ಕರಾವಳಿಯ ಮುಸ್ಲಿಂ ನಾಯಕ ಅಶ್ರಫ್ ಕಿನಾರ, ಸರ್ಫರಾಝ್ ವಿಟ್ಲ ಸೇರಿದಂತೆ ಇತರ ಸಾಮಾಜಿಕ ಕಾರ್ಯಕರ್ತರು ತಮ್ಮ ಹಾಡು, ಬರಹ ಹಾಗೂ ಲೇಖನಗಳ ಮೂಲಕ ಸರ್ಕಾರದ ಸರ್ಕಾರದ ಜನವಿರೋಧಿ ಕ್ರಮಗಳ ವಿರುದ್ಧ ಮಾತನಾಡಿ, ಅವರ ವೈಫಲ್ಯದ ಕುರಿತು ಜನರ ಗಮನ ಸೆಳೆದಿದ್ದರು. ಇದರ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಎಫ್ಐಆರ್ ದಾಖಲಿಸಿದ್ದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್ ಇಲಾಖೆ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಟ್ಸ್ಯಾಪ್ನಲ್ಲಿ ಸಂದೇಶಗಳನ್ನು ಹಂಚಿಕೊಂಡ ಕಾರಣಕ್ಕೆ ಅಶ್ರಫ್ ಕಿನಾರ್ರ ಮೇಲೆ ಕೇಸು ದಾಖಲಿಸಿದರೆ, ಸರ್ಫರಾಝ್ ವಿಟ್ಲ ಎಂಬವರು ಹಾಡಿನ ಮೂಲಕ ಸರ್ಕಾರದ ವೈಫಲ್ಯವನ್ನು ಬಹಿರಂಗ ಪಡಿಸಿ ಜನರ ಗಮನ ಸೆಳೆದಿದ್ದಾರೆ ಎಂಬ ಕಾರಣಕ್ಕೆ ಕೇಸು ದಾಖಲಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ.
ಭಾರತದ ಸಂವಿಧಾನದ 19(1)(a) ಲೇಖನದಡಿಯಲ್ಲಿ ಖಾತರಿಪಡಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಉಲ್ಲಂಘಿಸುತ್ತಿದೆ. ಅಶ್ರಫ್ ಕಿನಾರ್ರ ಸಂದೇಶಗಳು ವಿಮರ್ಶೆಯ ರೂಪದಲ್ಲಿದ್ದರೂ, ಅವುಗಳನ್ನು ವಿರೋಧಾಭಾಷಣವೆಂದು ತಪ್ಪಾಗಿ ಚಿತ್ರಿಸಿ, ಸರ್ಕಾರ ತನ್ನ ವಿರೋಧಿಗಳ ಧ್ವನಿಯನ್ನು ದಬ್ಬಲು ಪ್ರಯತ್ನಿಸುತ್ತಿದೆ. ರಾಜ್ಯ ಸರ್ಕಾರವು ಸಾಮಾಜಿಕ ಘರ್ಷಣೆಗೆ ಕಾರಣವಾಗುವ ಪ್ರಚೋದನಕಾರಿ ಭಾಷಣಗಳನ್ನು ತಡೆಯಲು ವಿಫಲವಾಗಿದೆ. ಆದರೆ, ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವವರ ಮೇಲೆ ಕೇಸು ದಾಖಲಿಸುವ ಮೂಲಕ ತನ್ನ ದಮನಕಾರಿ ನೀತಿಗಳನ್ನು ತೋರಿಸುತ್ತಿದೆ. ಇದು ಜನಪರ ಆಡಳಿತದ ಬದಲಿಗೆ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಇಂಡಿ ತಾಲೂಕಿಗೆ ನಾಲ್ಕು ವಿದ್ಯುತ್ ಉಪಕೇಂದ್ರ ಮಂಜೂರು: ಎಸ್ ಎ ಬಿರಾದಾರ
“ಅಶ್ರಫ್ ಕಿನಾರರಂತಹ ವ್ಯಕ್ತಿಗಳ ಮೇಲೆ ಕೇಸು ದಾಖಲಿಸುವುದು ಕರಾವಳಿಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದಕ್ಕಿಂತ, ರಾಜಕೀಯ ಪ್ರತೀಕಾರಕ್ಕೆ ಸಂಬಂಧಿಸಿದೆ ಎಂದು ನಾವು ಭಾವಿಸುತ್ತೇವೆ. ಎಸ್ಡಿಪಿಐ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಅಶ್ರಫ್ ಕಿನಾರ್ರ ಮೇಲಿನ ಕೇಸನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತದೆ” ಎಂದರು.
“ರಾಜ್ಯ ಸರ್ಕಾರವು ಎಲ್ಲ ಸಮುದಾಯಗಳಿಗೆ ಸಮಾನ ನ್ಯಾಯವನ್ನು ಒದಗಿಸಬೇಕು ಮತ್ತು ಕಾನೂನಿನ ದುರ್ಬಳಕೆಯನ್ನು ತಡೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಜನಪರವಾದ ಆಡಳಿತವನ್ನು ಮರುಸ್ಥಾಪಿಸಲು ನಾವು ಒತ್ತಾಯಿಸುತ್ತೇವೆ. ಎಸ್ಡಿಪಿಐ ಈ ಅನ್ಯಾಯದ ವಿರುದ್ಧ ಕಾನೂನು ಮತ್ತು ಜನಾಂದೋಲನದ ಮೂಲಕ ಹೋರಾಡಲು ಬದ್ಧವಾಗಿದೆ” ಎಂದು ಎಚ್ಚರಿಕೆ ನೀಡಿದರು.