿಗೆ ₹25 ಸಾವಿರ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಸಾಹಿತ್ಯ, ಓದು ಮತ್ತು ಮುದ್ರಣ ವಿಭಾಗದಲ್ಲಿ ಕಳೆದ ಮೂರು ವರ್ಷದ ಪ್ರಶಸ್ತಿ, ಬಹುಮಾನಗಳನ್ನು ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿದೆʼ ಎಂದರು.
ಕೆಆರ್ಇ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಪ್ರತಿಯೊಬ್ಬ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆʼ ಎಂದು ಹೇಳಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಐಕ್ಯೂಎಸಿ ಸಂಯೋಜಕ ಡಾ.ರಾಜಮೋಹನ ಪರದೇಶಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮಹಾನಂದ ಮಡಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಪಂಚಪೀಠಾಧಿಶರು ಲಿಂಗಾಯತ ಸಮಾಜದ ಮೇಲೆ ಮಾಡುತ್ತಿರುವ ಸವಾರಿ ನಿಲ್ಲಿಸಲಿ
ಕೆಆರ್ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶಿವಾನಂದ ಗಾದಗೆ, ಕಾಲೇಜಿನ ಉಪ ಪ್ರಾಚಾರ್ಯ ಸೋಮನಾಥ ಬಿರಾದಾರ ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿ ಪವನ ಶಿವರಾಜ ನಿರೂಪಿಸಿದರು. ವಿದ್ಯಾರ್ಥಿನಿ ಚಂದ್ರಕಲಾ ಪ್ರಾರ್ಥಿಸಿದರು. ಸಂಗೀತಾ ಮಾನಾ ವಂದಿಸಿದರು.