ಒಡಹುಟ್ಟಿದ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರ ಹೆಸರು ಒಂದೇ ಇಟ್ಟು ಕರೆಯುವ ಅಪರೂಪದ ಕತೆಯ ಹಿಂದಿನ ಗುಟ್ಟೇನು ಕೇಳಿದ್ದೀರಾ?
ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಒಂದೇ ಊರಿನಲ್ಲಿ ಒಂದೇ ಹೆಸರಿನ ಅನೇಕರು ಇರುವುದು ಸರ್ವೇ ಸಾಮಾನ್ಯ. ಅಷ್ಟೇ ಯಾಕೆ ಒಂದು ಸಮುದಾಯದಲ್ಲಿ ನಾಲ್ಕೈದು ಜನರ ಹೆಸರು ಒಂದೇ ಇರುವುದು ಕೂಡ ಸಾಮಾನ್ಯವೇ ಎನಿಸಬಹುದು. ಆದರೆ, ಮೂವರು ಖಾಸಾ ಸಹೋದರರ ಹೆಸರು ಒಂದೇ ಇರುವುದು ಅತ್ಯಂತ ವಿಶಿಷ್ಟವೂ…ಅದ್ಭುತವೂ ಹೌದು.
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಎನಗುಂದಾ ಗ್ರಾಮದಲ್ಲಿದ್ದಾರೆ ಈ ತ್ರಿಮೂರ್ತಿ ಸಹೋದರರು. ಅಂದ ಹಾಗೇ ಆ ಮೂವರು ಸಹೋದರರ ಅಪರೂಪದ ಹೆಸರು ʼಗಂಗಾರಾಮʼ!
ʼಒಂದೇ ಕುಟುಂಬದ ಐದು ಜನರ ಹೆಸರು ʼಗಂಗಾʼ
ಗಂಗಾರಾಮ ಎಂಬ ಹೆಸರಿರುವ ಈ ಮೂವರು ಕುಂಬಾರ ಸಮುದಾಯದವರು. ಮಹಾರಾಷ್ಟ್ರದ ನಾಂದೇಡ ಜಿಲ್ಲೆಯಲ್ಲಿ ಬರುವ ಗಂಗಾ ನದಿ ಬಳಿಯ ಇರುವ ದೇವಸ್ಥಾನ ಇವರ ಮನೆ ದೇವರು. ಈ ಮೂವರು ಹುಟ್ಟುವ ಮುನ್ನ ಜನಿಸಿದ ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದಿದ್ದರು. ಹುಟ್ಟಿದ ಮಕ್ಕಳೆಲ್ಲ ಸಾಯುತ್ತಿರುವುದು ಹೀಗೇಕೆ ಎಂದು ತಿಳಿದ ಇವರ ಪೋಷಕರು ನಾಂದೇಡ ಜಿಲ್ಲೆಯ ಗಂಗನದಿಗೆ ತೆರಳಿ ದೇವರಲ್ಲಿ ಹರಕೆ ಹೊತ್ತರು.
ʼಜನಿಸಿದ ಮಕ್ಕಳೆಲ್ಲರೂ ಮರಣ ಹೊಂದುತ್ತಿರುವುದನ್ನು ಕಂಡ ಪೋಷಕರು ಚಿಂತೆಗೀಡಾಗಿ ಗಂಗಾದೇವಿ ದೇವರ ಮೊರೆ ಹೋದರು. ಇನ್ಮುಂದೆ ನಮಗೆ ಹುಟ್ಟಿದ ಮಕ್ಕಳೆಲ್ಲರಿಗೂ ʼಗಂಗಾʼ ಎಂದೇ ಹೆಸರಿಟ್ಟು ಕರೆಯುವೆ ಎಂದು ಹರಕೆ ಹೊತ್ತಿದರು. ತದನಂತರ ಜನಿಸಿದ ಮೂರು ಜನ ಗಂಡು ಮಕ್ಕಳಿಗೆ ಗಂಗಾ ನದಿಯ ಹಿನ್ನೆಲೆಯಾಗಿ ʼಗಂಗಾರಾಮʼ ಹಾಗೂ ಇಬ್ಬರು ಹೆಣ್ಣು ಮಕ್ಕಳ ಹೆಸರು ʼಗಂಗವ್ವʼ ಎಂದು ನಾಮಕರಣ ಮಾಡಿದರು ಎಂದು ಹೇಳಲಾಗುತ್ತದೆ.
ʼದೇವರ ಮೇಲಿನ ಭಕ್ತಿ, ನಂಬಿಕೆಯಿಂದ ಹೀಗೆ ಎಲ್ಲರ ಹೆಸರು ʼಗಂಗಾʼ ಎಂಬ ನಾಮದಿಂದ ಆರಂಭವಾಗುತ್ತದೆ. ಗಂಗಾದೇವಿ ನಮ್ಮ ಆರಾಧ್ಯವೈವ, ನಾವು ಅವರನ್ನೇ ಸ್ಮರಿಸುತ್ತೇವೆ. ಈಗಲೂ ವರ್ಷಕೊಮ್ಮೆ ದರ್ಶನ ಪಡೆಯಲು ಹೋಗುವುದು, ಜವಳಾ ಸೇರಿದಂತೆ ಇತರೆ ಕಾರ್ಯಕ್ರಮ ಗಂಗಾದೇವಿ ದೇವರ ಬಳಿ ತೆರಳಿ ಮಾಡುತ್ತೇವೆʼ ಎಂದು ಈ ಸಹೋದರರು ತಿಳಿಸುತ್ತಾರೆ.
ಮೂವರನ್ನು ಕರೆಯುವುದು ಹೇಗೆ?
ಕುಂಬಾರ ಸಮುದಾಯದವರಾದ ಗಂಗಾರಾಮ ಸಹೋದರರಿಗೆ ತಮ್ಮ ಕುಲಕಸುಬು ಬದುಕಿಗೆ ಮುಖ್ಯ ಆಧಾರ. ಮೂವರು ಮಡಿಕೆ ತಯಾರಿಸುವ ಕಾಯಕ ರಕ್ತಗತವಾಗಿ ಬಂದಿದೆ. ಸಿದ್ಧಪಡಿಸಿ ಮಣ್ಣಿನ ಮಡಿಕೆಗಳನ್ನು ತಾಲೂಕು ಸೇರಿದಂತೆ ಜಿಲ್ಲೆಯ ನಾನಾ ಕಡೆ ಕತ್ತೆಗಳ ಮೇಲೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು.
ಈ ಮೂವರು ಅಣ್ಣತಮ್ಮಂದಿಯರ ದೇಹ ಆಕಾರ, ಬಣ್ಣದಲ್ಲಿ ಭಿನ್ನವಾಗಿದ್ದಾರೆ. ಮೂವರನ್ನು ಒಂದೇ ಹೆಸರಿನಿಂದ ಕರೆಯುವುದು ಹೇಗೆ ಎಂಬುದು ಜನರಿಗೆ ಪ್ರಶ್ನೆಯಾಗಿ ಕಾಡುತ್ತದೆ. ಹೀಗಾಗಿ ಗಂಗಾರಾಮ (ಪೆದ್ದಾ), ಗಂಗಾರಾಮ (ನಡಪಿ) ಹಾಗೂ ಗಂಗಾರಾಮ (ಚಿನ್ನಾ) ಎಂದು ಉಪನಾಮದಿಂದ ಕರೆಯುತ್ತಾರೆ. ಪೆದ್ದಾ ಎಂದರೆ ದೊಡ್ಡ, ನಡುಪಿ ಎಂದರೆ ಮಧ್ಯೆ ಚಿನ್ನಾ ಅಂದರೆ ಚಿಕ್ಕವ. ಇವು ತೆಲುಗು ಭಾಷೆಯಲ್ಲಿ ಕರೆಯಲ್ಪಡುವ ಪದ.
ʼಮೂವರು ಅಣ್ಣತಮ್ಮರಿಗೆ ಗಂಡು, ಹೆಣ್ಣು ಮಕ್ಕಳಿದ್ದಾರೆ. ಆದರೆ, ಅವರ ಯಾರದೇ ಹೆಸರು ʼಗಂಗಾʼ ನಾಮದಿಂದ ಇಟ್ಟಿಲ್ಲ. ಇವರ ಇಬ್ಬರ ಸಹೋದರಿಯರಲ್ಲಿ ಒಬ್ಬರಿಗೆ ಅದೇ ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಅವರಿಗೆ ಆರು ಜನ ಮೊಮ್ಮಕ್ಕಳಿದ್ದಾರೆ. ಅವರಲ್ಲಿ ಹಿರಿಯ ಪುತ್ರನ ಹೆಸರು ಲಕ್ಷ್ಮಣ ಒಬ್ಬರನ್ನು ಬಿಟ್ಟರೆ ಉಳಿದ ನಾಲ್ಕು ಸಹೋದರರ ಹೆಸರು ʼಗಂಗಾರಾಮʼ ಹಾಗೂ ಓರ್ವ ಸಹೋದರಿಯ ಹೆಸರು ʼಗಂಗಾಮಣಿʼ ಎಂದೇ ಹೆಸರಡಿಲಾಗಿದೆ. ನಾವು ಸಹ ಗಂಗಾದೇವಿಯ ಭಕ್ತರು, ಆ ಸ್ಮರಣೀಯ ಕಾರಣಕ್ಕೆ ನಮ್ಮ ಹೆಸರು ಅವರಂತೇ ʼಗಂಗಾʼ ಎಂದು ಇಡಲಾಗಿದೆʼ ಎಂದು ಆ ಕುಟುಂಬದವರು ಹೇಳುತ್ತಾರೆ.
ʼಗಂಗಾರಾಮʼ ಎಂದು ಹೆಸರಿರುವ ಈ ಕುಟುಂಬಸ್ಥರ ಮನೆಗಳು ಒಂದೇ ಓಣಿಯಲ್ಲಿದ್ದು, ಅಕ್ಕಪಕ್ಕದಲ್ಲಿವೆ. ಇನ್ನೊಂದು ವಿಶೇಷವೆಂದರೆ ಮೂವರು ಅಣ್ಣತಮ್ಮಂದಿಯರು ಬಹಳ ಅನೋನ್ಯವಾಗಿ ಜೀವನ ನಡೆಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೊಂದು ಮಜಾ ಏನಂದ್ರೆ…ಇವರ ಮನೆ ಹತ್ತಿರ ಯಾರಾದರೂ ಬಂದು ʼಗಂಗಾರಾಮ…ಎಂದು ಕರೆದರೆ, ʼಯಾ…ಗಂಗಾರಾಮಗೆ ಕರೆಯುತ್ತಿದ್ದೀರಾ? ಎಂದು ಸಾಮಾನ್ಯವಾಗಿ ಪ್ರಶ್ನಿಸುತ್ತಾರೆ. ಕೆಲವೊಮ್ಮೆ ಒಬ್ಬರನ್ನು ಕರೆದರೆ ಮತ್ತೊಬ್ಬರು ಹೊರಬಂದು ʼನನಗೆ ಕರೆದೀರಾʼ ಎಂದು ಕೇಳುತ್ತಾರೆ.
ಈ ಮೂವರು ಸಹೋದರರಿಗೆ ಈಗ 80 ಆಸುಪಾಸಿನ ವಯಸ್ಸು. ಗಂಗವ್ವ ಎಂಬ ಹೆಸರಿನ ಇವರ ಇಬ್ಬರು ಸಹೋದರಿಯರಿಗೆ ಮದುವೆ ಮಾಡಿಕೊಟ್ಟಿದರು. ಆ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ.
ಮೈಯಲ್ಲಿ ಶಕ್ತಿ ಇರುವತನಕ ಮಡಿಕೆ ತಯಾರಿಕೆ, ಕತ್ತೆ ಸಾಕಾಣಿಕೆ ಮಾಡುತ್ತಿದ್ದರು. ಕತ್ತೆಗಳ ಮೇಲೆ ಜಮೀನುಗಳಿಂದ ರಾಶಿ ತರುವ ಕೆಲಸ, ಮಡಿಕೆ ಮಾರಾಟ ಸೇರಿದಂತೆ ಇತರೆ ಕೆಲಸ ಮಾಡುತ್ತಿದ್ದರು. ಇದೀಗ ಮೂವರು ಕತ್ತೆ ಸಾಕಾಣಿಕೆ ಮಾಡುತ್ತಿಲ್ಲ. ಸಣ್ಣಪುಟ್ಟ ಮಡಿಕೆ ತಯಾರಿಕೆ ಕೆಲಸದಲ್ಲಿ ತೊಡಗಿದ್ದರು. ಕೆಲವೊಮ್ಮೆ ಆರೋಗ್ಯ ಕೈಕೊಡುವ ಕಾರಣ ಈಗ ಆ ಕೆಲಸವೂ ನಿಲ್ಲಿಸಿದ್ದಾರೆ.
ಒಂದೇ ಹೆಸರು ಕಂಡ ತಹಸೀಲ್ದಾರ್ ಪರೇಶಾನ್!
ಮೂವರು ಸಹೋದರರು ಅರವತ್ತು ವರ್ಷ ತುಂಬಿದ ಬಳಿಕ ವೃದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದರು. ಕೆಲ ವರ್ಷಗಳ ಕಾಲ ಮಾಸಿಕ ಪಿಂಚಣಿ ಪಡೆದಿದ್ದಾರೆ. ಆದರೆ, ಒಂದೇ ಊರಿನ, ಒಂದೇ ಹೆಸರು ಇರುವ ಮೂವರು ಪಿಂಚಣಿ ಹೇಗೆ ಪಡೆಯುತ್ತಿದ್ದಾರೆ ಎಂಬುದು ಗಮನಕ್ಕೆ ಬಂದ ಬಳಿಕ ಔರಾದ್ ತಾಲೂಕಿನ ತಹಸೀಲ್ದಾರ್ ಅವರು ಒಬ್ಬರ ಪಿಂಚಣಿ ರದ್ದುಗೊಳಿಸಿದ ಪ್ರಸಂಗ ನಡೆದಿತ್ತು.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಸರಣಿ ಹತ್ಯೆ: ಪ್ರಕರಣಗಳ ಸಮಗ್ರ ತನಿಖೆಗೆ SIT ರಚಿಸಿದ ಸರ್ಕಾರ
ತದನಂತರ ಮೂವರು ಸಹೋದರರು ತಹಸೀಲ್ದಾರ್ ಕಚೇರಿಗೆ ತೆರಳಿ ಭೇಟಿಯಾಗಿ ತಮ್ಮ ಹೆಸರಿನ ಗುಟ್ಟು, ದಾಖಲೆಗಳನ್ನು ಮುಂದಿಟ್ಟರೆ ತಹಸೀಲ್ದಾರ್ ಪರೇಶಾನ್ ಆಗಿ ಪಿಂಚಣಿ ಪುನಾರಂಭಿಸಿದ್ದಾರೆ ಎಂದು ಘಟನೆ ಬಗ್ಗೆ ವಿವರಿಸುತ್ತ ಸಹೋದರರು ಮುಗಳ್ನಕ್ಕರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Super ಮನುಷ್ಯನನ್ನು ನಂಬಿ ಕೆಟ್ಟವರು ಭೂಮಿ ಮೇಲೆ ಇದಾರೆ
ಆದರೆ ದೇವರ ಮೇಲೆ ಇಟ್ಟಿರುವ ನಂಬಿಕೆ ನ ನಂಬಿ ಸೋತವರು ಕೆಟ್ಟಿರುವವರು ಯಾರು ಇಲ್ಲ
🙏🙏