ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿ ಸೋಮವಾರದಂದು ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ನಡೆಯಿತು. ಇದೇ ಸಂದರ್ಭದಲ್ಲಿ 93 ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಆಶೀರ್ವಚನಗಳೊಂದಿಗೆ ಉಚಿತ ಸಾಮೂಹಿಕ ವಿವಾಹವು ಜರುಗಿತು. ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರ, ಸೀರೆ, ರವಿಕೆ ವಿತರಿಸಲಾಗಿತ್ತಲ್ಲದೇ, ವರನಿಗೆ ಪಂಚೆ, ಷರ್ಟ್, ಟವಲ್ ಹಾಗೂ ಪೇಟವನ್ನು ಉಚಿತವಾಗಿ ನೀಡಲಾಗಿತ್ತು. ವಿವಾಹ ಮಹೋತ್ಸವದಲ್ಲಿ 16 ಅಂತರ್ಜಾತಿ ವಿವಾಹ ಹಾಗೂ ವಿಶೇಷಚೇತನರ ಒಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿಶೇಷವಾಗಿತ್ತು.
ಸುತ್ತೂರು ದೇಶಿಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ ” ವೈವಾಹಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಪರಸ್ಪರ ಸಮಾನವಾಗಿ ಹಂಚಿಕೊಳ್ಳಬೇಕು. ಜೀವನದಲ್ಲಿ ಏನೇ ಕಷ್ಟ ಬಂದರು ಎದುರಿಸುವ ಶಕ್ತಿ ನಿಮ್ಮದಾಗಲಿ. ಪರಸ್ಪರ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕಷ್ಟ ಸುಖ ಎರಡರಲ್ಲೂ ಹಿಗ್ಗದೆ ಕುಗ್ಗದೆ ಸಹಬಾಳ್ವೆ ನಡೆಸುವಂತಾಗಲಿ. ದಾಂಪತ್ಯ ಜೀವನ ಜೀವಗಳ ಬೆಸುಗೆ. ಇಬ್ಬರು ಅರ್ಥ ಮಾಡಿಕೊಂಡರೆ ಜೀವನ ಸುಖಮಯ. ಇದರ ನಡುವೇ ತಾಪತ್ರಯಗಳು ಇದ್ದಿದ್ದೆ. ದಂಪತಿಗಳು ಕೂಡಿ ಎದುರಿಸಬೇಕು ” ಎಂದು ಆಶೀರ್ವಚನ ನೀಡಿದರು.

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ” ಮಲೆ ಮಹದೇಶ್ವರ ಬೆಟ್ಟವು ಧಾರ್ಮಿಕ ಯಾತ್ರ ಸ್ಥಳವಾಗಿದ್ದು, ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಇಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ. ಮದುವೆ ಎನ್ನುವುದು ಜೀವನದ ಪವಿತ್ರ ಬಂಧವಾಗಿದ್ದು, ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ ಇದ್ದೆ ಇರುತ್ತದೆ. ಆದರೆ, ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುವುದೇ ನಿಜವಾದ ಬದುಕು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವುದು ವ್ಯರ್ಥ. ಸರಳವಾಗಿ ಸಾಮೂಹಿಕ ವಿವಾಹವಾಗುವುದು ನಮ್ಮ ಮುಂದಿನ ಜೀವನಕ್ಕೆ ಸಹಯವಾಗುತ್ತದೆ ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಶಿಕಾರಿಪುರ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯ ಜನರ ಬದುಕು ಅತಂತ್ರ
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ. ಟಿ. ಕವಿತಾ, ಸಿಇಓ ಮೋನಾ ರೋತ್, ಮಹದೇಶ್ವರ ಬೆಟ್ಟದ ಕಾರ್ಯದರ್ಶಿ ಎ. ಇ. ರಘು, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್. ವಿ. ಚಂದ್ರು, ಹನೂರು ತಹಶೀಲ್ದಾರ್ ಚೈತ್ರ, ಡಿವೈಎಸ್ಪಿ ಧರ್ಮೇಂದ್ರ, ಮೆಟ್ಟೂರು ಶಾಸಕ ಸದಾಶಿವ, ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರ್ಚನಾ, ಉಪ ಕಾರ್ಯದರ್ಶಿ ಚಂದ್ರಶೇಖರ್, ಚಾಮರಾಜನಗರ ಜಿಲ್ಲಾ ಕೆಎಸ್ಆರ್ಟಿಸಿ ಡಿಸಿ ಅಶೋಕ್ ಕುಮಾರ್, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರುಗಳಾದ ಭಾಗ್ಯಮ್ಮ, ಮಹದೇವಪ್ಪ, ಮರಿಸ್ವಾಮಿ, ಆರ್. ಎಸ್ ಕುಮಾರ, ವಿಜಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಧಿಕಾರದ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.