ಪಾಲಾರ್ ನದಿಯ ದಡದಲ್ಲಿರುವ ವೀರಪ್ಪನ್ ಅಡಗುದಾಣಗಳಲ್ಲಿ ಒಂದಾದ ಹಾಡಿಯಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲದೆ ಬದುಕುತ್ತಿದ್ದ ಬುಡಕಟ್ಟು ನಿವಾಸಿಗಳ ಬದುಕಿನಲ್ಲಿ ಕೊಂಚ ಮಂದಹಾಸ ಬೀರಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳ ಬಳಿಕ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಕತ್ತಲೆಯನ್ನು ನುಂಗಿ ಬೆಳಕು ಆವರಿಸಿಕೊಂಡಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಟ್ಟ ಕಡೆಯ ಗ್ರಾಮ ಪಾಲಾರ್. ಈ ಸೋಲಿಗರ ಹಾಡಿಗೆ ಈವರೆಗೂ ವಿದ್ಯುತ್ ಸಂಪರ್ಕವಿಲ್ಲದೆ ಸ್ಥಳೀಯ ಬುಡಕಟ್ಟು ನಿವಾಸಿಗಳು ಅಂಧಕಾರದಲ್ಲಿ ಮುಳುಗಿದ್ದರು. ಮಹದೇಶ್ವರ ಬೆಟ್ಟದ ಅರಣ್ಯದೊಳಗೆ 75ಕ್ಕೂ ಹೆಚ್ಚು ಸೋಲಿಗರು ಇರುವ ಈ ಹಾಡಿಗೆ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ. ಹಲವು ದಶಕಗಳಿಂದ ಸೀಮೆಎಣ್ಣೆ ದೀಪಗಳು ಮತ್ತು ಟಾರ್ಚ್ ದೀಪದದೊಂದಿಗೆ ಕತ್ತಲೆಯಲ್ಲಿ ವಾಸಿಸುತ್ತಿದ್ದ 75 ಮನೆಗಳನ್ನು ಹೊಂದಿರುವ ಬುಡಕಟ್ಟು ಸಮುದಾಯ ಕೊನೆಗೂ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ.
ಪಾಲಾರ್ ನದಿಯ ದಡದಲ್ಲಿರುವ ಈ ಹಾಡಿಗೆ, ಆನೆಗಳು, ಸಾಂಬಾರ್ ಜಿಂಕೆ(ಕಡವೆ) ಮತ್ತು ಇತರ ಪ್ರಾಣಿಗಳ ಹೆಚ್ಚಿನ ಸಂಚಾರ ಇರುವುದರಿಂದ ವನ್ಯಜೀವಿಗಳಿಗೆ ಅಪಾಯವಾಗಬಹುದೆಂಬ ಭಯದಿಂದ ವಿದ್ಯುತ್ ಕಂಬಗಳನ್ನು ನಿರ್ಮಿಸಲು ಅಥವಾ ವಿದ್ಯುತ್ ತಂತಿಗಳನ್ನು ತರಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಷ್ಟು ವರ್ಷಗಳ ಕಾಲ ವಿದ್ಯುತ್ ಸಂಪರ್ಕ ಲಭ್ಯವಿರಲಿಲ್ಲ. ಸೇಲಂ ಜಿಲ್ಲೆಯ ಹತ್ತಿರದ ಗೋವಿಂದಪಾಡಿ ಮತ್ತು ಕೊಲತ್ತೂರ್ ಗ್ರಾಮದಲ್ಲಿ ಅಥವಾ ವೀರಪ್ಪನ್ ಗ್ರಾಮವಾದ ಗೋಪಿನಾಥಂನಲ್ಲಿ ವಾಸಿಸುತ್ತಿದ್ದ ಸೋಲಿಗರ ಕುಟುಂಬಗಳು ಬ್ಲಾಕ್ ಮಾರ್ಕೆಟ್ನಲ್ಲಿ ಸೀಮೆಎಣ್ಣೆ ಖರೀದಿಸಬೇಕಾಗಿತ್ತು. ಅದಕ್ಕೆ ಹೆಚ್ಚಿನ ಹಣವನ್ನೂ ತೆತ್ತಬೇಕಾಗಿತ್ತು.

ಸ್ಥಳೀಯ ನಿವಾಸಿ ಅಂಜನಮ್ಮ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಶಿವರಾತ್ರಿ ಶುಭ ಗಳಿಗೆಯಲ್ಲಿ ಮಾದಪ್ಪ ನಮ್ಮ ಮೇಲೆ ದಯೆ ತೋರಿಸಿದ್ದಾರೆ. ಹೀಗಾಗಿ ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆತಿದೆ. ನಮಗೆ ಕರೆಂಟ್ ಬಂದಿದೆ. ನಾವು ಇನ್ಮುಂದೆ ಕತ್ತಿಲಿನಲ್ಲಿ ಅಡಗಿಕೊಳ್ಳದೆ, ತಡಕಾಡಿಕೊಂಡು ಓಡಾಡದೆ ನಿರ್ಭೀತಿಯಿಂದ ಮನೆಯೊಳಗೆ ತಿರುಗಬಹುದು. ಮುಂಜಾನೆ ಕೂಲಿಗೆ ಹೋಗುವಷ್ಟರಲ್ಲಿ ರಾತ್ರಿ ವೇಳೆಯೇ ಮನೆ ಕೆಲಸ ಮಾಡಿಕೊಳ್ಳಬಹುದು” ಎಂದು ಮುಗ್ಧತೆ ಹೊರಹಾಕಿದರು.

“ಇನ್ಮುಂದೆ ನಮ್ಮ ಮಕ್ಕಳು ಮತ್ತು ಗ್ರಾಮಸ್ಥರೂ ಕೂಡಾ ಸಂತೋಷವಾಗಿರುತ್ತಾರೆ. ವಿದ್ಯುತ್ ಬಲ್ಬ್ಗಳು ಯಾವಾಗ ಬೇಕಾದರೂ ನಮಗೆ ಬೆಳಕು ನೀಡುತ್ತವೆ. ನಾವಿನ್ನು ಸೀಮೆಎಣ್ಣೆ ಪುಟ್ಟಿಗಳಿಗೆ ವಿದಾಯ ಹೇಳಬಹುದು” ಎಂದು ಬುಡಕಟ್ಟು ಜನಾಂಗದ ಮಾದಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಕೃತಕ ಬೆಳಕಿನ ಕಿರಣಗಳನ್ನು ನೋಡಿದ ಮಾದಮ್ಮ ಅವರಿಗೆ ಬದುಕಿನ ಎಲ್ಲವೂ ಸಿಕ್ಕಂತಾಗಿದೆ. ಅದೆಷ್ಟು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕವಾಗಿ ಎಲ್ಲರಂತೆ ಬದುಕಲು ಬೇಕಾಗಿರುವ ಯಾವುದೇ ರೀತಿಯ ಮೂಲಸೌಕರ್ಯಗಳಿಲ್ಲ. ಒಳ್ಳೆಯ ರಸ್ತೆಗಳಿಲ್ಲ. ಕುಡಿಯುವ ನೀರಿರುವುದಿಲ್ಲ. ಆಧುನಿಕ ಜೀವನ ಶೈಲಿಯ ಬದುಕು ಇಲ್ಲ. ಇರಲು ಸರಿಯಾದ ಸೂರೂ ಕೂಡಾ ಇರುವುದಿಲ್ಲ. ಸಾರಿಗೆ ವ್ಯವಸ್ತೆ ಇಲ್ಲ. ನಮ್ಮ ರಾಜ್ಯ ಸರ್ಕಾರ ಬಡವರ ಪರವಾಗಿ ಐದು ಗ್ಯಾರಂಟಿಗಳನ್ನು ನೀಡಿದೆ. ಆದರೂ ಎರಡು ವರ್ಷಗಳಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರದೆ ದುಪ್ಪಟ್ಟು ಬೆಲೆ ತೆತ್ತು ಸೀಮೆಎಣ್ಣೆ ತಂದರೂ ಮಿಣುಕು ದೀಪದ ಕೆಳಗೆ ಬದುಕು ಸಾಗಿಸುತ್ತಿದ್ದರು. ಈಗಲೂ ಎಷ್ಟೋ ಹಾಡಿಗಳ ಪರಿಸ್ಥಿತಿ ಹೀಗೆಯೇ ಇದೆ.

ನಾಗಯ್ಯ ಮಾತನಾಡಿ, “ರಾತ್ರಿ ವೇಳೆ ಕಣ್ಣಿದ್ದರೂ ಕುರುಡರಂತೆ ಬದುಕುತ್ತಿದ್ದ ನಮಗೆ ವಿದ್ಯುತ್ ಪೂರೈಕೆ ಮಾಡಿರುವುದು ತುಂಬಾ ಸಂತೋಷದಾಯಕವಾಗಿದೆ. 75 ಕುಟುಂಬಗಳಿದ್ದರೂ ರಾತ್ರಿಯಾದರೆ ಒಬ್ಬರ ಮುಖ ಒಬ್ಬರಿಗೆ ಕಾಣದೆ, ನೀರವ ಮೌನ ಆವರಿಸಿರುವಂತೆ ಕುಳಿತಿರುತ್ತಿದ್ದೆವು. ಹಾಡಿಯೆಲ್ಲ ಬಿಕೋ ಎನ್ನುತ್ತಿತ್ತು. ಈಗ ನಮ್ಮ ಹಾಡಿಗೆ ಕಳೆಬಂದಿದೆ. ದಟ್ಟ ಅರಣ್ಯದ ನಡುವೆ ಪ್ರಜ್ವಲಿಸುವ ವಿದ್ಯುತ್ ದೀಪದ ಕೆಳಗೆ ಕುಳಿತುಕೊಳ್ಳುವುದು, ಮಾತನಾಡುವುದು, ಕೆಲಸ ಮಾಡಿಕೊಳ್ಳುವುದು ಇದೆಲ್ಲಾ ಒಂಥರಾ ಸಂಭ್ರಮ ಎನಿಸುತ್ತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

“ಅನೇಕ ಬುಡಕಟ್ಟು ಗ್ರಾಮಗಳ ಸಂಬಂಧಿಕರು ಮತ್ತು ಸ್ನೇಹಿತರೆಲ್ಲರೂ ಸೇರಿ ಹಾಡಿಯಲ್ಲಿ ಸಂಭ್ರಮ ಆಚರಿಸಲು ಒಟ್ಟುಗೂಡುತ್ತಿದ್ದೇವೆ. ಕತ್ತಲಿನಲ್ಲಿದ್ದ ನಮ್ಮ ಬದುಕಿಗೆ ಒಂಚೂರು ಬೆಳಕು ಬಂದಿದೆ. ಅದೇ ರೀತಿ ಪ್ರತಿದಿನ ನಮ್ಮ ಹಾಡಿಗೆ ಬರುವ ಆನೆಗಳಿಂದ ರಕ್ಷಿಸಿಕೊಳ್ಳಲು ಬೀದಿದೀಪಗಳನ್ನು ಅಳವಡಿಸಬೇಕು. ಹೀಗೆಯೇ ಇತರ ಮೂಲಸೌಕರ್ಯಗಳನ್ನೂ ಒದಗಿಸಬೇಕು. ನಾವೂ ಕೂಡಾ ಸಾಮಾಜಿಕವಾಗಿ ಮನುಷ್ಯರಂತೆ ಬದುಕಲು ಹಾಗೂ ಆಧುನಿಕ ಜೀವನ ಸಾಗಿಸಲು ಬೇಕಾಗಿರುವ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಮನವಿ ಮಾಡಿದರು.

“ಮೊದಲೆಲ್ಲ ವಿದ್ಯುತ್ ಪೂರೈಕೆಗೆ ಒತ್ತಾಯಿಸಿದಾಗಲೆಲ್ಲ ಅರಣ್ಯವಿದೆ, ಪ್ರಾಣಿ ಪಕ್ಷಿಗಳಿವೆ ಅವುಗಳಿಗೆ ತೊಂದರೆಯಾಗುತ್ತದೆಂಬ ನೆಪವೊಡ್ಡುತ್ತಿದ್ದ ಅರಣ್ಯ ಇಲಾಖೆ ನಮ್ಮನ್ನೂ ಪ್ರಾಣಿಗಳಂತೆಯೇ ಕಂಡು ಕತ್ತಲಲ್ಲಿ ಬದುಕುವಂತೆ ಮಾಡಿತ್ತು. ನಾವೂ ಕೂಡಾ ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಅಂಧಕಾರದಲ್ಲಿದ್ದೆವು. ಇಡೀ ದಿನ ಕೆಲಸಕ್ಕೆ ಹೋಗುತ್ತಿದ್ದೆವು, ರಾತ್ರಿಯಾದರೆ ಬಂದು ಕತ್ತಲಲ್ಲಿ ಒಂದುಕಡೆ ಕುಳಿತಿರುತ್ತಿದ್ದೆವು. ಯಾವುದೇ ರೀತಿಯ ಹಾಸ್ಯ, ತಮಾಷೆ, ಮಕ್ಕಳ ಆಟ, ನಮ್ಮಗಳ ಹರಟೆ ಯಾವುದಕ್ಕೂ ಆಸ್ಪದವಿರಲಿಲ್ಲ. ಒಂಥರಾ ಮನಸಿನ ತಲ್ಲಣಗಳನ್ನು ಮನದಲ್ಲೇ ಇಟ್ಟುಕೊಂಡು ಮೂಕರಂತಿರುತ್ತಿದ್ದೆವು. ಯಾವುದೇ ರೀತಿಯ ಮನರಂಜನೆ ಇರುತ್ತಿರಲಿಲ್ಲ. ಇದೀಗ ವಿದ್ಯುತ್ ಬಂದಿದೆ, ಕೊನೇಪಕ್ಷ ನಮ್ಮ ಮಕ್ಕಳ ಆಟಗಳನ್ನಾದರೂ ನೋಡಿ ಸಂತೋಷ ಪಡುತ್ತೇವೆ, ನಗುತ್ತೇವೆ. ಹಾಡಿಜನರೆಲ್ಲ ಒಟ್ಟಿಗೆ ಕೂತು ಸ್ವಲ್ಪ ಸಮಯ ಕಳೆಯಬಹುದು” ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ಖಾಸಗಿ ಬಸ್ಗಳದ್ದೇ ಕಾರುಬಾರು: ವಿಟ್ಲದಲ್ಲಿ ಮರೀಚಿಕೆಯಾಗಿಯೇ ಉಳಿದ ಸರ್ಕಾರಿ ಬಸ್ ಸೇವೆ!
“ಈ ಪ್ರದೇಶದಲ್ಲಿದ್ದ 22 ಬುಡಕಟ್ಟು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದ್ದವು. ವಿದ್ಯುತ್ ಸರಬರಾಜು, ರಸ್ತೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳಿಲ್ಲ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ(ಸೆಸ್ಕಾಮ್) ಕಳೆದ ವರ್ಷ ಡಿಸೆಂಬರ್ನಲ್ಲಿ ₹41 ಕೋಟಿ ವೆಚ್ಚದಲ್ಲಿ ವಿದ್ಯುತ್ ಸರಬರಾಜು ಒದಗಿಸಲು ಯೋಜನೆ ಕೈಗೆತ್ತಿಕೊಂಡಿತು. ಎಲ್ಲ 75 ಹಳ್ಳಿಗಳಿಗೆ ಭೂಗತ(ಅಂಡರ್ಗ್ರೌಂಡ್) ವಿದ್ಯುತ್ ಕೇಬಲ್ಗಳನ್ನು ಅಳವಡಿಸಲು ಅರಣ್ಯ ಅಧಿಕಾರಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಸೆಸ್ಕಾಮ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಜಿ ಶೀಲಾ ಹೇಳಿದ್ದಾರೆ.