ಚಾಮರಾಜನಗರ ಜಿಲ್ಲೆಯಲ್ಲಿ ಈ ಹಿಂದೆ ಬೆಳಕಿಗೆ ಬಂದಿದ್ದ ಚುಕ್ಕಿಚರ್ಮ ಕಾಯಿಲೆ ಮತ್ತೆ ಕಾಣಿಸಿಕೊಂಡಿದೆ. ಚುಕ್ಕಿಚರ್ಮ ರೋಗ ಎಂದು ಕರೆಯಲಾಗುವ ಈ ಕಾಯಿಲೆ ವೈದ್ಯರಿಗೆ ಸವಾಲಾಗಿ ಕಂಡುಬಂದಿದೆ.
ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಈ ಕಾಯಿಲೆ ಬೆಳಕಿಗೆ ಬಂದಿದೆ. ಮಾರಣಾಂತಿಕವಾಗಿರುವ ಈ ರೋಗ ಬಂದರೆ, ಸಾವು ಖಚಿತ ಎಂದು ಸ್ಥಳೀಯರು ಆತಂಕಪಡುತ್ತಿದ್ದಾರೆ.
2015ರಲ್ಲಿ ಇದೇ ಭಾಗದಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಇದೊಂದು ಬಗೆಯ ಆಟೋಇಮ್ಯೂನ್ ಕಾಯಿಲೆ ಎಂದು ವೈದ್ಯರು ಕರೆದಿದ್ದಾರೆ. ಈ ಕಾಯಿಲೆ ಅಂಟಿದ ಮಕ್ಕಳು 18 ವರ್ಷದವರೆಗೆ ಬದುಕುವುದೇ ಹೆಚ್ಚು ಎನ್ನಲಾಗಿದೆ. ಚುಕ್ಕಿಚರ್ಮ ರೋಗಕ್ಕೆ ಔಷಧಿಯೇ ಇಲ್ಲದ ಕಾರಣ ಹಲವು ಮಕ್ಕಳು ಮೃತಪಟ್ಟಿದ್ದಾರೆ. ಕೆಲವು ಔಷಧಿಗಳ ಮೂಲಕ ಚುಕ್ಕಿಚರ್ಮ ರೋಗದ ಕೆಲವು ಲಕ್ಷಣಗಳನ್ನು ಗುಣಪಡಿಸಬಹುದಾಗಿದೆ. ಆದರೆ ಈ ಕಾಯಿಲೆ ವಾಸಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ನ ಎಲ್ಲ ಅಂಗ ಸಂಸ್ಥೆಗಳು ದೇಶದ ಭದ್ರ ಬುನಾದಿ ಗಟ್ಟಿಗೊಳಿಸಲು ಶ್ರಮಿಸಬೇಕು; ಕನ್ನಯ್ಯ ಕುಮಾರ್
ರೋಗ ಲಕ್ಷಣ : ಈ ರೋಗದಲ್ಲಿ ಮೊದಲು ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತವೆ. ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಣ್ಣು ಊದಿಕೊಳ್ಳುತ್ತದೆ. ಅನುವಂಶಿಕವಾಗಿ ಈ ಕಾಯಿಲೆ ಕೆಲವು ಕುಟುಂಬಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಹನೂರು ಸುತ್ತಲಿನ ಎಂಟು ಮಕ್ಕಳಲ್ಲಿ ಚುಕ್ಕಿ ಚರ್ಮರೋಗ ಲಕ್ಷಣ ಪತ್ತೆಯಾಗಿದ್ದು, ಬಡ ಕುಟುಂಬಗಳಿಗೆ ಶಾಪವಾಗಿ ಪರಿಣಮಿಸಿದೆ. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೇಲಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ.