ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ವಿ ವಿಧ ಇಲಾಖೆಗಳು ಹಾಗೂ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೌಲಭ್ಯಗಳ ವಿತರಣೆಯಲ್ಲಿ ಫಲಾನುಭವಿಗಳ ಆಯ್ಕೆ ಪಾರದರ್ಶಕತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯ ಶೇ. 24.10ರ ಕಾರ್ಯಕ್ರಮಗಳಡಿ ನಗರ, ಸ್ಥಳೀಯ ಸಂಸ್ಥೆಗಳು ಮಹಿಳೆಯರಿಗೆ ಹೊಲಿಗೆಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ವಿವಿಧ ಸಮುದಾಯ ಭವನಗಳಿಗೆ ಕುರ್ಚಿ, ಪಾತ್ರೆಗಳು ಸೇರಿದಂತೆ ಇನ್ನಿತರೆ ಪರಿಕರಗಳನ್ನು ವಿತರಿಸುತ್ತಿವೆ. ಈ ಸಂಬಂಧ ಕ್ರಿಯಾಯೋಜನೆ ಅನುಮೋದನೆ ಆಗಿದ್ದರೂ ಕೆಲವೆಡೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಸೌಲಭ್ಯ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಇಂತಹ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೊಳ್ಳೇಗಾಲದಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ನೀಡದಿರುವ ದೂರುಗಳು ಬಂದಿವೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಕ್ರಿಯಾಯೋಜನೆ ಅಂತಿಮಗೊಳಿಸಿ, ಶೀಘ್ರವಾಗಿ ಸೌಲಭ್ಯ ವಿತರಿಸಲು ಮುಂದಾಗಬೇಕು. ಸೌಲಭ್ಯಗಳ ವಿತರಣೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರದ ಹಾಗೆ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸುವ ಕೆಲಸವಾಗಬೇಕು. ಜಿಲ್ಲಾ ನಗರಾಭಿವೃದ್ಧಿ ಕೋಶ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಎಂದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ಇತರೆ ಯೋಜನೆಗಳಿಗೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿದ್ದು, ನಿಗದಿತ ಕಾಲಮಿತಿಯಲ್ಲಿ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಬೇಕು. ಯೋಜನೆಗಳ ಬಗ್ಗೆ ಆಯಾ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತಂದು ಸೌಲಭ್ಯ ವಿತರಣೆಯನ್ನು ವೇಗಗೊಳಿಸಿ ಒಂದು ತಿಂಗಳೊಳಗೆ ಕ್ರಮ ವಹಿಸಬೇಕು. ತೋಟಗಾರಿಕೆ ಇಲಾಖೆಯು ನರೇಗಾ ಯೋಜನೆಯ ಸಹಯೋಗದಲ್ಲಿ ಆಯಾ ಪ್ರದೇಶದ ಮಣ್ಣಿನ ಫಲವತ್ತತೆಯನ್ನು ಆಧರಿಸಿ ಹೆಚ್ಚು ಬೇಡಿಕೆಯುಳ್ಳ ಡ್ರ್ಯಾಗನ್ ಪ್ರೂಟ್ ಬೆಳೆಯಲು ಅದ್ಯತೆ ನೀಡಬೇಕು. ಇತರೆ ಜಿಲ್ಲೆಗಳ ಪ್ರಗತಿಪರ ಅನುಷ್ಠಾನ ಕಾರ್ಯಕ್ರಮಗಳನ್ನು ನಾವು ಮಾದರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸ್ಥಳೀಯ ಕಲಾವಿದರಿಗೆ ವಿವಿಧ ಕಲಾಪ್ರಕಾರಗಳ ಕೌಶಲ್ಯಯುತ ತರಬೇತಿ ನೀಡಲು ಯೋಜನೆ ರೂಪಿಸಬೇಕು. ಇಲ್ಲಿನ ಕಲಾವಿದರು ದಸರಾ, ಹಂಪಿ ಉತ್ಸವ ಸೇರಿದಂತೆ ರಾಜ್ಯದ ಇತರೆ ಪ್ರಮುಖ ಉತ್ಸವಗಳಲ್ಲಿ ಜಿಲ್ಲೆಯ ಕಲಾಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ನೀಡಲು ಅನುವು ಮಾಡಿಕೊಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿದ್ದು, ಹೊಗೇನಕಲ್, ಭರಚುಕ್ಕಿ ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಸ್ಥಳದ ವಿವರ ನೀಡಲು ಕೌಶಲ್ಯಾಭಿವೃದ್ಧಿ ತರಬೇತಿ ಹೊಂದಿದ ಗೈಡ್ಗಳನ್ನು ನಿಯೋಜಿಸಬೇಕು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಹೊರವಲಯದಲ್ಲಿರುವ ವೈದ್ಯಕೀಯ (ಸಿಮ್ಸ್) ಆಸ್ಪತ್ರೆಯ ರಸ್ತೆಯಲ್ಲಿ ಚಾಮರಾಜನಗರ ಪಟ್ಟಣದಿಂದ ಸಾರ್ವಜನಿಕರು ಹಾಗೂ ಬಸ್ಗಳು ಸೇರಿದಂತೆ ಇತರೆ ವಾಹನಗಳ ಓಡಾಟ ಅಧಿಕವಾಗುತ್ತಿದೆ. ಕಿರಿದಾಗಿರುವ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೂ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ರಸ್ತೆ ಒತ್ತುವರಿಯಾಗುವ ಸಂಭವವಿದೆ. ಭವಿಷ್ಯದ ಹಿತದೃಷ್ಠಿಯಿಂದ ಸಿಮ್ಸ್ ಆಸ್ಪತ್ರೆವರೆಗೆ ಜೋಡಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವಶ್ಯ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಉಳಿದಂತೆ ಸಹಕಾರ ಇಲಾಖೆ, ಆಹಾರ, ಶಿಕ್ಷಣ, ಕೈಮಗ್ಗೆ ಮತ್ತು ಜವಳಿ, ರೇಷ್ಮೆ, ಕಾರ್ಮಿಕ, ಸಣ್ಣ ನೀರಾವರಿ, ಮಹಿಳೆಯರ ಮತ್ತು ಮಕ್ಕಳ ಇಲಾಖೆ, ಗ್ರಾಮೀಣ ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಪ್ರಸ್ತುತ 2025-26ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಮೊದಲ ಕಂತಿನ ಅನುದಾನದಲ್ಲಿ ಸೌಲಭ್ಯಗಳ ವಿತರಣೆ ಸಮರ್ಪಕವಾಗಿ ಆಗಬೇಕು. ಅನುದಾನ ಬಿಡುಗಡೆಯಾಗದ ಇಲಾಖೆಗಳು ಕಾರ್ಯಕ್ರಮಗಳ ಕ್ರಿಯಾಯೋಜನೆ ತಯಾರಿಸಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಭ್ರಮದ ಜನಸ್ವಾತಂತ್ರ್ಯೋತ್ಸವ; ಸಂವಿಧಾನ ಸಂರಕ್ಷಣಾ ಪಡೆಗೆ ಚಾಲನೆ
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿಂದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ನಗರಸಭೆ ಪೌರಾಯುಕ್ತ ರಾಮದಾಸ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.
https://shorturl.fm/nNoWA