ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನವೆಂಬರ್ 23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯಲಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಿಮಿತ್ಯ ಹಮ್ಮಿಕೊಂಡಿರುವ ರಾಜ್ಯಮಟ್ಟದ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ ಫಲಿತಾಂಶವನ್ನು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಬಾಗಲಕೋಟ ಜಿಲ್ಲೆಯ ಸವದಿ ಗ್ರಾಮದ ಭಾಲ್ಕಿ ಹಿರೇಮಠ ಸಂಸ್ಥಾನದ ಪ್ರಸಾದ ನಿಲಯದ ವಿದ್ಯಾರ್ಥಿ ಶಿವರಾಜ ಪಾಟೀಲ 816 ವಚನಗಳು ಹೇಳುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಬೀದರ ಜಿಲ್ಲೆಯ ಹುಮನಾಬಾದದ ಡಾ.ಕಲ್ಯಾಣಮ್ಮ ರಾಮೇಶಚಂದ್ರ ಮಟ್ಟಿ 505 ವಚನಗಳು ಹೇಳಿ ಎರಡನೇ ಸ್ಥಾನ ಗಳಿಸಿದ್ದಾರೆ. ಬೀದರನ ಬಸವಗಿರಿಯ ಚೆನ್ನಬಸವಣ್ಣ 433 ವಚನಗಳು ಹೇಳಿ ತೃತೀಯ ಸ್ಥಾನವನ್ನು ಪಡೆದಿಕೊಂಡಿದ್ದಾರೆ.
ಬೆಂಗಳೂರು ಬೆಳಗಾವಿ, ಧಾರವಾಡ, ಬಾಗಲಕೋಟೆ, ರಾಯಚೂರು, ಕಲಬುರಗಿ, ಬೀದರ ಮುಂತಾದ ಜಿಲ್ಲೆಗಳಿಂದ 108 ಸ್ಪರ್ಧಾಳುಗಳು ಆಗಮಿಸಿದ್ದರು. ಇವರಲ್ಲಿ 20 ವಿದ್ಯಾರ್ಥಿಗಳು 200ಕ್ಕಿಂತಲೂ ಹೆಚ್ಚಿನ ವಚನಗಳನ್ನು, 35 ವಿದ್ಯಾರ್ಥಿಗಳು ನೂರಕ್ಕಿಂತಲೂ ಹೆಚ್ಚಿನ ವಚನಗಳನ್ನು ಹೇಳುವ ಮೂಲಕ ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ವಚನ ಪುಸ್ತಕ ನೀಡಲಾಯಿತು. ವಿಜೇತರಾದವರಿಗೆ 2024ರ ನ. 23, 24 ರಂದು ಬಸವಕಲ್ಯಾಣದಲ್ಲಿ ನಡೆಯುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅನುಭವ ಮಂಟಪದ ಕಾರ್ಯದರ್ಶಿ ಡಾ.ಎಸ್.ಬಿ. ದುರ್ಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನ. 22ರಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ‘ಕನ್ನಡ ಜಾಗೃತಿ’ ಪ್ರಶಸ್ತಿ ಪ್ರದಾನ
ಪ್ರಥಮ ಬಹುಮಾನ 20 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ಶರಣೆ ಸುಶೀಲಾದೇವಿ ಬಿ.ವಿ. ಪಟೇಲ್ ಚಾರಿಟೇಬಲ್ ಟ್ರಸ್ಟ್ ಬಸವಲ್ಯಾಣ ಇವರ ದಾಸೋಹತ್ವದಲ್ಲಿ ನೀಡಲಾಗುವುದು ಎಂದು ತಿಳಿಸಿದರು.