ಸಮಾಜದ ಅಂಕುಡೊಂಕುಗಳನ್ನು ಸರಿಮಾಡಲು, ಸಾಮಾಜಿಕ ಸುಧಾರಣೆಗೆ ಕನಕದಾಸರು ಸರಳ ಕೀರ್ತನೆಗಳನ್ನು ರಚಿಸಿ ಸಾಮಾಜಿಕ ಅಸಮಾನತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ವರನಟ ಡಾ ರಾಜ್ ಕುಮಾರ್ ಜಿಲ್ಲಾ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಮಾಜಿಕ ಅಸಮಾನತೆ ತಾಂಡವವಾಡುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಜನರನ್ನು ಬಡಿದೆಚ್ಚರಿಸಿದ ಕನಕದಾಸರು, ಮನುಕುಲದ ಒಳಿತಿಗೆ ದುಡಿದ ಮಹಾನ್ ಸಾಧಕರಾಗಿದ್ದಾರೆ. ಸಂಗೀತ ಹಾಗೂ ನಾಟಕಕಾರರಾಗಿದ್ದ ಕನಕದಾಸರ ಚರಿತ್ರೆಯನ್ನು ಓದಿದರೆ ಸಾಲದು. ಅವರ ತತ್ವಸಿದ್ದಾಂತಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.

ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ ಮರಿಸ್ವಾಮಿ ಮಾತನಾಡಿ, “ಸಮಾಜದಲ್ಲಿ ಮೇಲುಕೀಳು, ಬಡವಬಲ್ಲಿದ, ಭೇದಭಾವಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ದಾಸರಲ್ಲಿ ಅತೀ ಶ್ರೇಷ್ಠ ದಾಸರಾಗಿದ್ದಾರೆ. 316 ಕೀರ್ತನೆಗಳನ್ನು ರಚಿಸಿದ ಕನಕದಾಸರು ಶ್ರೀಕೃಷ್ಣನ ಪರಮಭಕ್ತರಾಗಿ ಭಕ್ತಶ್ರೇಷ್ಠರೆನಿಸಿಕೊಂಡರು. ಅವರ ಅದರ್ಶ ಮೌಲ್ಯಗಳು ಇಂದಿಗೂ ದಾರಿದೀಪವಾಗಿವೆ” ಎಂದರು.
ಸಂಶೋಧಕ ಡಾ ಎಂ ಮಂಜುನಾಥ್ ಮಾತನಾಡಿ, “ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ. ವಿಜಯನಗರದ ಶ್ರೀಕೃಷ್ಣದೇವರಾಯನ ಸಾಮಂತರಾಗಿದ್ದ ಕನಕದಾಸರು ಸೈನಿಕನಾಗಿ, ದಂಡನಾಯಕನಾಗಿ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ಅಲ್ಲಿನ ಸಾವು ನೋವುಗಳನ್ನು ಕಣ್ಣಾರೆ ಕಂಡು ಬಳಿಕ ವೈರಾಗ್ಯ ತಾಳಿದರು. ವ್ಯಾಸರಾಯರ ಶಿಷ್ಯರಾಗಿದ್ದ ಕನಕದಾಸರು ಪ್ರತಿಯೊಂದು ಜೀವಿಯಲ್ಲಿಯೂ ದೇವರನ್ನು ಕಂಡರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ಸಮಾನತೆಗಾಗಿ ಅಂಬೇಡ್ಕರ್ ದಾರಿಯಲ್ಲಿ ಹೋರಾಟ ನಡೆಸಬೇಕು : ಶಾಸಕ ದರ್ಶನ್ ಪುಟ್ಟಣ್ಣಯ್ಯ
“ಕನಕದಾಸರು ಶ್ರೀಕೃಷ್ಣದೇವರಾಯ ಸೈನ್ಯದ ಜತೆಗೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರಿಗೆ 1512ರಲ್ಲಿ ದಂಡೆತ್ತಿ ಬರುವ ಮೂಲಕ ಚಾಮರಾಜನಗರಕ್ಕೂ ಬಂದಿದ್ದರೆಂಬ ಐತಿಹ್ಯವಿದೆ. ಉಮ್ಮತ್ತೂರಿನ ದೈವ ರಂಗನಾಥಸ್ವಾಮಿಯ ಬಗ್ಗೆ ಕೀರ್ತನೆಯಲ್ಲಿ ಸ್ಮರಿಸಿದ್ದಾರೆ. ಕನಕದಾಸರು ರಾಮಧ್ಯಾನ ಚರಿತೆ ಹಾಗೂ ಹರಿಭಕ್ತಿಸಾರ ಕೃತಿಗಳನ್ನು ರಚಿಸಿ ಜನರನ್ನು ಭಕ್ತಿಮಾರ್ಗದಲ್ಲಿ ನಡೆಸುವ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ” ಎಂದು ತಿಳಿಸಿದರು.
ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್, ಸಮಾಜದ ತಾಲೂಕು ಅಧ್ಯಕ್ಷ ಉಮೇಶ್, ಮಾದಾಪುರ ರವಿಕುಮಾರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತ, ಮುಖಂಡ ಬೆಳ್ಳೇಗೌಡ ಸೇರಿದಂತೆ ಹಲವರು ಇದ್ದರು.