ಈದಿನ ಸಂದರ್ಶನ | ಬದ್ಧತೆ ಮೈಗೂಡಿಸಿಕೊಂಡು ಓದಿದರೆ ಕೋಚಿಂಗ್‌ ಅಗತ್ಯವಿಲ್ಲ

Date:

Advertisements

ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2023ನೇ ಸಾಲಿನಲ್ಲಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶದಲ್ಲಿ ಬೀದರ್‌ ನಗರದ ನಿವಾಸಿ ಮೊಹಮ್ಮುದ್ ಅಸೀಮ್‌ ಮುಜತಬಾ 481ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರೊಂದಿಗೆ ʼಈದಿನ.ಕಾಮ್‌ʼ ಬೀದರ್‌ ಜಿಲ್ಲಾ ಸಂಯೋಜಕ ಬಾಲಾಜಿ ಕುಂಬಾರ ನಡೆಸಿದ ಸಂದರ್ಶನ ಇಲ್ಲಿದೆ.

ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಹೇಳಿ.

ನಾನು ಬೀದರ್‌ ನಗರದ ಗೋಲೆಖಾನಾ ನಿವಾಸಿ. ನನ್ನ ತಂದೆ ಎಂಡಿ‌ ಇಜಾಜುದ್ದೀನ್‌ ಬ್ರಿಮ್ಸ್‌ನಲ್ಲಿ ಪ್ರಯೋಗಾಲಯ ತಂತ್ರಜ್ಞಾನರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಶಾಹೀದಾ ಬೇಗಂ ಪ್ರಾಥಮಿಕ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ‌ ಶಿಕ್ಷಣವನ್ನು ಬೀದರ್‌ನ ಗುರುನಾನಕ್ ಪಬ್ಲಿಕ್‌ ಶಾಲೆಯಲ್ಲಿ ಪಡೆದಿದ್ದೇನೆ. ಬೆಂಗಳೂರಿನ ಬಿಐಎಂಎಸ್ ಕಾಲೇಜಿನಲ್ಲಿ‌ ಬಿಇ ಕೆಮಿಕಲ್ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದ್ದೇನೆ. ಬಳಿಕ ಎರಡು ವರ್ಷ ಜಿಂದಾಲ್‌ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. 2019 ರಿಂದ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿದ್ದೇನೆ.

Advertisements

ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

ನಾನು ಎಲ್ಲಿಯೂ ಕೋಚಿಂಗ್‌ ತೆಗೆದುಕೊಂಡಿಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸ್ಫರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ನೀಡಲು ಪರೀಕ್ಷೆ ನಡೆಸುತ್ತಾರೆ. ಆ ಪರೀಕ್ಷೆಯಲ್ಲಿ ಮೆರಿಟ್‌ ಆಧಾರದಲ್ಲಿ ನನಗೆ ಪ್ರವೇಶ ಸಿಕ್ಕಿತ್ತು, ಆಗ ನಾನು ದೆಹಲಿ ಹಾಗೂ ಹೈದ್ರಾಬಾದ್‌ನಲ್ಲಿ ಉಚಿತವಾಗಿ ಅಧ್ಯಯನ ನಡೆಸಿ ಸ್ವತಃ ಸಿದ್ಧತೆ ನಡೆಸಿದ್ದೆ.

ಓದುವ ಪ್ಲ್ಯಾನ್‌ ಹೇಗಿತ್ತು?

ನಾನು ʼಅರ್ಲಿ ಬರ್ಡ್‌ʼ ಬೆಳಿಗ್ಗೆ 6 ಗಂಟೆಗೆ ಎದ್ದ ತಕ್ಷಣ ಮೊದಲು ದಿನಪತ್ರಿಕೆ ಓದುತ್ತಿದ್ದೆ, ಬಳಿಕ‌ ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು ಓದಿ ಸಂಜೆ ಅದನ್ನು ರಿವಿಷನ್‌ ಮಾಡುತ್ತಿದ್ದೆ. ರಾತ್ರಿ ಮಲಗುವಾಗ ಮನನ ಮಾಡಿದರೆ ಅದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ ಎಂಬುದು ನನ್ನ ನಂಬಿಕೆ. ಯಶಸ್ಸಿನ ಬಗ್ಗೆ ನನ್ನ ನಂಬಿಕೆಯಿಟ್ಟು ವಿಶ್ವಾಸದಿಂದ ಓದುತ್ತಿದ್ದೆ.

ಯುಪಿಎಸ್ಸಿ ಪರೀಕ್ಷೆ ಬರೆಯಲು ನಿಮಗೆ ಯಾರು ಪ್ರೇರಣೆ?

ಬೀದರನಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿ‌ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಹರ್ಷಾಗುಪ್ತಾ ಹಾಗೂ ಪಿ.ಸಿ.ಜಾಫರ್ ಅವರು ನನಗೆ ಪ್ರೇರಣೆ, 2019ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿ ಐಪಿಎಸ್‌ ಅಧಿಕಾರಿಯಾಗಿರುವ ಎಂ.ಡಿ.ನದೀಮ್‌ ಹಾಗೂ ಸ್ನೇಹಿತ ಐಎಎಸ್‌ ಅಧಿಕಾರಿ ಹರೀಶ್‌ ಎಂಬುವರ ನಿರಂತರ ಮಾರ್ಗದರ್ಶನ, ಸಹಕಾರದೊಂದಿಗೆ ನಾನು ಪರೀಕ್ಷೆಗೆ ಸಿದ್ಧತೆ ಮಾಡಿದ್ದೇನೆ.

ಪರೀಕ್ಷಾ ಯಶಸ್ಸಿಗೆ ಕೋಚಿಂಗ್ ಅಗತ್ಯವೇ ?

ಪರೀಕ್ಷೆಗೆ ಕೋಚಿಂಗ್ ಅತ್ಯವಶ್ಯಕ ಎಂಬ ನಿಯಮವೇನೂ ಇಲ್ಲ. ಕೆಲವರಿಗೆ ಅಗತ್ಯ ಎನಿಸಬಹುದು. ನಾನಂತೂ ಕೋಚಿಂಗ್‌ ಹೋಗಲಿಲ್ಲ. ಅಧ್ಯಯನ ಸಾಮಾಗ್ರಿಗಳನ್ನು ಆಯ್ಕೆ ಮಾಡಿಕೊಂಡು ಪೂರ್ವಭಾವಿ ಪರೀಕ್ಷೆ ಎದುರಿಸಿದವರ ಸಹಕಾರದೊಂದಿಗೆ ಓದಿದರೂ ತೇರ್ಗಡೆ ಹೊಂದಬಹುದು.

ಎಷ್ಟನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ ?

2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 937ನೇ ರ‍್ಯಾಂಕ್‌ ಬಂದಿತ್ತು. ಆವಾಗ ಭಾರತೀಯ ರೈಲ್ವೆ ಸರ್ವಿಸ್‌ಗೆ ಆಯ್ಕೆಯಾಗಿದ್ದೆ. ಈ ಸಲ ನನಗೆ ಐದನೇ ಪ್ರಯತ್ನದಲ್ಲಿ 481ನೇ ರ‍್ಯಾಂಕ್‌ ಪಡೆದಿರುವೆ, ಐಪಿಎಸ್ ಅಧಿಕಾರಿ ಆಗುವುದು ಬಹುತೇಕ ಖಚಿತವಾಗಿದೆ.

ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನಿಮ್ಮ ಸಲಹೆ?

ನಾನು ಹಿಂದುಳಿದ ಪ್ರದೇಶ ಹಾಗೂ ಗ್ರಾಮೀಣ ಭಾಗದವನು, ಹೀಗಾಗಿ ನಗರ, ಗ್ರಾಮೀಣ ಭಾಗದ ಯಾರೇ ಇರಲಿ ಕನ್ನಡ, ಇಂಗ್ನಿಷ್‌ ಮಾಧ್ಯಮದ ಅಭ್ಯರ್ಥಿಗಳೇ ಆಗಿರಲಿ, ಎಲ್ಲರಿಗೂ ತಮ್ಮ ಇಷ್ಟದ ಭಾಷೆಯಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಶಿಸ್ತು, ಕಠಿಣ ಪರಿಶ್ರದಿಂದ ಉತ್ತಮ ಸಲಹೆ, ಮಾರ್ಗದರ್ಶನದೊಂದಿಗೆ ಯೋಜನಾ ಬದ್ಧವಾಗಿ ಪೂರ್ವಸಿದ್ಥತೆ ಮಾಡಿಕೊಂಡು ಪರೀಕ್ಷೆ ಎದುರಿಸಿದರೆ ಯಶಸ್ಸು ಒಲಿಯುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ನಿಮ್ಮ ಕಿವಿ ಮಾತೇನು?

ಬಸವಣ್ಣನವರ ʼಕಾಯಕವೇ ಕೈಲಾಸʼ ಎಂಬ ನುಡಿಯಂತೆ ನಾವು ನಮ್ಮ ಕೆಲಸವನ್ನು ತುಂಬಾ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಮಾಡಬೇಕು. ಇಷ್ಟೇ ಸಮಯ ಓದಬೇಕು ಎನ್ನುವುದಕ್ಕಿಂತ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಸಮಯ ಓದಬೇಕು. ಯುಪಿಎಸ್ಸಿ ಪರೀಕ್ಷೆ ಅಲ್ಲದೇ ಬೇರೆ ಯಾವುದೇ ಪರೀಕ್ಷೆಗೆ ಸಿದ್ಧತೆ ಮಾಡಬೇಕಾದರೆ ಸಮಯ ವ್ಯರ್ಥ ಮಾಡದೇ ಹೆಚ್ಚು ಅಧ್ಯಯನದಲ್ಲಿ ತೊಡಗಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ.

ನಿಮ್ಮ ಕುಟುಂಬದ ಸಹಕಾರ ಹೇಗಿತ್ತು?

ನಮ್ಮ ಕುಟುಂಬದ ತಂದೆ-ತಾಯಿ, ಅಣ್ಣ-ಅಕ್ಕ ಅವರು ಪ್ರತಿ ಹಂತದಲ್ಲೂ ಅವರು ನನ್ನ ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ. ಓದುವ ಕೆಲಸವನ್ನು ಮಾತ್ರ ನಾನು ಮಾಡಿದ್ದೇನೆ. ಪರೀಕ್ಷೆಗೆ ಚನ್ನಾಗಿ ಸಿದ್ಧತೆ ಮಾಡು ಎಂದಷ್ಟೇ ಹೇಳುತ್ತಿದ್ದರು, ಯಶಸ್ಸಿನ ಬಗ್ಗೆ ಯಾವತ್ತೂ ಪ್ರಶ್ನಿಸಲಿಲ್ಲ. ನನ್ನ ಮೇಲೆ ನಂಬಿಕೆಯಿಂದ ಓದಲು ತುಂಬಾ ಸಹಕಾರ ನೀಡಿದ್ದಾರೆ. ಯಾವುದೇ ಆಕಾಂಕ್ಷಿಗೆ ಕುಟುಂಬದವರ ಸಹಕಾರ ಬಹಳ ಮುಖ್ಯ ಹಾಗೆಯೇ ಆ ಜವಾಬ್ದಾರಿಯನ್ನು ನನ್ನ ಕುಟುಂಬದವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರಿಂದಲೇ ನಾನಿಂದು ಯಶಸ್ಸು ಕಾಣಲು ಸಾಧ್ಯವಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X