ಬಹುಜನರ ಅಸ್ಮಿತೆಯ ಸಂಭ್ರಮವೇ ಮಹಿಷಾ ಬೌದ್ಧ ದಸರಾ ಎಂದು ಸಾಮಾಜಿಕ ಚಿಂತಕ ಡಾ. ಕೃಷ್ಣಮೂರ್ತಿ ಚಮರಂ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕಳೆದ 50 ವರ್ಷಗಳ ಹಿಂದೆ ವಿಚಾರವಾದಿ ಮಂಟೆಲಿಂಗಯ್ಯ ಅವರು ಮಹಿಷಾ ದಸರಾವನ್ನು ಪ್ರಾರಂಭಿಸಿದರು. ಅವಾಗಿನಿಂದಲೂ ಆ ಪರಂಪರೆಯನ್ನು ಮುಂದುವರೆಸಲಾಗುತ್ತಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಿಷ ದಸರಾವನ್ನು ವಿವಾದಗೊಳಿಸಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಹಿಷ ಮತ್ತು ಬುದ್ಧನ ವಿಚಾರಗಳು ಕಟ್ಟುಕಥೆ ಎಂದು ಮನುವಾದಿಗಳು ಬಿಂಬಿಸಲು ಹೊರಟ್ಟಿದ್ದಾರೆ. ಆದರೆ, ಮಹಿಷನನ್ನು ರಾಕ್ಷಸ, ದುಷ್ಟನೆಂದು ಮನುವಾದಿಗಳು ಕಟ್ಟುಕಥೆ ಎಣೆದಿದ್ದಾರೆ. ಮಹಿಷನ ಮಹಿಷ ಮಂಡಲವು ಮೈಸೂರು ಆಗಿದೆ. ಮಹಿಷಾ ಮಂಡಲ, ಉದಕ ಮಂಡಲ ಮತ್ತು ಮೌರ್ಯ ಸಾಮ್ರಾಜ್ಯಕ್ಕೆ ಒಂದಕ್ಕೊಂದು ಪೂರಕವಾಗಿವೆ” ಎಂದು ವಿವರಿಸಿದರು.
“ಮಹಿಷ ಆದಿದೊರೆ, ಕ್ರಿಸ್ತ ಪೂರ್ವದಲ್ಲೇ ಮಹಿಷ ಮಂಡಲವನ್ನು ಆಳ್ವಿಕೆ ನಡೆಸಿದ್ದರು. ಅವರ ಆಳ್ವಿಕೆಯ ಕುರುಹಾಗಿ ಮೈಸೂರು ಆಗಿದೆ. ಹಾಗಾಗಿ, ಮಹಿಷನ ವಿಚಾರಗಳು ಕಟ್ಟುಕಥೆಯಲ್ಲ ಇತಿಹಾಸ” ಎಂದು ಹೇಳಿದರು.
“ಅಂಬೇಡ್ಕರ್ ಹೇಳಿದಂತೆ ಭಾರತದ ಇತಿಹಾಸವು ಬ್ರಾಹ್ಮಣ್ಯಮತ್ತು ಬೌದತ್ವದ ನಡುವಿನ ಸಂಘರ್ಷವಾಗಿದೆ. ವೈದಿಕರು ಉದ್ದೇಶ ಪೂರ್ವಕವಾಗಿ ಇಲ್ಲಿನ ಮೂಲನಿವಾಸಿಗಳಿಗೆ ಕೋರೆ ಹಲ್ಲುಗಳನ್ನು ಹಾಕಿ ರಾಕ್ಷಸರನ್ನಾಗಿ ಮಾಡಿದ್ದಾರೆ. ದುಷ್ಟರನ್ನಾಗಿ ಚಿತ್ರಿಸಿದ್ದಾರೆ. ಮೂಲನಿವಾಸಿಗಳು ನಿಜವಾದ ಪ್ರಕೃತಿ ಆರಾಧಕರು, ಮೂಢನಂಬಿಕೆಗಳನ್ನು ನಂಬದವರು. ಆರ್ಯರ ಹೋಮ, ಹವನ, ಮೂಢನಂಬಿಕೆಗಳನ್ನು ವಿರೋಧಿಸಿದ್ದಕ್ಕಾಗಿ ಮೂಲನಿವಾಸಿಗಳನ್ನು ಖಳನಾಯಕರನ್ನಾಗಿ ಮಾಡಿದ್ದಾರೆ. ಹಾಗಾಗಿ, ಸಮಸಮಾಜದ ನಿರ್ಮಾಣಕ್ಕಾಗಿ ಮೂಲನಿವಾಸಿಗಳ ಅಸ್ಮಿತೆಯನ್ನ ಹುಡುಕುವ ಪ್ರಯತ್ನ ನಡೆದಿದೆ” ಎಂದು ತಿಳಿಸಿದರು.
ಸುಭಾಷ್ ಮಾಡ್ರಹಳ್ಳಿ ಮಾಡನಾಡಿ, “ಮಹಿಷ ದಸರಾ ಒಂದು ಸಾಂಸ್ಕೃತಿಕ ಮಹೋತ್ಸವ. ನಮ್ಮ ಪೂರ್ವಜರ ಬೌಧ್ದ ಪರಂಪರೆಯನ್ನು ನಾಡಿನಲ್ಲಿ ಬಿತ್ತುವಂತಹ ಮಹತ್ಕಾರ್ಯದ ಭಾಗವಾಗಿದೆ. ಸಾಮ್ರಾಟ್ ಅಶೋಕನ ಕಾಲದ ವಿಜಯ ದಶಮಿ ಆಚರಣೆಯೇ ದಸರಾ. ಅಶೋಕ ಶಸ್ತ್ರ ತ್ಯಾಗಮಾಡಿದ ಸತ್ ಸಂಪ್ರದಾಯವೇ ವಿಜಯ ದಶಮಿ. ಹಾಗಾಗಿ ದೇಶದಲ್ಲಿ ದಸರಾ ಆಚರಣೆಗೆ ಮುನ್ನುಡಿ ಬರೆದವರು ನಮ್ಮ ಪೂರ್ವಜರು. ಶಾಂತಿ, ಕರುಣೆ ಮತ್ತು ಸಹನೆ ನಮ್ಮ ಧ್ಯೇಯವಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಲಕ್ಕೂರು ,ಅಪುರಾ , ಶಿವಲಿಂಗು ಇದ್ದರು.