ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಮಂಜೂರಾತಿಗಾಗಿ ಸರಿ ಸುಮಾರು ಎರಡು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಕೇಂದ್ರದಿಂದ ಏಮ್ಸ್ ಮಂಜೂರು ಮಾಡುವುದಕ್ಕಾಗಿ ಒತ್ತಾಯಿಸುವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಭರವಸೆ ನೀಡಿದರು.
ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ತೆರಳಿ ಮಾತನಾಡಿದ ಅವರು, ಜಿಲ್ಲೆಯ ಬಹುದಿನ ಬೇಡಿಕೆಯಾದ ಏಮ್ಸ್ ಅನ್ನು ಈಡೇರಿಸುವ, ಸರ್ಕಾರ ಗಮನಕ್ಕೆ ತರುವ ಕೆಲಸ ಮಾಡುವೆ. ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದು, ಎಲ್ಲಾ ರಂಗಗಳಲ್ಲೂ ಅನುದಾನ ತರುವುದಕ್ಕೆ ಹೆಚ್ಚು ಹೊತ್ತು ಕೊಟ್ಟು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಏಮ್ಸ್ ಮಂಜೂರಿಗಾಗಿ ರಾಜ್ಯ ಸರ್ಕಾರವು ಎರಡು ಬಾರಿ ಪತ್ರ ಬರೆದರೂ ಕೇಂದ್ರದಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಕೇಳಿದ್ದೇನೆ. ಏಮ್ಸ್ ಹೋರಾಟ ಸುಮಾರು ದಿನಗಳಿಂದ ನಡೆಯುತ್ತಿರುವ ಬಗ್ಗೆ ಮಾಹಿತಿಯಿದೆ. ಕೈಲಾದಷ್ಟು ಮೀರಿ ಕೆಲಸ ಮಾಡುವೆ. ತಾಳ್ಮೆಯಿಂದ ಸಹಕರಿಸಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ತಾರತಮ್ಯ ನಡೆಯುತ್ತಿದೆ. ಬಹಳಷ್ಟು ಕೆಲಸಗಳು ಆಗಬೇಕಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಗೆ ಏಮ್ಸ್ ಮಂಜೂರು ಅವಶ್ಯಕತೆ ಇದೆ ಎಂದರು.
ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಮಾತನಾಡಿ, “ಏಮ್ಸ್ ಮಂಜೂರಾತಿಗೆ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರದಿಂದ ಕನಿಷ್ಟ ಸ್ಪಂದನೆ ಇಲ್ಲದಂತಾಗಿದೆ. ದೆಹಲ್ಲಿ ಮಟ್ಟದಲ್ಲಿ ಹೋರಾಟ ನಡೆಸಿದರು ಯಾವುದೇ ಲಾಭವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಇವರ ಪ್ರಯತ್ನದ ಫಲವಾಗಿ ರಾಹುಲ್ ಗಾಂಧಿವರಿಗೆ ಗಮನಕ್ಕೆ ತರಲು ಸಾಧ್ಯವಾಗಿದ್ದು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಏಮ್ಸ್ಗಾಗಿ ಮಾಡು ಇಲ್ಲ ಮಡಿ ಹೋರಾಟಕ್ಕೂ ಸಿದ್ಧ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ರಸ್ತೆಗುಂಡಿ ಸರಿಪಡಿಸಲು ಆಗ್ರಹಿಸಿ ಗಿಡ ನೆಟ್ಟು ಆರ್ವೈಎಫ್ಐ ಸಂಘಟನೆಯಿಂದ ಪ್ರತಿಭಟನೆ
ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ನೀಡಿಲ್ಲ. ಕೂಡಲೇ ಏಮ್ಸ್ ಮಂಜೂರಾತಿಯನ್ನು ಪ್ರಕಟಿಸಬೇಕು ಎಂದು ಸಚಿವರಲ್ಲಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ಅಶೋಕ ಕುಮಾರ ಜೈನ್, ಬಿಜೆಪಿ ಮುಖಂಡರುಗಳಾದ ತ್ರಿವಿಕ್ರಮ ಜೋಷಿ, ಬಂಡೇಶ ವಲ್ಕಂದಿನ್ನಿ ನಗರಸಭೆ ಉಪಾಧ್ಯಕ್ಷ ಸಾಜೀದ ಸಮೀರ್, ಕಾಮರಾಜ ಪಾಟೀಲ್, ಚಾಂದಪಾಷಾ ಶಕ್ತಿನಗರ, ಅಮರೇಗೌಡ ಪಾಟೀಲ್, ಥಾಮಸ ಬೆಂಜಮಿನ್, ಮೊಹ್ಮದ್ ಇಸಾಕ್, ಮಲ್ಲನಗೌಡ ವೀರಭದ್ರಪ್ಪ ಅಂಬರಪೇಟೆ, ಅಜೀಜ್ ದಿನ್ನಿ, ಮಹೇಂದ್ರ ಸಿಂಗ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಜಸವಂತರಾವ್ ಕಲ್ಯಾಣಕಾರಿ, ರಮೇಶರಾವ ಕಲ್ಕೂರಕರ್, ಅನಿತಾ ಮಂತ್ರಿ, ಸಂಗಮೇಶ, ಸುರೇಶಗೌಡ, ಮೊಹ್ಮದ ಅಲಿ, ಗೋಪಾಲಯ್ಯ ಇಲ್ಲೂರು ಸೇರಿದಂತೆ ಅನೇಕರು ಭಾಗಿಯಾದರು.
