ಇಂದಿನ ದಿನಗಳಲ್ಲಿ ಪರಭಾಷೆಗಳ ವ್ಯಾಮೋಹ ಹೆಚ್ಚಾಗಿರುವುದರಿಂದಲೇ ಕನ್ನಡ ಭಾಷೆ ಅಳಿವಿನಂಚಿಗೆ ತಲುಪುತ್ತಿರುವ ಭೀತಿ ಎದುರಾಗಿದೆ ಎಂದು ಕುವೆಂಪು ಕನ್ನಡ ವೇದಿಕೆ ಅಧ್ಯಕ್ಷ ಬ್ರಹ್ಮಾನಂದಾ ಅಭಿಪ್ರಾಯಪಟ್ಟರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಜ್ಞಾನ ಭವನದಲ್ಲಿ ನಡೆದ ಕುವೆಂಪು ಕನ್ನಡ ಸಾಹಿತ್ಯ ವೇದಿಕೆಯಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಸ್ಥೆಯ ಉದ್ಘಾಟನೆ ಹಾಗೂ ಎರಡನೇ ಕನ್ನಡ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನೆಲ, ಜಲ, ನಮ್ಮ ಭಾಷೆ, ಸಾಹಿತ್ಯದ ಬಗ್ಗೆ ಅಭಿರುಚಿ, ಅಭಿಮಾನವನ್ನು ಉಳಿಸಿ ಬೆಳೆಸಬೇಕು. ಪರಭಾಷಾ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಹಾಗಾಗಿ ವಿವಿಧ ಕನ್ನಡ ಪರ ಹೋರಾಟಗಾರರು ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು” ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಮಾತನಾಡಿ, “ಕುವೆಂಪು ಪ್ರಕೃತಿ ಆರಾಧಕರು ಹಾಗೂ ವೈಜ್ಞಾನಿಕ ವೈಚಾರಿಕತೆ ವ್ಯಕ್ತಿತ್ವ ಹೊಂದಿದ್ದರು. ಅವರ ಮಲೆಗಳಲ್ಲಿ ಮಧುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಶ್ರೀರಾಮಾಯಣ ದರ್ಶನಂ ಮಹಾ ಕಾವ್ಯಗಳು ಸೇರಿದಂತೆ ಎಲ್ಲಾ ಪ್ರಕಾರದ ಸಾಹಿತ್ಯ ಕೃಷಿ ಮಾಡಿ ರಸಋಷಿ, ರಾಷ್ಟ್ರಕವಿ ಬಿರುದು ಗಳಿಸಿದರು. ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟರು. ನಮ್ಮ ಜಿಲ್ಲೆಯಲ್ಲಿ ಪ್ರಕೃತಿ ಸಂಪನ್ನತೆ ಇದೆ. ಜನಪದ ಸಾಹಿತ್ಯ ಹಾಗೂ ಜನ ಪದಗಳ ತವರೂರು ಎನಿಸಿದೆ. ಕನ್ನಡ ಪರ ಹೋರಾಟಗಾರರ ಸೇವೆ ಅನನ್ಯವಾಗಿದೆ” ಎಂದರು.
ಡಾ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಅದೇ ಆಗಿವೆ .ಕರ್ನಾಟಕ ಏಕೀಕರಣಗೊಂಡ ನಂತರ ಕರ್ನಾಟಕ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ ಕರ್ನಾಟಕದಲ್ಲಿ ಇವತ್ತು ಕನ್ನಡ ಭಾಷೆ, ಸಂಸ್ಕೃತಿ ಸಾಕಷ್ಟು ತೊಂದರೆ, ಅಪಾಯಗಳನ್ನು ಎದುರಿಸುತ್ತಿದೆ. ಭಾಷೆಯ ಅಭಿವೃದ್ಧಿಗೆ,ಸಂಸ್ಕೃತಿ-ಸಾಹಿತ್ಯದ ರಕ್ಷಣೆಗೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಆದರೆ ಇದು ಸಾಧ್ಯವಾಗ ಬೇಕಾದರೆ ಕನ್ನಡಿಗರೆಲ್ಲರ ಪ್ರಾಮಾಣಿಕ ಕಳಕಳಿ, ಪ್ರಯತ್ನವೂ ಅಷ್ಟೇ ಅಗತ್ಯ “ಎಂದು ಹೇಳಿದರು.
`ಕನ್ನಡಿಗರು ಉದಾರಿಗಳು. ಮುಕ್ತ ಮನಸ್ಸಿನಿಂದ ಬೇರೆ ರಾಜ್ಯ ಮತ್ತು ಭಾಷೆಗಳ ಜನರು ಕರ್ನಾಟಕಕ್ಕೆ ಬಂದಾಗ ಸಹಬಾಳ್ವೆ ನಡೆಸಲು ಸಹಕಾರ ನೀಡುವ ಮನೋಭಾವದವರು.ಹಾಗೆ,ಹೊರಗಿನವರನ್ನು ತುಂಬಾ ಕಾಳಜಿ ಮತ್ತು ಮೃದು ಸ್ವಭಾವದಿಂದ ನೋಡಿಕೊಳ್ಳುವ ಈ ನಾಡಿನ ಮತ್ತು ಇಲ್ಲಿನ ಜನರ ಗುಣವೇ ಇದಕ್ಕೆ ಕಾರಣ ಎಂದು ಕೊಂಡಾಡಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಮೂಡಗೂರು ವಿರಕ್ತ ಮಠದ ಇಮ್ಮಡಿ ಉದ್ದಾನ ಶಿವಯೋಗಿ ಮಹಾ ಸ್ವಾಮಿಗಳು ಸ್ವಾಮೀಜಿಗಳು ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಡಾ ಬಾಬು ಜಗಜೀವನ ರಾಂ ಹಾಗೂ ಡಾ ರಾಜ್ ಕುಮಾರ್ ಪ್ರತಿಮೆಗಳಿಗೆ ಮೇಲ್ಚಾವಣಿ ನಿರ್ಮಾಣ ಮಾಡುವಂತೆ ಆಗ್ರಹ
ಕಾರ್ಯಕ್ರಮದಲ್ಲಿ ಸಾಹಿತಿ ಕಾಳಿಂಗ ಸ್ವಾಮಿ, ಸಿದ್ದಾರ್ಥ್,ಮಾಜಿ ಕಸಾಪ ಅಧ್ಯಕ್ಷ ಗವಿ ಸ್ವಾಮಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್ ಡಿ ಉಲ್ಲಾಸ್. ಸಮಾಜ ಸೇವಕ ಡಾ ನವೀನ್ ಮೌರ್ಯ. ಪುರಸಭೆ ಸದಸ್ಯರಾದ ನಾಗೇಶ್. ಕಾರ್ಗಳ್ಳಿ ಸುರೇಶ್. ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್. ಆರ್ ಸೋಮಣ್ಣ ಮುಖಂಡ ಮುತ್ತಣ್ಣ. ಅಬ್ದುಲ್ ಮಾಲಿಕ್ . ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇನ್ನಿತರರು ಇದ್ದರು.
