ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣ ಖಾತೆಗೆ ಜಮೆಯಾಗದ ಫಲಾನುಭವಿಗಳಿಗಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಚಾಮರಾಜನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಧಾರ್ ಜೋಡಣೆ, ಎನ್ಪಿಸಿಐ ಮ್ಯಾಪಿಂಗ್ ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಮಂದಿ ಸಾಲುಗಟ್ಟಿ ನಿಂತಿದ್ದರು.
ಅನ್ನಭಾಗ್ಯ ಯೋಜನೆ ಫಲಾನುಭವಿಗಳಲ್ಲದೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೂ ಕೂಡ ಮಳೆಯನ್ನೂ ಲೆಕ್ಕಿಸಿದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರು.
ಜಿಲ್ಲೆಯಲ್ಲಿ 2,65,794 ಪಡಿತರ ಚೀಟಿದಾರರು ಈ ಯೋಜನೆಗೆ ಅರ್ಹರಾಗಿದ್ದು, ನವೆಂಬರ್ ತಿಂಗಳಲ್ಲಿ 2,53,705 ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ತಾಂತ್ರಿಕ ಕಾರಣಗಳ ಕಾರಣಕ್ಕೆ ಇನ್ನೂ 10,500 ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆಯಾಗಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಇ–ಕೆವೈಸಿ, ಎನ್ಪಿಸಿಐ ಮ್ಯಾಪಿಂಗ್ ಸೇರಿದಂತೆ ಹಲವು ಕಾರಣಗಳಿಂದ ಹಣ ವರ್ಗಾವಣೆಯಾಗುತ್ತಿಲ್ಲ. ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಆಹಾರ ಇಲಾಖೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿಶೇಷ ಶಿಬಿರ ಆಯೋಜಿಸಿದೆ.
ಕೊಳ್ಳೇಗಾಲದಲ್ಲಿ ಸೋಮವಾರ ಶಿಬಿರ ನಡೆದಿದ್ದು, 542 ಮಂದಿ ಭಾಗವಹಿಸಿದ್ದರು. ಚಾಮರಾಜನಗರದಲ್ಲಿ ಮಂಗಳವಾರ ನಡೆದಿದೆ.
ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಭಾಗವಹಿಸಲು ಬೆಳಿಗ್ಗೆ 8 ಗಂಟೆಗೆ ಹೊತ್ತಿಗೆ ನೂರಾರು ಫಲಾನುಭವಿಗಳು ಬಂದಿದ್ದರು. ಸಾಲಿನಲ್ಲಿ ನಿಂತು ಸರತಿಯಲ್ಲಿ ಕಾಯುತ್ತಿದ್ದಾಗ ಮಳೆ ಉದುರಿದ್ದು, ಫಲಾನುಭವಿಗಳಿಗೆ ಕಿರಿಕಿರಿ ಉಂಟು ಮಾಡಿತು. ಕೆಲವರು ಛತ್ರಿ ಹಿಡಿದು ರಕ್ಷಣೆ ಪಡೆದರೆ, ಇನ್ನೂ ಕೆಲವರು ಜಿಟಿಜಿಟಿ ಮಳೆಯಲ್ಲಿ ನೆನೆದುಕೊಂಡೇ ನಿಂತರು.
ಒಂದೇ ಕಡೆ ಸೇವೆ: ಆಧಾರ್ ತಿದ್ದುಪಡಿ, ಬ್ಯಾಂಕಿಂಗ್ ಸೇವೆ, ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್ ಸೇವೆ, ನ್ಯಾಯಬೆಲೆ ಅಂಗಡಿಯ ಸೇವೆ ಶಿಬಿರದಲ್ಲಿ ಲಭ್ಯವಿತ್ತು. ಅರ್ಜಿದಾರರ ಸಮಸ್ಯೆಯನ್ನು ಪರಿಶೀಲಿಸಿ ಆಯಾ ಕೌಂಟರ್ಗಳಲ್ಲಿ ಅವರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಯತ್ನಿಸಿದರು.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು 944 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದು, ಈ ಪೈಕಿ 340 ಮಂದಿ ಇ–ಕೆವೈಸಿ ಮಾಡಿಸಿಕೊಂಡಿದ್ದಾರೆ. ಇಂಡಿಯನ್ ಪೋಸ್ಟಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿ 190 ಮಂದಿ ಖಾತೆ ತೆರೆದಿದ್ದಾರೆ ಎಂಬುದಾಗಿ ಆಹಾರ ಇಲಾಖೆ ಮಾಹಿತಿ ನೀಡಿದೆ.
“ನಿಷ್ಕ್ರಿಯಗೊಂಡಿದ್ದ 105 ಫಲಾನುಭವಿಗಳ ಖಾತೆಯನ್ನು ಪುನರ್ಸ್ಥಾಪಿಸಲಾಯಿತು. 34 ಮಂದಿಯ ಆಧಾರ್ ತಿದ್ದುಪಡಿ ಮಾಡಲಾಗಿದೆ. ವಿವಿಧ ಬ್ಯಾಂಕ್ಗಳಲ್ಲಿ 211 ಮಂದಿಯ ಖಾತೆಯನ್ನು ಎನ್ಪಿಸಿಐ ಮ್ಯಾಪಿಂಗ್ ಮಾಡಲಾಯಿತು” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಯೋಗಾನಂದ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರಿನಲ್ಲಿ ಅನೈತಿಕ ಪೊಲೀಸ್ಗಿರಿ | ಯುವತಿಗೆ ಚಾಕ್ಲೆಟ್ ಕೊಟ್ಟದ್ದಕ್ಕೆ ಯುವಕನ ಮೇಲೆ ಹಲ್ಲೆ: ನಾಲ್ವರ ಬಂಧನ
“ಚಾಮರಾಜನಗರ ತಾಲೂಕಿನಲ್ಲಿ 3,060 ಫಲಾನುಭವಿಗಳಿಗೆ ಹಣ ಬರುತ್ತಿರಲಿಲ್ಲ. ಜನರ ಅನುಕೂಲಕ್ಕಾಗಿ ಬ್ಯಾಂಕ್ಗಳು, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ಈ ಶಿಬಿರ ಹಮ್ಮಿಕೊಂಡಿದ್ದೆವು. ತಾಲೂಕಿನ ಹಲವು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಬಂದಿದ್ದು, ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ” ಎಂದರು.
“ನಾಲ್ಕು ತಿಂಗಳಿಂದ ಅನ್ನಭಾಗ್ಯ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರಲಿಲ್ಲ. ಆಧಾರ್, ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಯಿರುವುದಾಗಿ ಹೇಳುತ್ತಿದ್ದರು. ಅದನ್ನು ಸರಿ ಮಾಡಿಸಿಕೊಳ್ಳಲು ಬಂದಿದ್ದೇವೆ” ಎಂದು ದ್ಥಳೀಯರು ತಿಳಿಸಿದ್ದಾರೆ.