ತನ್ನ ಪತ್ನಿಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಕಳಿಸಿದ್ದನ್ನು ಕಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಸಾಲ ವಸೂಲಿ ಏಜೆಂಟ್ವೊಬ್ಬ ಮಹಿಳೆಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಆಕೆಯ ಪತಿಗೆ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಚನ್ನಪಟ್ಟಣದ ಶೆಟ್ಟಿಹಳ್ಳಿ ನಿವಾಸಿ ಪ್ರಕಾಶ್ (42) ಮೃತ ದುರ್ದೈವಿ. ಇವರು ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿರುವ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ತಮ್ಮ ಹೆಂಡತಿಯ ಹೆಸರಿನಲ್ಲಿ ಸಾಲ ಪಡೆದಿದ್ದರು. ಸಾಲ ಪಡೆಯುವ ಸಲುವಾಗಿ ಸಂಸ್ಥೆಯ ಸಾಲ ವಸೂಲಾತಿ ಏಜೆಂಟ್ ರಾಜು ಎಂಬುವವರಿಗೆ ತಮ್ಮ ಹೆಂಡತಿಯ ಫೋಟೋ, ಮೊಬೈಲ್ ಸಂಖ್ಯೆ ಸೇರಿದಂತೆ ಮುಂತಾದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮಂಡ್ಯದ ಮಳವಳ್ಳಿಯ ಸಾಲ ವಸೂಲಾತಿ ಏಜೆಂಟ್ ಆಗಿರುವ ಆರೋಪಿ ಕೆಂಪರಾಜು ಸಾಲ ಮರುಪಾವತಿ ವಿಚಾರವಾಗಿ ಮಹಿಳೆಗೆ ಕರೆ ಮಾಡಿ ಸ್ನೇಹ ಬೆಳೆಸಲು ಪ್ರಯತ್ನ ಪಡುತ್ತಿದ್ದನು. ಇದೇ ವೇಳೆ, ಕರೆ ಮಾಡಿ ನಗ್ನ ಛಾಯಾಚಿತ್ರಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾನೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಮಹಿಳೆ ನಿರಾಕರಿಸಿದ ಕಾರಣ ಆಕೆಯ ಫೋಟೋಗಳನ್ನು ಅಶ್ಲೀಲ ಫೋಟೋಗಳಾಗಿ ಸೃಷ್ಟಿಸಿ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಮಹಿಳೆ ಇದಕ್ಕೂ ಮಣಿಯದೇ ಇದ್ದಾಗ ಆಕೆಯ ನಕಲಿ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಿ ಹಣ ಮತ್ತು ಚಿನ್ನಾಭರಣಕ್ಕೆ ಬೇಡಿಕೆ ಇಡುತ್ತಿದ್ದನು. ಅಲ್ಲದೇ ಅದನ್ನು ಕುಟುಂಬದವರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಬ್ಬೆದ್ದು ನಾರುತ್ತಿರುವ ಪಾರಂಪರಿಕ ರಸೆಲ್ ಮಾರುಕಟ್ಟೆ: ಕ್ರಮ ಕೈಗೊಳ್ಳದ ಬಿಬಿಎಂಪಿ
“ಆಗಸ್ಟ್ 30 ರಂದು ಕೆಂಪರಾಜು ತನ್ನ ಅಶ್ಲೀಲ ಫೋಟೋಗಳನ್ನು ಮಾರ್ಫ್ ಮಾಡಿ ಪತಿಗೆ ಕಳುಹಿಸಿದ್ದನು. ಇದರಿಂದ ಮನನೊಂದ ಪ್ರಕಾಶ್ ಶನಿವಾರ ನಸುಕಿನಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ದೂರಿನ ಆಧಾರದ ಮೇಲೆ ಕೆಂಪರಾಜು ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಐಟಿ ಕಾಯ್ದೆ ಸೇರಿದಂತೆ ಇತರೆ ಆರೋಪಗಳನ್ನು ದಾಖಲಿಸಲಾಗಿದೆ. ಆತನನ್ನು ಸೆರೆ ಹಿಡಿಯುವ ಪ್ರಯತ್ನ ಮುಂದುವರಿದಿದೆ” ಎಂದು ಚನ್ನಪಟ್ಟಣ ಟೌನ್ ಪೊಲೀಸರು ತಿಳಿಸಿದ್ದಾರೆ.