ಭಾರತ ಕಮ್ಯೂನಿಸ್ಟ್ ಪಕ್ಷ ಸ್ಥಾಪನೆಯಾಗಿ 100 ವರ್ಷಕ್ಕೆ ಕಾಲಿಡುತ್ತಿದೆ. 100 ವರ್ಷಗಳ ಹೋರಾಟ ಮತ್ತು ಬಲಿದಾನದ ಅಂಗವಾಗಿ ಗುರುವಾರ ಬೀದರ್ ನಗರದ ಭಗತಸಿಂಗ್ ವೃತ್ತ ಸಮೀಪದ ಸ್ಟಾರ್ ಲಾಡ್ಜ್ ಸಭಾಂಗಣದಲ್ಲಿ ಸಿಪಿಐ ಜಿಲ್ಲಾ ಸಮಿತಿಯಿಂದ ಪಕ್ಷದ ಶತಮಾನೋತ್ಸವ ಕಾರ್ಯಕ್ರಮ ಜರುಗಿತು.
ಸಿಪಿಐ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ ಮಾತನಾಡಿ, ʼ1925ರಲ್ಲಿ ಭಾರತ ಕಮ್ಯೂನಿಸ್ಟ ಪಕ್ಷವು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನ್ಮತಾಳಿತ್ತು. ಸಿಪಿಐ ಅಂದಿನಿಂದ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯಿಟ್ಟು ದೇಶದಿಂದ ಬ್ರಿಟಿಷ್ ಸಾಮ್ರಾಜ್ಯ ವಸಾಹತುಶಾಹಿ ತೊಲಗಿಸಲು ಹೋರಾಟ ಆರಂಭಿಸಿತ್ತುʼ ಎಂದು ಹೇಳಿದರು.
ʼಇಂದಿನ ಕೇರಳದ ಕಯ್ಯೂರ ರೈತ ಚಳುವಳಿ, ಪುನ್ನಪ್ರ-ವಾಯಲಾರ ಚಳುವಳಿ, ಬೆಂಗಾಲದ ತೆಭಗಾ ಚಳುವಳಿ, ತೆಲಂಗಾಣದ ಸಶಸ್ತ್ರ ಹೋರಾಟಗಳು ಭಾರತದ ಸ್ವತಂತ್ರ ಚಳುವಳಿಯ ಇತಿಹಾಸದಲ್ಲಿ ಮರೆಯಲಾಗದ ಪ್ರಕರಣಗಳಾಗಿರುತ್ತದೆ. ಸ್ವಾತಂತ್ರದ ನಂತರ ಭಾರತ ಕಮ್ಯೂನಿಸ್ಟ್ ಪಕ್ಷವು ಭೂ ಸುಧಾರಣೆ, ನಿರೂದ್ಯೋಗ, ಬೆಲೆ ಏರಿಕೆಯ ಹಾಗೂ ಕೋಮುವಾದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದೆʼ ಎಂದರು.
ದೇಶ, ರಾಜ್ಯದಲ್ಲಿ ಕೋಮು ಸೌರ್ಹಾದತೆ ಕಾಪಾಡುವುದು, ಸಂವಿಧಾನ ರಕ್ಷಣೆ, ಆರ್ಎಸ್ಎಸ್, ಬಿಜೆಪಿ ಕೋಮುವಾದವನ್ನು ಸೋಲಿಸಲು ಎಲ್ಲ ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸುವುದು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಹೊರಗುತ್ತಿಗೆ ನೌಕರರು ಹಾಗೂ ಪಂಚಾಯತ ನೌಕರರನ್ನು ಸಕ್ರಮಗೊಳಿಸಬೇಕು. ರೈತರ ಎಲ್ಲ ಸಾಲ ಮನ್ನಾ ಮಾಡುವುದು ಮತ್ತು ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸುವಂತೆ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಿಪಿಐ ಜಿಲ್ಲಾ ಘಟಕದ ಪ್ರಮುಖರಾದ ಶಫಾಯತ ಅಲಿ, ಶಿವರಾಜ ಕಮಠಾಣಾ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಅಲಿ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆನ್ಲೈನ್ ಗೇಮಿಂಗ್ : ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಕಾರ್ಯಕ್ರಮದಲ್ಲಿ ಎಂ.ಡಿ. ಅಲಿ, ನಜೀರ್ ಅಹ್ಮದ್ ಚೊಂಡಿ, ಅಹ್ಮದಖಾನ್, ಎಂ.ಡಿ. ಖಮರ್ ಪಟೇಲ್, ಪ್ರಭು ಹುಚ್ಚಕನಳ್ಳಿ, ಪ್ರಭು ತಗಣಿಕರ್, ಚಾಂದೋಬಾ ಭೋಸ್ಲೆ, ಮಾಣಿಕ ಖಾನಾಪೂರಕರ್, ಶಿವರಾಜ ಕಮಠಾಣಾ, ಶೇಕ್ ಯಾದುಲ್, ಸುರೇಶ ವಾಗನಕೇರಾ, ಜೈಶೀಲ, ಸುಜಾತಾ, ಭದ್ರೆ, ವಿಜಯಕುಮಾರ, ರಾಮಣ್ಣ ಅಲ್ಮಾಸಪೂರ, ಚಂದ್ರಕಲಾ, ಪಾಂಡುರಂಗ ಪ್ಯಾಗೆ, ಶೇಖ್ ನವಾಜ್, ಮೌಲಾ ಖುರೇಷಿ, ಶಿವಾಜಿ ಮಾನಕಾರಿ, ಘಾಳೆಪ್ಪಾ ಕಾಪಲಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.